ಉಳ್ಳಾಲ ಸೇತುವೆಗೆ ಸಿಸಿ ಕೆಮರಾ, ತಂತಿ ಬೇಲಿ: ಮುಡಾ ಯೋಜನೆ
ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ; ತಡೆಗೆ ಜಿಲ್ಲಾಡಳಿತ ಕ್ರಮ
Team Udayavani, Mar 5, 2020, 4:31 AM IST
ಮಹಾನಗರ: ಆತ್ಮಹತ್ಯೆಯ ತಾಣವಾಗುತ್ತಿರುವ ಉಳ್ಳಾಲ ಸೇತುವೆಗೆ ಕಬ್ಬಿಣದ ತಂತಿ ಬೇಲಿ ನಿರ್ಮಾಣ ಮತ್ತು ಸಿಸಿ ಕೆಮರಾ ಅಳವಡಿಸುವ ಯೋಜನೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದೆ ಬಂದಿದೆ.
ರಾ.ಹೆ. 66ರ ಉಳ್ಳಾಲ ಸೇತುವೆಗೆ ಎರಡೂ ಬದಿ ಕಬ್ಬಿಣದ ತಂತಿ (ತಡೆ) ಬೇಲಿಯನ್ನು ನಿರ್ಮಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಕಡೆ ಯಿಂದ ಪ್ರಯತ್ನ ನಡೆಯುತ್ತಿರುವಂತೆಯೇ ಇದನ್ನು ಲೋಕೋಪಯೋಗಿ ಇಲಾಖೆಯ ಮುಖಾಂತರ ಮಾಡಿಸಬ ಹುದೇ ಎಂದು ಶಾಸಕ ವೇದವ್ಯಾಸ ಕಾಮತ್ ಪರಿಶೀಲಿಸಿದ್ದರು. ಈ ಎರಡೂ ಸಂಸ್ಥೆಗಳಿಂದ ಶೀಘ್ರ ಆಗುವ ಸಾಧ್ಯತೆ ಇಲ್ಲದಿರುವುದನ್ನು ಮನಗಂಡ ಜಿಲ್ಲಾಡಳಿತ ಮುಡಾದ ಮೂಲಕ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ.
ಶಾಸಕ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಮುಡಾ ಆಯುಕ್ತ ದಿನೇಶ್ ಕುಮಾರ್ ಮತ್ತು ಪೊಲೀಸ್ ಅಧಿಕಾರಿಗಳು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿ ಅಂದಾಜು 45 ಲಕ್ಷ ರೂ. ಗಳ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ.
ಇದನ್ನು ಶನಿವಾರ ಮಂಗಳೂರಿಗೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಗಮನಕ್ಕೆ ತಂದು ಒಪ್ಪಿಗೆ ಪಡೆಯಲಾಗಿದೆ. ಶೀಘ್ರವೇ ನಡೆಯುವ ಮುಡಾ ಸಭೆಯಲ್ಲಿ ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ.
ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ 2019ರ ಜು. 29ರಂದು ಉಳ್ಳಾಲ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಹಲ ವರು ಆತ್ಮಹತ್ಯೆಗೆ ಈ ತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸೇತು ವೆಯ ಎರಡೂ ಬದಿ ತಡೆ ಬೇಲಿ ನಿರ್ಮಿಸುವಂತೆ ಮಂಗಳೂರು ಪೊಲೀಸ್ ಕಮಿಷನ ರೆ ಟ್ನಿಂದ ಎನ್ಎಚ್ಎಐಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
6 ಮಂದಿ ಆತ್ಮಹತ್ಯೆ, ಇಬ್ಬರಿಂದ ಪ್ರಯತ್ನ
ಸಿದ್ಧಾರ್ಥ ಆತ್ಮಹತ್ಯೆ ಬಳಿಕ 7 ತಿಂಗಳ ಅವಧಿಯಲ್ಲಿ ಉಳ್ಳಾಲ ಸೇತುವೆಯಿಂದ ನದಿಗೆ ಹಾರಿ ಓರ್ವ ಯುವತಿ ಸೇರಿದಂತೆ 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಫೆ. 16ರಂದು ಬಂಟ್ವಾಳದ ಶಂಭೂರಿನ ಗೋಪಾಲಕೃಷ್ಣ ರೈ (45) ಅವರು ಪುತ್ರ ನಮೀಶ್ ರೈ ಜತೆ ಆತ್ಮಹತ್ಯೆ ಮಾಡಿರುವುದೂ ಸೇರಿದೆ. ಇಬ್ಬರನ್ನು ರಕ್ಷಿಸಲಾಗಿದೆ.
ಯೋಜನೆಯಲ್ಲಿ ಏನೇನಿದೆ?
ಉಳ್ಳಾಲ ಸೇತುವೆ 840 ಮೀ. ಉದ್ದವಿದ್ದು, ಎರಡೂ ದಿಕ್ಕುಗಳಲ್ಲಿ (ಉತ್ತರ ಮತ್ತು ದಕ್ಷಿಣ) 400 ಮೀ. ದೂರದ ವರೆಗಿನ ಚಿತ್ರವನ್ನು ಸೆರೆ ಹಿಡಿಯುವ ಸಾಮರ್ಥ್ಯ ಇರುವ ಹೈ ರೆಸೊಲ್ಯೂಶನ್ ಸಿಸಿ ಕೆಮರಾ, ಸೇತುವೆಯ ಎರಡೂ ಬದಿ ಎಲ್ ಶೇಪ್ನಲ್ಲಿ ಎತ್ತರಕ್ಕೆ ಕಬ್ಬಿಣದ ಗ್ರಿಲ್ಗಳನ್ನು ಅಳವಡಿಸಿ ಬೇಲಿ ನಿರ್ಮಾಣ ಈ ಯೋಜನೆಯಲ್ಲಿ ಸೇರಿದೆ. ಈ ಬೇಲಿ ಸೇತುವೆಯ ಎರಡೂ ದಿಕ್ಕುಗಳಲ್ಲಿ 100 ಮೀ. ಗಳಷ್ಟು ವಿಸ್ತರಿಸಿರುತ್ತದೆ. ಪೊಲೀಸರ ಸೂಚನೆಯಂತೆ ಹೈ ರೆಸೊಲ್ಯೂಶನ್ ಸಿ.ಸಿ. ಕೆಮರಾ ಅಳವಡಿಸಲು ನಿರ್ಧರಿಸಲಾಗಿದೆ.
ಬೇಲಿ ನಿರ್ಮಾಣ ತುರ್ತಾಗಿ ಆಗಬೇಕಿದೆ
ಸೇತುವೆಗೆ ಸಿಸಿ ಕೆಮರಾ ಮತ್ತು ಬೇಲಿ ನಿರ್ಮಾಣ ತುರ್ತಾಗಿ ಆಗಬೇಕಾಗಿದೆ. ಎನ್ಎಚ್ಎಐ ಮತ್ತು ಪಿಡಬ್ಲ್ಯುಡಿ ಮೂಲಕ ಶೀಘ್ರ ಇದನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದ ಕಾರಣ ಮುಡಾದಿಂದ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ಮುಡಾ ಸಭೆಯಲ್ಲಿ ಮಂಜೂರಾತಿ ನೀಡಿ ಬಳಿಕ ಟೆಂಡರ್ ಕರೆದು ಕಾಮಗಾರಿ ವಹಿಸಲಾಗುವುದು.
- ವೇದವ್ಯಾಸ ಕಾಮತ್, ಶಾಸಕರು
- ಹಿಲರಿ ಕ್ರಾಸ್ತಾ