ದ.ಕ.: ಗಾಳಿ-ಮಳೆ; 300ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿ
Team Udayavani, May 20, 2017, 3:05 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ತಡರಾತ್ರಿ ಮಿಂಚು, ಗುಡುಗು ಸಹಿತ ಗಾಳಿ ಮಳೆಯಾಗಿದೆ. ರಾತ್ರಿ ಸುಮಾರು 2 ಗಂಟೆಯಿಂದ ಬೆಳಗಿನ ಜಾವದವರೆಗೆ ಗಾಳಿಯೊಂದಿಗೆ ಮಳೆ ಸುರಿದಿದ್ದು ಕೆಲವು ಕಡೆ ಮರಗಳು ಹಾಗೂ ಕೊಂಬೆಗಳು ಉರುಳಿ ಬಿದ್ದಿವೆ. ಕೆಲವೆಡೆ ಬೆಳಗ್ಗಿನವರೆಗೂ ಮಳೆ ಸುರಿಯಿತು.
ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಾದ್ಯಂತ ಹೆಚ್ಚಿನ ಕಡೆಗಳಲ್ಲಿ ಸಿಡಿಲು ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕೆಲವು ಕಡೆ ಗಾಳಿಯ ಅಬ್ಬರ ಜಾಸ್ತಿ ಇದ್ದು ಸಾಧಾರಣ ಮಳೆ ಸುರಿದಿದೆ. ಮೂಲ್ಕಿ, ಕಿನ್ನಿಗೋಳಿ, ಸುರತ್ಕಲ್ ಪರಿಸರದಲ್ಲಿ ಸಿಡಿಲಿನ ಆರ್ಭಟ ಜೋರಾಗಿತ್ತು.
ವಿದ್ಯುತ್ ಕಂಬಗಳಿಗೆ ಹಾನಿ
ದ. ಕನ್ನಡ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಜೋರಾಗಿ ಬೀಸಿದ ಗಾಳಿಗೆ ಮರಗಳು ಹಾಗೂ ಮರದ ಕೊಂಬೆಗಳು ಬಿದ್ದು 300ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮಂಗಳೂರು, ಮೂಡಬಿದಿರೆ, ಸುರತ್ಕಲ್, ಮೂಲ್ಕಿ , ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ ಮುಂತಾದೆಡೆ ಹೆಚ್ಚಿನ ಹಾನಿ ಸಂಭವಿಸಿದೆ. ಇದರಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಶುಕ್ರವಾರ ಮಧ್ಯಾಹ್ನದ ವೇಳೆ ಬಹುತೇಕ ಕಡೆಗಳಲ್ಲಿ ಸರಿಪಡಿಸಲಾಗಿದೆ. ಶುಕ್ರವಾರವೂ ಮೋಡದ ವಾತಾವರಣವಿತ್ತು.