ಎಕ್ಸ್ಪರ್ಟ್: ಅತ್ಯುತ್ತಮ ಸಾಧನೆ; ಸೃಜನಾ ಎನ್. ರಾಜ್ಯಕ್ಕೆ ಪ್ರಥಮ
Team Udayavani, May 12, 2017, 4:17 PM IST
ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪ.ಪೂ. ಕಾಲೇಜಿನ ಸೃಜನಾ ಎನ್. ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಪರೀಕ್ಷೆ ಬರೆದ ಕೋಡಿಯಾಲ್ಬೈಲ್ ಮತ್ತು ವಳಚ್ಚಿಲ್ನ ಎಕ್ಸ್ಪರ್ಟ್ ಪ.ಪೂ. ಕಾಲೇಜಿನ ಶೇ. 99.18ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಪದವಿ ಶಿಕ್ಷಣದಲ್ಲಿ ಹೊಸ ಕ್ರಾಂತಿ ಮಾಡಿದ್ದಾರೆ.
ಪರೀಕ್ಷೆ ಬರೆದ ಒಟ್ಟು 1,348 ವಿದ್ಯಾರ್ಥಿಗಳಲ್ಲಿ 1,341 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 99.48ರಷ್ಟು ಫಲಿತಾಂಶ ಬಂದಿದೆ. 884 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದರೆ, ಶೇ. 95ಕ್ಕಿಂತ ಅಧಿಕ ಅಂಕವನ್ನು 123 ವಿದ್ಯಾರ್ಥಿಗಳು ಪಡೆದಿದ್ದಾರೆ. ಶೇ. 90ಕ್ಕಿಂತ ಅಧಿಕ ಅಂಕವನ್ನು 542 ವಿದ್ಯಾರ್ಥಿಗಳು, ಶೇ. 85ಕ್ಕಿಂತ ಅಧಿಕ ಅಂಕವನ್ನು 884 ವಿದ್ಯಾರ್ಥಿಗಳು ಪಡೆದಿದ್ದಾರೆ.
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸೃಜನಾ ಎನ್. ಫಿಸಿಕ್ಸ್, ಕೆಮೆಸ್ಟ್ರಿ, ಮ್ಯಾಥ್ಸ್, ಕಂಪ್ಯೂಟರ್ ಸೈನ್ಸ್ನಲ್ಲಿ ತಲಾ 100 ಅಂಕ ಪಡೆದು, ಒಟ್ಟು 600 ಅಂಕದಲ್ಲಿ 596 ಅಂಕ ಪಡೆದಿದ್ದಾರೆ. ಇವರು ರಾಜ್ಯಕ್ಕೆ ಪ್ರಥಮ ಸ್ಥಾನಿ.
ಅನ್ನಪೂರ್ಣ ಅವರು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತÅ ಹಾಗೂ ಸಂಸ್ಕೃತದಲ್ಲಿ ತಲಾ ಶೇ. 100 ಅಂಕ ಗಳಿಸಿದ್ದಾರೆ. 3 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, 5 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 34 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ತಲಾ ಒಂದು ನೂರು ಅಂಕ ಪಡೆದಿರುತ್ತಾರೆ.
ಶ್ರೇಷ್ಠ ಎಸ್.ಎಚ್. 591, ಅನ್ನಪೂರ್ಣ ಪಿ. 591, ವೈಶಾಲ್ ಕಿಶೋರ್ 590, ಪೂರ್ವ ಶಿಂಧೆೆ 589, ಪ್ರಿಯಾ ಎಸ್. 588, ಶ್ರೇಯಾ ಎನ್.ಎಚ್. 586, ತೃಪ್ತಿ ರೆಡ್ಡಿ 586, ಗಾಯತ್ರಿ ಕಿಣಿ 585, ಪಿ. ಯದು ತಿಲಕ್ 585, ಸಿ.ಟಿ. ಪೆಮ್ಮಯ್ಯ 585, ಸಿ.ಎಂ. ಸನಂದನ 585, ವಿಭಾ ಬಿ 585 ಅಂಕ ಪಡೆದ ಪ್ರಮುಖ ವಿದ್ಯಾರ್ಥಿಗಳಾಗಿದ್ದಾರೆ.
