ಕ್ರೈಸ್ತರಿಂದ ಉಪವಾಸ, ಪ್ರಾರ್ಥನೆ, ಧ್ಯಾನ ಆಚರಣೆ: ಕರಾವಳಿಯಾದ್ಯಂತ ಶುಭ ಶುಕ್ರವಾರ
Team Udayavani, Apr 16, 2022, 6:40 AM IST
ಮಂಗಳೂರು/ಉಡುಪಿ: ಕ್ರೈಸ್ತರು ಪವಿತ್ರ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೇ)ವನ್ನು ಕರಾವಳಿಯಾದ್ಯಂತ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸಿದರು.
ಉಭಯ ಜಿಲ್ಲೆಗಳ ಎಲ್ಲ ಚರ್ಚ್ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಎಲ್ಲ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಂಗಳೂರಿನ ಬಿಷಪ್ ರೆ| ಫಾ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ರೊಜಾರಿಯೊ ಕೆಥೆಡ್ರಲ್ನಲ್ಲಿ ಮತ್ತು ಉಡುಪಿ ಬಿಷಪ್ ರೆ| ಫಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಮಿಲಾಗ್ರಿಸ್ ಕೆಥೆಡ್ರಲ್ನಲ್ಲಿ ಜರಗಿದ ವಿಶೇಷ ಪ್ರಾರ್ಥನೆ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಮಂಗ ಳೂರು ಕೆಥೆಡ್ರಲ್ನ ರೆಕ್ಟರ್ ರೆ| ಫಾ| ಆಲ್ಫೆಡ್ ಪಿಂಟೊ, ಉಡುಪಿ ಕೆಥೆ ಡ್ರಲ್ ಪ್ರಧಾನ ಧರ್ಮ ಗುರು ರೆ| ಫಾ| ವಲೇರಿಯನ್ ಮೆಂಡೋನ್ಸಾ, ಸಹಾಯಕ ಧರ್ಮ ಗುರು ರೆ| ಫಾ| ಜೋಯ್ ಅಂದ್ರಾದೆ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು.
ಎರಡು ವರ್ಷಗಳ ಕೊರೊನಾ ನಿರ್ಬಂಧಗಳ ಬಳಿಕ ಮಂಗಳೂರಿನ ರೊಜಾರಿಯೋ ಕೆಥೆಡ್ರಲ್ ಮತ್ತು ಇತರ ಚರ್ಚ್ಗಳು ಶುಭ ಶುಕ್ರ ವಾರ ಸಮಾರಂಭದ ಪ್ರಯುಕ್ತ ಕ್ರೆ„ಸ್ತ ಜನರಿಂದ ತುಂಬಿದ್ದವು. ರೊಸಾರಿ ಯೊದ ಅವರ್ ಲೇಡಿ ಆಫ್ ರೋಸರಿ ಕೆಥೆಡ್ರಲ್ನಲ್ಲಿ ಸಂಜೆ ನಡೆದ ಸಮಾರಂಭದ ನೇತೃತ್ವ ವನ್ನು ಮಂಗಳೂರಿನ ಬಿಷಪ್ ರೆ|ಫಾ| ಪೀಟರ್ ಪಾವ್É ಸಲ್ಡಾನ್ಹಾ ವಹಿಸಿದ್ದರು.
ಬಿಷಪ್ ಅವರು ಸಂದೇಶ ನೀಡಿ ನಾವು, ಕ್ರೈಸ್ತರು ನಮ್ಮ ಕರ್ತನಾದ ಯೇಸುವಿನ ಮರಣವನ್ನು ಆಚರಿಸುತ್ತೇವೆ. ಏಕೆಂದರೆ ನಾವು ಅದರಿಂದ ವಿಮೋಚನೆ ಹೊಂದಿದ್ದೇವೆ. ಯೇಸು ತಮ್ಮ ದೇಹ ಮತ್ತು ರಕ್ತವನ್ನು ಶಿಲುಬೆಯ ಮೇಲೆ ಸುರಿಸುವ ಮೂಲಕ ಮತ್ತು ಮರಣದಿಂದ ನಮ್ಮನ್ನು ರಕ್ಷಿಸಿದ್ದಾರೆ. ಯೇಸು ಕ್ರಿಸ್ತರ ಮರಣವು ನಮಗೆ ಹೊಸ ಜೀವನವನ್ನು ನೀಡಿದೆ ಎಂದರು.
