ಮಂಗಳೂರಿನಲ್ಲಿ ಪೊಲೀಸ್ ಬಂದೋಬಸ್ತ್ ಉಡುಪಿಯಲ್ಲಿ ಜನ ಸಂಚಾರ ವಿರಳ
ಭಾರತ- ಪಾಕ್ ಪಂದ್ಯ ಹಿನ್ನೆಲೆ
Team Udayavani, Jun 17, 2019, 10:12 AM IST
ಕಾರ್ಕಳದಲ್ಲಿ ಜನಸಂಖ್ಯೆ , ವಾಹನಗಳು ವಿರಳ
ಮಂಗಳೂರು: ಭಾರತ- ಪಾಕ್ ನಡುವಣ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಹಿನ್ನೆಲೆಯಲ್ಲಿ ರವಿವಾರ ಪೊಲೀಸರು ಮಂಗಳೂರು ನಗರದಲ್ಲಿ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಕ್ರಿಕೆಟ್ ಪಂದ್ಯಾಟ ಆರಂಭವಾದ ಬಳಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ನಗರದ ವಿವಿಧ ಭಾಗಗಳಲ್ಲಿ ಗಸ್ತು ಕಾರ್ಯಾಚರಣೆ ನಡೆಸಿದರು. ಬಂದೋಬಸ್ತ್ ಕಾರ್ಯಕ್ಕೆ ಕೆಎಸ್ಆರ್ಪಿ ತುಕಡಿಯನ್ನು ಕೂಡ ಕರೆಸಿ ಸನ್ನದ್ಧಗೊಳಿಸಲಾಗಿತ್ತು.
ಭಾರತ- ಪಾಕ್ ನಡುವಣ ಕ್ರಿಕೆಟ್ ಪಂದ್ಯ ಕ್ರೀಡಾಸಕ್ತರ ಗಮನವನ್ನು ವಿಶೇಷವಾಗಿ ಸೆಳೆಯುವ ಜತೆಗೆ ತುಸು ಸೂಕ್ಷ್ಮ ಪರಿಸ್ಥಿತಿಯನ್ನೂ ನಿರ್ಮಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಉಡುಪಿ ಮತ್ತಿತರೆಡೆ ಜನಸಂಚಾರ ವಿರಳ
ಉಡುಪಿ: ನಗರದಲ್ಲಿ ಭಾರತ -ಪಾಕಿಸ್ಥಾನ ಪಂದ್ಯದ ಹಿನ್ನೆಲೆ
ಯಲ್ಲಿ ರವಿವಾರ ಮಧ್ಯಾಹ್ನ 1 ಗಂಟೆಯ ಬಳಿಕ ಜನಸಂಚಾರ ವಿರಳವಾಗಿತ್ತು.
ಸಾಮಾನ್ಯವಾಗಿ ರವಿವಾರ ಸಂಜೆ ವೇಳೆ ಜನದಟ್ಟಣೆ ಇರುತ್ತಿದ್ದ ಅಂಗಡಿಗಳಿಗೆ ಬೀಗ ಹಾಕಲಾಗಿತ್ತು. ಹೊಟೇಲ್ಗಳ ಟಿವಿಯಲ್ಲಿ ಕ್ರಿಕೆಟ್ ಪ್ರಸಾರ ಮಾಡುತ್ತಿರುವ ಚಾನೆಲ್ ಹಾಕಲಾಗಿತ್ತು. ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ ಮತ್ತಿತರ ಕಡೆಯೂ ಜನ-ವಾಹನ ಸಂಚಾರ ವಿರಳವಾಗಿತ್ತು.