ಸಂಘಟನೆಗಾಗಿ ದೇಶ ಸುತ್ತಾಟ: ಪ್ರಹ್ಲಾದ್ ಮೋದಿ
Team Udayavani, Feb 13, 2019, 1:00 AM IST
ಮಂಗಳೂರು: ನಾನು ನನ್ನ ಸಂಘಟನೆಗಾಗಿ ದೇಶ ಸುತ್ತುತ್ತೇನೆ, ನನಗೆ ಜನರ ಮನಸ್ಸು ಗೊತ್ತಾಗುತ್ತದೆ. ಈ ಬಾರಿಯೂ ಎನ್ಡಿಎ 300ಕ್ಕೂ ಹೆಚ್ಚುಸೀಟು ಗಳಿಸುವುದು ನಿಶ್ಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ ಮೋದಿ ಭವಿಷ್ಯ ನುಡಿದರು.
ದೇವಸ್ಥಾನಗಳಿಗೆ ಭೇಟಿ ನೀಡುವುದಕ್ಕಾಗಿ ಮಂಗಳೂರಿಗೆ ಮಂಗಳವಾರ ಆಗಮಿಸಿದ್ದ ಪ್ರಹ್ಲಾದ್ ಮೋದಿ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದಲ್ಲಿ ಐದು ವರ್ಷಗಳಲ್ಲಿ ಮೋದಿಜೀ ಏನು ಮಾಡಿಲ್ಲ ಹೇಳಿ? ಜನತೆ ಅವರನ್ನು ಈಗಾಗಲೇ ಸ್ವೀಕರಿಸಿದ್ದಾರೆ. ಆದರೆ, ಕಾಂಗ್ರೆಸ್ನವರಿಗೆ ಈ ಬಗ್ಗೆ ಗೊತ್ತಿಲ್ಲ.
ಏಕೆಂದರೆ, ಅವರ ಮನೆಗೆ ಏನೂ ಹೋಗಿಲ್ಲ ಎಂದು ಲೇವಡಿ ಮಾಡಿದರು. ರಾಜಕೀಯ ಘಟಬಂಧನ್ ಬಗ್ಗೆ ಪ್ರತಿಕ್ರಿಯಿಸಿ, ಇಂಥವು ಹಿಂದೆಯೂ ಎಷ್ಟೋ ಆಗಿವೆ, ಇದರಿಂದ ಏನೂ ಬದಲಾಗದು ಎಂದರು.
ಪ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನಾನೆಂದೂ ಬೆಂಬಲ ಕೊಟ್ಟಿಲ್ಲ, ಕೊಡುವುದೂ ಇಲ್ಲ. ಯಾರೋ ಮಾಧ್ಯಮದವರು ಹಿಂದೆ ನನ್ನ ಹೇಳಿಕೆ ತಿರುಚಿ ಬರೆದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.