ಅನ್ಯೋನ್ಯತೆಯಿಂದ ಬದುಕಲು ನಟ ಪ್ರಥಮ್ ಮನವಿ
Team Udayavani, Jan 8, 2018, 6:10 AM IST
ಮಂಗಳೂರು: ಸಣ್ಣ ಪುಟ್ಟ ವಿಚಾರಗಳನ್ನೇ ಹಿಡಿದುಕೊಂಡು ಅಮಾಯಕರ ಪ್ರಾಣ ತೆಗೆಯುವ ಕೆಲಸಕ್ಕೆ ಯಾರೂ ಹೋಗಬೇಡಿ. ಹಿಂದೂ-ಮುಸಲ್ಮಾನರೆಲ್ಲರೂ ನಮ್ಮವರೇ ಎಂಬ ಭಾವನೆಯನ್ನು ಮೂಡಿಸಿಕೊಂಡು ಅನ್ಯೋನ್ಯತೆಯಿಂದ ಬದುಕಬೇಕು ಎಂದು ಬಿಗ್ಬಾಸ್ ವಿಜೇತ, ನಟ ಪ್ರಥಮ್ “ಉದಯವಾಣಿ’ ಮುಖಾಂತರ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ದುಷ್ಕರ್ಮಿಗಳಿಂದ ಅಮಾನುಷವಾಗಿ ಹತ್ಯೆಯಾದ ದೀಪಕ್ ರಾವ್ ಮನೆಗೆ ರವಿವಾರ ಭೇಟಿ ನೀಡಿದ ಬಳಿಕ “ಉದಯವಾಣಿ’ ಜತೆ ಮಾತನಾಡಿದ ಪ್ರಥಮ್, ಕೋಮು ಗಲಭೆ ಸೃಷ್ಟಿಯಾಗುವ ವಾತಾವರಣ ಉಂಟಾಗದಂತೆ ನೋಡಿಕೊಳ್ಳುವುದರೊಂದಿಗೆ ಹಿಂದೂ-ಮುಸಲ್ಮಾನರೆಲ್ಲರೂ ನಮ್ಮವರೇ ಎಂಬ ಭಾವನೆಯನ್ನು ಜನರ ಮನದಲ್ಲಿ ಮೂಡಿಸುವಲ್ಲಿ ಸರಕಾರ ಕೆಲಸ ಮಾಡಬೇಕು. ಯಾವುದೋ ಒಂದು ವರ್ಗವನ್ನು ಓಲೈಸುವ ನಿಟ್ಟಿನಲ್ಲಿ ಸರಕಾರ ಹೋಗಬಾರದು ಎಂದು ಅವರು ಸರಕಾರವನ್ನು ವಿನಂತಿಸಿದ್ದಾರೆ.
ದೀಪಕ್ ರಾವ್ ಸಾವಿನಿಂದ ಆತನ ತಾಯಿ ಇನ್ನೂ ಚೇತರಿಸಿಕೊಂಡಿಲ್ಲ. ಆ ಕುಟುಂಬದ ಪರಿಸ್ಥಿತಿ ನೋಡಿ ನೋವಾಗುತ್ತಿದೆ. ದೀಪಕ್ ಸಾವಿನ ನೋವು ಮಾಸುವ ಮುನ್ನವೇ, ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಶೀರ್ ಕೂಡ ಸಾವನ್ನಪ್ಪಿರುವ ವಿಷಯ ಕೇಳಿ ವಿಷಾದವಾಯಿತು. ಮುಂದೆ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಪ್ರಥಮ್ ಭಿನ್ನವಿಸಿದರು.
ಶಾಂತಿ ಕಾಪಾಡುವಂತೆ ಪ್ರಥಮ್ ಮನವಿ ಮಾಡಿದ ವೀಡಿಯೋವನ್ನು “ಉದಯವಾಣಿ’ ಫೇಸ್ಬುಕ್ ಪೇಜ್ನಲ್ಲಿ ಹಾಕಿದ ನಾಲ್ಕೇ ಗಂಟೆಯಲ್ಲಿ 35,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.