ಫಿಸಿಕ್ಸ್ನಲ್ಲಿ 94, ಕೆಮೆಸ್ಟ್ರಿಯಲ್ಲಿ 19, ಮ್ಯಾಥ್ಸ್ನಲ್ಲಿ 72, ಬಯೋಲಾಜಿಯಲ್ಲಿ 24, ಸ್ಟ್ಯಾಟಿಸ್ಟಿಕ್ಸ್ನಲ್ಲಿ 27, ಕಂಪ್ಯೂಟರ್ ಸೈನ್ಸ್ನಲ್ಲಿ 24, ಎಕ್ಟ್ರಾನಿಕ್ಸ್ನಲ್ಲಿ 2, ಸಂಸ್ಕೃತದಲ್ಲಿ 18 ಹಾಗೂ ಕನ್ನಡದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಪಡೆಯುವ ಮೂಲಕ ಎಕ್ಸ್ಪರ್ಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತೀ ವರ್ಷ ಪಿಯು ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ. ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗದಲ್ಲಿ ಸೇರಿ ಸಾಧನೆ ಸಂಭ್ರಮವನ್ನು ಆಚರಿಸಿದರು. ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್. ನಾಯಕ್, ಕಾರ್ಯದರ್ಶಿ ಉಷಾಪ್ರಭಾ ಎನ್. ನಾಯಕ್, ಅಂಕುಶ್ ಎನ್. ನಾಯಕ್, ಪ್ರಾಂಶುಪಾಲ ಪ್ರೊ| ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ಹೆಮ್ಮೆ ತಂದಿದೆ: ಪ್ರೊ| ನರೇಂದ್ರ ಎಲ್. ನಾಯಕ್
“ಪ್ರತಿವರ್ಷದಂತೆ ಈ ವರ್ಷವೂ ಎಕ್ಸ್ಪರ್ಟ್ ಪ.ಪೂ. ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಸೃಜನಾ ಅವರು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿರುವುದು ನಮಗೆ ಹೆಮ್ಮೆ ತಂದಿದೆ. ಶ್ರಮಏವ ಜಯತೇ ನಮ್ಮ ಶಿಕ್ಷಣ ಸಂಸ್ಥೆಯ ಧ್ಯೇಯವಾಕ್ಯವಾಗಿದೆ. ಫಲಿತಾಂಶ ನಮ್ಮ ಶ್ರಮಕ್ಕೆ ಸಂದ ಜಯವಾಗಿದೆ. ಕಠಿನ ಪರಿಶ್ರಮ, ಕಾಲೇಜಿನ ಅಧ್ಯಾಪಕವೃಂದದವರ ಯೋಗ್ಯ ಮಾರ್ಗದರ್ಶನ, ನಮ್ಮ ಕಾಲೇಜಿಗೆ ಸೇರಿಸುವ ಅಕೆಯ ಹೆತ್ತವರ ನಿರ್ಧಾರ ಇವೆಲ್ಲವೂ ಈ ಸಾಧನೆಗೆ ಕಾರಣವಾಗಿದೆ. ಆಕೆಯನ್ನು, ಇತರ ಯಶಸ್ವಿ ವಿದ್ಯಾರ್ಥಿಗಳನ್ನು, ಕಾಲೇಜಿನ ಆಡಳಿತ ಮಂಡಳಿಯನ್ನು, ಪ್ರಾಂಶುಪಾಲರು, ಶಿಕ್ಷಕ, ಶಿಕ್ಷಕೇತರ ವೃಂದದವರನ್ನು ಅಭಿನಂದಿಸುತ್ತಿದ್ದೇನೆ’ ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.