ಬಂದ್ಗೆ ಕರೆ ಖಂಡನೀಯ: ಕೋಮು ಸೌಹಾರ್ದ ವೇದಿಕೆ
Team Udayavani, Feb 23, 2017, 1:01 PM IST
ಮಂಗಳೂರು: ಕೋಮು ಸೌಹಾರ್ದ ರ್ಯಾಲಿ ಹಿನ್ನೆಲೆಯಲ್ಲಿ ಫೆ. 25ರಂದು ಮಂಗಳೂರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುವುದನ್ನು ವಿರೋಧಿಸಿ ಸಂಘಪರಿವಾರ ಸಂಘಟನೆ ಗಳು ಮಂಗಳೂರು ಬಂದ್ಗೆ ಕರೆ ನೀಡಿರುವುದು ಖಂಡನೀಯ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ. ಜಿಲ್ಲಾ ಘಟಕ ಅಭಿಪ್ರಾಯಪಟ್ಟಿದೆ.
ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ರಾಜ್ಯವೊಂದರ ಮುಖ್ಯಮಂತ್ರಿ ನಮ್ಮ ರಾಜ್ಯಕ್ಕೆ ಆಗಮಿಸುವುದನ್ನು ವಿರೋಧಿಸಿ ಬಂದ್ಗೆ ಕರೆ ಕೊಟ್ಟ ಸಂಘಪರಿವಾರದ ನಡೆ ಅದರ ಅಸಹಿಷ್ಣುತೆ ಮತ್ತು ಹತಾಶೆಯನ್ನು ಬಿಂಬಿಸುತ್ತದೆ. ಪ್ರತಿಭಟಿಸುವ ಹಕ್ಕು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ ಯಾವುದೇ ಕಾರಣಕ್ಕೂ ಜಿಲ್ಲೆಗೆ ಬರಲು ಬಿಡಲಾರೆವು ಎಂಬ ಅವರ ವಾದ ಅಕ್ಷಮ್ಯ ಎಂದಿದೆ.
ಮಂಗಳೂರು ಕೇವಲ ಸಂಘ ಪರಿವಾರದವರಿಗೆ ಸೇರಿದ್ದಲ್ಲ. ಇಲ್ಲಿಗೆ ಯಾರಾದರೂ ಬರದಂತೆ ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.