ಉಭಯ ಜಿಲ್ಲೆಗಳ ಚರ್ಚ್ಗಳಲ್ಲಿ ಶುಭ ಶುಕ್ರವಾರ ಪ್ರಯುಕ್ತ ಬಲಿ ಪೂಜೆ ಇರಲಿಲ್ಲ. ಶಿಲುಬೆಯ ಆರಾಧನೆಯನ್ನು ನಡೆಸಲಾಯಿತು. ವಿಶ್ವಾಸಿಗಳು ಪವಿತ್ರ ಶಿಲುಬೆಗೆ ಗೌರವಾದರಗಳನ್ನು ಸಲ್ಲಿಸಿ ದರು. ಮಂಗಳೂರಿನ ರೊಸಾರಿಯೋ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಫಾ| ವಿಕ್ಟರ್ ಡಿ’ಸೋಜಾ ಪವಿತ್ರ ಶಿಲುಬೆಯ ಬಗ್ಗೆ ಅರ್ಥಪೂರ್ಣ ವಿವರ ನೀಡಿದರು. ಪವಿತ್ರ ಶಿಲುಬೆಯಿಂದ ಯೇಸು ಕ್ರಿಸ್ತರ ದೇಹವನ್ನು ಕೆಳಗಿಳಿಸುವ ಆಚರಣೆಯು ಭಕ್ತಿ ಮತ್ತು ಗೌರವದಿಂದ ನಡೆಯಿತು. ಬಳಿಕ ಭಕ್ತರು ಯೇಸು ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಪಾಲ್ಗೊಂಡರು.
ರೊಸಾರಿಯೋ ಕೆಥೆಡ್ರಲ್ನ ರೆಕ್ಟರ್ ಫಾ| ಆಲ್ಫ್ರೆಡ್ ಜೆ. ಪಿಂಟೊ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೋ, ಮಂಗಳೂರು ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ಫಾ| ಅನಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಮಂಗಳೂರು : ಎಬಿವಿಪಿ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನ
ಶಿಲುಬೆಯ ಹಾದಿ
ಕೆಲವು ಚರ್ಚ್ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸಲಾಯಿತು. ಭಕ್ತರು ಶಿಲುಬೆಯ ಹಾದಿಯ 14 ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥಿಸಿದರು.
ಸಂಜೆ ಚರ್ಚ್ಗಳಲ್ಲಿ ನಡೆದ ಪ್ರಾರ್ಥನೆಯ ವಿಧಿಗಳಲ್ಲಿ ಬೈಬಲ್ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತರ ಕೊನೆಯ ಘಳಿಗೆಗಳ ಕಥನವನ್ನು ಓದಿದರು. ಬಳಿಕ ಪ್ರವಚನ ನೀಡಿದರು. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ, ಶಿಲುಬೆಯ ಆರಾಧನೆ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ಧರ್ಮಪ್ರಾಂತ್ಯ: ಶುಭ ಶುಕ್ರವಾರ
ಬೆಳ್ತಂಗಡಿ,: ಪವಿತ್ರ ಶುಕ್ರವಾರದಂದು ಬೆಳ್ತಂಗಡಿ ಸಂತ ಲಾರೆನ್ಸ್ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿ ಅವರು ಪವಿತ್ರ ಶುಕ್ರವಾರದ ವಿಧಿವಿಧಾನ ನೆರವೇರಿಸಿದರು.
ಫಾ| ಟೋಮಿ ಕಲ್ಲಿಕಾಟ್ ದಿನದ ಸಂದೇಶ ನೀಡಿದರು. ಸಂತ ಲಾರೆನ್ಸ್ ಪ್ರಧಾನ ದೇವಾಲಯದ ಫಾ| ತೋಮಸ್ ಕಣ್ಣಾಂಗಳ್, ಫಾ| ವಿನ್ಸೆಂಟ್, ಫಾ| ಕುರಿಯಕೋಸ್ ವೆಟುxವರಿ, ಫಾ| ವಿನ್ಸೆಂಟ್ ಪಾಲ್ಗೊಂಡರು.
ಬೆಳ್ತಂಗಡಿ ಧರ್ಮಪ್ರಾಂತಕ್ಕೆ ಸಂಬಂಧಿಸಿದ ಒಟ್ಟು 55 ಧರ್ಮಕೇಂದ್ರಗಳಲ್ಲಿ ಪವಿತ್ರ ವಿಧಿವಿಧಾನಗಳು ಜರಗಿದವು.