‘ಅಂಬೇಡ್ಕರ್ ಸತ್ಯ, ನ್ಯಾಯಗಳ ಆರಾಧಕರು’
Team Udayavani, Apr 18, 2018, 2:39 PM IST
ಉರ್ವಾ: ಅಂಬೇಡ್ಕರ್ ಅವರು ಸತ್ಯ, ನ್ಯಾಯಗಳ ಶ್ರೇಷ್ಠ ಆರಾಧಕರು. ಭಾರತ ಕಂಡ ಹಿರಿಯ ಮುತ್ಸದ್ಧಿ. ಅಸ್ಪೃಶ್ಯತೆಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದ ಹಿರಿಯ ಮಾನವತಾವಾದಿ ಎಂದು ಲೇಖಕಿ ಅರುಣಾ ನಾಗರಾಜ್ ಅಭಿಪ್ರಾಯಪಟ್ಟರು. ಉರ್ವ ಮಂಗಳಾ ಮಹಿಳಾ ಮಂಡಳಿ ವತಿಯಿಂದ ಅಂಗನವಾಡಿ ಕೇಂದ್ರ ದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನಕ್ರಮ ಆದರ್ಶ
ಸರ್ವ ಸಮಾನತೆಯಿಂದ ಹೃದಯಗಳನ್ನು ಬೆಸೆಯುವ ಮನಸ್ಸುಗಳ ಸೇತುವೆ ನಿರ್ಮಾಣ ಮಾಡಬೇಕೆಂದು ಪಣತೊಟ್ಟವರು ಅಂಬೇಡ್ಕರ್. ಅವರ ಕಾಯಕನಿಷ್ಠೆ, ಕಠಿನ ಪರಿಶ್ರಮ, ಶಿಸ್ತು, ಜೀವನಪ್ರೀತಿ ಇಂದಿನ ಪೀಳಿಗೆಗೆ ಆದರ್ಶ ಎಂದರು.
ಪ್ರತಿಜ್ಞೆ
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ‘ನಾನು ಮತದಾನ ಮಾಡುತ್ತೇನೆ’ ಎಂಬುದಾಗಿ ಸದಸ್ಯೆಯರು ಪ್ರತಿಜ್ಞೆಗೈದರು. ನ್ಯಾಯವಾದಿ ಪುಷ್ಪಲತಾ ಗಟ್ಟಿ ಅವರು, ಕಾನೂನಿನಲ್ಲಿ ಮಹಿಳೆಯರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಂಡಳಿಯ ಖಜಾಂಚಿ ಸುಗಂಧಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಂತಾ ನಿರೂಪಿಸಿದರು.