ಚೊಕ್ಕಬೆಟ್ಟು ,ಮಧ್ಯ ಟೀ ಗಾರ್ಡನ್ : ರಸ್ತೆಗೆ ಚಾಲನೆ
Team Udayavani, Aug 11, 2017, 7:35 AM IST
ಸುರತ್ಕಲ್: ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್ನಿಂದ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಸೋಲಿಸಲು ಪಣತೊಟ್ಟು ಕುದುರೆ ವ್ಯಾಪಾರಕ್ಕಿಳಿದ ಬಿಜೆಪಿಗೆ ಮುಖಭಂಗವಾಗಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಆದ ಹಿನ್ನಡೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.
ಕರ್ನಾಟಕ ಸರಕಾರದ ವಿಶೇಷ ಅನುದಾನದಡಿ ಚೊಕ್ಕಬೆಟ್ಟು ಹಾಗೂ ಮಧ್ಯ ಟೀ ಗಾರ್ಡನ್ ಎದುರಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗುಜರಾತ್ ಪ್ರವಾಸದ ವೇಳೆ ರಾಹುಲ್ ಗಾಂ ಧಿ ಅವರ ಮೇಲೆ ಹಲ್ಲೆ ಯತ್ನಕ್ಕೆ ಮುಂದಾಗಿರುವುದು ಕೆಲವರ ಹತಾಶ ಭಾವನೆಯ ಪ್ರತೀಕವಾಗಿದೆ. ಮೋದಿ ಆಡಳಿತ ಈ ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ ಎಂದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಗೆ ಒತ್ತು ನೀಡಿ ಆಡಳಿತ ನಡೆಸಿದೆ. 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಪಕ್ಷವು ಬಹು ದೊಡ್ಡ ಚನಾಯಿತ ಪಕ್ಷವಾಗಿ ಅಧಿ ಕಾರಕ್ಕೇರುವುದರಲ್ಲಿ ಅನುಮಾನವಿಲ್ಲ ಎಂದರು.
ಎಸ್ಎಫ್ಸಿ ಅನುದಾನ
ಕರ್ನಾಟಕ ಸರಕಾರದ ಎಸ್ಎಫ್ಸಿ ಅನುದಾನದಡಿ ಸುಮಾರು 5 ಲ.ರೂ ವೆಚ್ಚದಲ್ಲಿ ಮಧ್ಯ ಒಳ ರಸ್ತೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್ ಭಾಗದಲ್ಲಿ ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿ ಆಗಿದೆ ಎಂದು ಶಾಸಕರು ಹೇಳಿದರು.
ಮಧ್ಯ ಗ್ರಾಮದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಾಜಿ ಉಪ ಮೇಯರ್ ಸುಮಿತ್ರಾ ಕೆ., ಹಿದಾಯತ್, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.