ಕರಾವಳಿಯಾದ್ಯಂತ ಉತ್ತಮ ಮಳೆ
ಪುತ್ತೂರು, ಸುಳ್ಯ: ಭಾರೀ ಗಾಳಿ, ಮಳೆಗೆ 8 ಮನೆಗಳಿಗೆ ಹಾನಿ
Team Udayavani, Nov 25, 2021, 4:54 AM IST
ಮಂಗಳೂರು/ಉಡುಪಿ: ಬಂಗಾಲಕೊಲ್ಲಿ ಮತ್ತು ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾದ ಪರಿಣಾಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ರಾತ್ರಿ ವೇಳೆ ಉತ್ತಮ ಮಳೆಯಾಗಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ ಅನೇಕ ಕಡೆ ಮಳೆಯಾದ ವರದಿಯಾಗಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಕೆಲವೆಡೆ ಬೆಳಗ್ಗಿನ ವೇಳೆ ಮಂಜಿನಿಂದ ಕೂಡಿತ್ತು.
ಉಡುಪಿ: ಜಿಲ್ಲೆಯ ಹಲವೆಡೆ ಸಾಧರಣ ಮಳೆಯಾಗಿದ್ದು, ಕುಂದಾಪುರ, ಕಾರ್ಕಳ, ಉಡುಪಿ ಸುತ್ತಮುತ್ತಲಿನ ಕೆಲವು ಭಾಗದಲ್ಲಿ ಸಂಜೆ ವೇಳೆ ಮಳೆ ಸುರಿದಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದ ಅಲ್ಲಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ.
ಪುತ್ತೂರು, ಸುಳ್ಯ:
ವಿವಿಧೆಡೆ ಮನೆಗಳಿಗೆ ಹಾನಿ
ಪುತ್ತೂರು: ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಭಾರೀ ಮಳೆಯಾಗಿದೆ. ಒಳಮೊಗ್ರು ಗ್ರಾಮದ ಉಜಿರೋಡಿ ಮತ್ತು ಉರ್ವ ಪರಿಸರದಲ್ಲಿ ಸಂಜೆ ಬೀಸಿದ ಭಾರೀ ಗಾಳಿ, ಮಳೆಗೆ 8 ಮನೆಗಳಿಗೆ ಹಾನಿಯಾಗಿದೆ.
ಉರ್ವ ಮತ್ತು ಉಜಿರೋಡಿ ಪರಿಸರದ ಶೇಖರ, ಹಮೀದ್, ರಾಧಾ, ನಾಗಮ್ಮ, ಜಗದೀಶ್, ಪ್ರಕಾಶ್ ಗೌಡ, ಭಾಸ್ಕರ ಮತ್ತು ಸೀತಾ ಅವರ ವಾಸದ ಮನೆ, ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದೆ.
ಇದನ್ನೂ ಓದಿ:ಸ್ವೀಡನ್ನ ಮೊದಲ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ
ಉಜಿರೋಡಿಯಲ್ಲಿ ವಾಸದ
ಮನೆಗೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು 1 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ. ಪ್ರಕಾಶ್ ಗೌಡ ಅವರ ಮನೆಗೆ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ ಮನೆಯ ಮಾಡು ಸಂಪೂರ್ಣ ಜಖಂಗೊಂಡಿದೆ.
ರೆಂಜಿಲಾಡಿ: ಮನೆ ಕುಸಿತ
ಸುಬ್ರಹ್ಮಣ್ಯ: ನಿರಂತರ ಮಳೆಯಿಂದಾಗಿ ಮನೆಯ ಹೆಂಚಿನ ಮೇಲ್ಛಾವಣಿ ಕುಸಿದು ಅಪಾರ ಹಾನಿ ಸಂಭವಿಸಿರುವ ಘಟನೆ ಮಂಗಳವಾರ ರಾತ್ರಿ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ನೂಜಿ ಕೆಂಚರಾಣ್ಯ ಅವರ ಪತ್ನಿ ಕುಂಞಮ್ಮ ಅವರ ಮನೆ ಹಾನಿಗೀಡಾಗಿದೆ. ಮಾಡು ಕುಸಿದಿದ್ದು ಪೀಠೊಪಕರಣ ನಾಶಗೊಂಡಿವೆ. ಘಟನೆ ವೇಳೆ ಮನೆ ಮಂದಿ ಹೊರಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.