ಐತ್ತೂರು ಕಲ್ಲಾಜೆ: ಕ್ರೇನ್ ಕೊನೆಗೂ ಸ್ಥಳಾಂತರ
Team Udayavani, Mar 31, 2022, 12:50 PM IST
ಕಡಬ: ಕಳೆದ ಒಂದೂವರೆ ವರ್ಷಗಳಿಂದ ಐತ್ತೂರು ಗ್ರಾಮದ ಕಲ್ಲಾಜೆ ಸಮೀಪ ರಸ್ತೆ ಬದಿಯಲ್ಲಿ ಕೆಟ್ಟು ನಿಂತು ಸುಗಮ ರಸ್ತೆ ಸಂಚಾರಕ್ಕೆ ತೊಡಕಾಗಿದ್ದ ಕ್ರೇನ್ ಅನ್ನು ತುಸು ದೂರಕ್ಕೆ ಸ್ಥಳಾಂತರಿಸುವ ಮೂಲಕ ಕೊನೆಗೂ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.
ರಸ್ತೆಯ ಅಂಚಿನಲ್ಲಿ ಅಪಾಯಕಾರಿ ರೀತಿಯಲ್ಲಿ ಕೆಟ್ಟು ನಿಂತಿದ್ದ ಕ್ರೇನ್ ಬಗ್ಗೆ ಉದಯವಾಣಿ ಸುದಿನದಲ್ಲಿ ಹಲವು ಬಾರಿ ಸಚಿತ್ರ ವರದಿಗಳನ್ನು ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡಲಾಗಿತ್ತು. ಐತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಕೆ. ಅವರ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಕಡಬ ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ ಹಾಗೂ ಪೋಲಿಸ್ ಇಲಾಖೆಗೆ ಮನವಿ ಸಲ್ಲಿಸಿ ಕ್ರೇನ್ ಅನ್ನು ತೆರವುಗೊಳಿಸುವಂತೆ ಆಗ್ರಹಿಸಲಾಗಿತ್ತು. ಆ ಸಂದರ್ಭದಲ್ಲಿ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಕಡಬ ತಹಶೀಲ್ದಾರ್ ಅನಂತಶಂಕರ ಬಿ. ಅವರು ಭರವಸೆ ನೀಡಿದ್ದರು.
ಆ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಅವರು ಪೊಲೀಸ್, ಲೋಕೋಪಯೋಗಿ, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ಮಣ್ಣು ತೆಗೆದು ಸಮತಟ್ಟುಗೊಳಿಸಿ ಬೇರೊಂದು ಕ್ರೇನ್ನ ಸಹಾಯದಿಂದ ಕಾರ್ಯಾಚರಣೆ ನಡೆಸಿ ಕೆಟ್ಟುನಿಂತಿದ್ದ ಕ್ರೇನ್ ಅನ್ನು ಸ್ಥಳಾಂತರಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಕಡಬ ತಹಶೀಲ್ದಾರ್ ಅನಂತಶಂಕರ್ ಬಿ., ಕಡಬ ಎಸ್ಐ ರುಕ್ಮ ನಾಯ್ಕ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಪ್ರಮೋದ್, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಎಎಸ್ಐ ಸುರೇಶ್, ಗ್ರಾಮಕರಣಿಕ ಶ್ರೀರಾಜ್, ಐತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಕೆ., ಪ್ರಮುಖರಾದ ನವೀನ್ ಕಲ್ಲಾಜೆ, ಸುರೇಶ್ ಕೋಟೆಗುಡ್ಡೆ, ಉಮೇಶ್ ಕೇನ್ಯ, ತೀರ್ಥೇಶ್ ಮೊದಲಾದವರು ಕಾರ್ಯಾಚರಣೆಯ ವೇಳೆ ಹಾಜರಿದ್ದರು.