ವಸತಿ ಗೃಹಗಳಿಗೆ ಸ್ಥಳಾವಕಾಶವಿಲ್ಲದೆ ಅನುದಾನ ವಾಪಸ್
Team Udayavani, Nov 1, 2017, 4:15 PM IST
ಬೆಳ್ಳಾರೆ: ಕಲ್ಲುಗುಂಡಿ ಹೊರ ಠಾಣೆಗೆ ಸ್ವಂತ ಕಟ್ಟಡವಿಲ್ಲದೆ ಸ್ಥಳೀಯ ಗ್ರಾಮ ಪಂಚಾಯತ್ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುವ ದೌರ್ಭಾಗ್ಯ ಎದುರಾಗಿದೆ.
ದ.ಕ. ಮತ್ತು ಕೊಡಗು ಜಿಲ್ಲೆಯ ಗಡಿಭಾಗದಲ್ಲಿರುವ ಕಲ್ಲುಗುಂಡಿ ಹೊರಠಾಣೆ ಸುಳ್ಯ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿದೆ. ಅರಂತೋಡು, ತೊಡಿಕಾನ ಹಾಗೂ ಸಂಪಾಜೆ ಗ್ರಾಮಗಳು ಇದರ ಸರಹದ್ದಿನಲ್ಲಿವೆ. ಎಂಟು ವರ್ಷಗಳ ಹಿಂದೆ ಇಲ್ಲಿ ಹೊರಠಾಣೆಯನ್ನು ತೆರೆಯಲಾಯಿತು. ಮೂರು ಗ್ರಾಮಗಳು ಸೇರಿ ಹೊರಠಾಣೆ ವ್ಯಾಪ್ತಿಯ ಜನಸಂಖ್ಯೆ ಸುಮಾರು 11 ಸಾವಿರ ಇದೆ. ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆ, ದೇವಸ್ಥಾನ – ದೈವಸ್ಥಾನಗಳು, ಮಸೀದಿ- ಚರ್ಚ್, ರಾಷ್ಟ್ರೀಕೃತ ಬ್ಯಾಂಕ್ಗಳು ಹಾಗೂ ಸಹಕಾರಿ ಬ್ಯಾಂಕ್ಗಳು ಇವೆ.
ಠಾಣೆಗೆ ಸಿಮೆಂಟ್ ಶೀಟ್
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಲಿಶೆಡ್ಡು ಎಂಬಲ್ಲಿ ಹೊರ ಠಾಣೆ ಕಾರ್ಯನಿರ್ವಹಿಸುತ್ತಿದೆ. ಠಾಣೆ ತೆರೆಯುವ ಸಂದರ್ಭ ಸೂಕ್ತ ಜಾಗವಿಲ್ಲದ ಪರಿಣಾಮ ಸ್ಥಳೀಯ ಸಂತೆ ಮಾರು ಕಟ್ಟೆಯನ್ನೆ ಠಾಣೆಯಾಗಿ ಪರಿವರ್ತಿಸಿ ಸ್ಥಳೀಯ ಗ್ರಾ.ಪಂ. ಅನುಕೂಲ ಕಲ್ಪಿಸಿತ್ತು. ಠಾಣೆಯ ಛಾವಣಿಗೆ ಸಂಪೂರ್ಣವಾಗಿ ಸಿಮೆಂಟ್ ಶೀಟ್ಗಳನ್ನು ಅಳವಡಿಸಲಾಗಿದೆ. ಬೇಸಗೆಯಲ್ಲಿ ವಿದ್ಯುತ್ ಕೈಕೊಟ್ಟರೆ ಸೆಕೆಯಿಂದ ಸಿಬಂದಿಗೆ ಒಳಗೆ ಕುಳಿತುಕೊಳ್ಳುವುದಕ್ಕೂ ಕಷ್ಟವಾಗುತ್ತದೆ.
ಎರಡು ವರ್ಷಗಳ ಹಿಂದೆ ಹೊರಠಾಣೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿತ್ತು. ಠಾಣೆ ನಿರ್ಮಾಣಕ್ಕೆ ಸ್ಥಳಾವಕಾಶವಿಲ್ಲದೆ ಬಿಡುಗಡೆಯಾದ ಅನುದಾನ ವಾಪಸ್ ಹೋಗಿದೆ. ಒಂದು ವರ್ಷದ ಹಿಂದೆ ಕಲ್ಲುಗುಂಡಿ ಜನತಾ ಕಾಲನಿ ಬಳಿ 10 ಸೆಂಟ್ಸ್ ಜಾಗವನ್ನು ಮೀಸಲಿಡಲಾಗಿದ್ದು, ಪಹಣಿ ಪತ್ರ ತಯಾರಾಗಿದೆ. ಠಾಣೆ ನಿರ್ಮಾಣಕ್ಕೆ ಹೊಸ ಬೇಡಿಕೆ ಸಲ್ಲಿಸಬೇಕಷ್ಟೆ.
ಸಿಬಂದಿ ಕೊರತೆ
ಇಲ್ಲಿಗೆ ಒಂದು ಎ.ಎಸ್.ಐ. ಮಂಜೂರಾತಿ ಹುದ್ದೆ ಇದ್ದು, ಈ ಹುದ್ದೆ ಖಾಲಿ ಬಿದ್ದಿದೆ. ಎರಡು ಹೆಡ್ ಕಾನ್ಸ್ಟೆಬಲ್ ಮಂಜೂರಾತಿ ಹುದ್ದೆ ಇದ್ದು, ಒಂದು ಮಾತ್ರ ಭರ್ತಿಯಾಗಿದೆ. ಆರು ಪೊಲೀಸ್ ಕಾನ್ ಸ್ಟೆಬಲ್ ಹುದ್ದೆ ಮಂಜೂರಾಗಿದ್ದರೂ ಮೂರು ಮಾತ್ರ ಭರ್ತಿಯಾಗಿವೆ.
ಪೊಲೀಸ್ ಠಾಣೆಗೆ ಜಾಗ ಇದ್ದರೂ ಪೊಲೀಸರ ವಸತಿ ಗೃಹಕ್ಕೆ ಜಾಗ ಇನ್ನೂ ದೊರೆತಿಲ್ಲ. ಎರಡು ಮೂರು ವರ್ಷಗಳಿಂದ ಜಾಗಕ್ಕಾಗಿ ಹಡುಕಾಟ ನಡೆಯುತ್ತಿದೆ. ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿಯೂ ಸರಕಾರಿ ಖಾಲಿ ಜಾಗ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದಷ್ಟು ಬೇಗ ಕಲ್ಲುಗುಂಡಿ ಹೊರ ಠಾಣೆಗೆ ಸ್ವಂತ ಕಟ್ಟಡದ ಭಾಗ್ಯ ಲಭಿಸುವಂತಾಗಲಿ ಎಂಬುದು ಸ್ಥಳೀಯರ ಅಪೇಕ್ಷೆ .
ಬೇಡಿಕೆ ಸಲ್ಲಿಸಬೇಕಿದೆ
ಕಲ್ಲುಗುಂಡಿ ಹೊರಠಾಣೆ ಈಗ ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡದ ನಿರ್ಮಾಣಕ್ಕಾಗಿ
ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಹೊಸ ಬೇಡಿಕೆ ಸಲ್ಲಿಸಬೇಕಿದೆ.
– ಸತೀಶ್ಕುಮಾರ್, ಸುಳ್ಯ ವೃತ್ತ ನಿರೀಕ್ಷಕರು
ಠಾಣೆ ನಿರ್ಮಾಣಕ್ಕೆ ಜಾಗ ನೀಡಲಾಗಿದೆ
ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಠಾಣೆ ನಿರ್ಮಾಣಕ್ಕೆ ಜಾಗ ನೀಡಲಾಗಿದೆ.ಆದಷ್ಟು ಬೇಗ ಪೂರ್ಣಪ್ರಮಾಣದ ಠಾಣೆ ನಿರ್ಮಾಣ ಆಗಲಿ.
– ಯಶೋದಾ ಕಡೆಪಾಲ, ಸಂಪಾಜೆ ಗ್ರಾಪಂ ಅಧ್ಯಕ್ಷರು
ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