ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ತೆರೆ
Team Udayavani, Dec 31, 2018, 4:28 AM IST
ಪಣಂಬೂರು: ಒಡೆದ ಮನಸ್ಸುಗಳನ್ನು ಒಂದುಗೂಡಿಸಿ ಬದುಕುವ ದಾರಿ ತೋರುತ್ತ ಬಂದಿ ರುವ ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್ ಅವರಿಗೆ 2018ರ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪಣಂಬೂರು ಬೀಚ್ನಲ್ಲಿ ರವಿವಾರ ನಡೆದ ಕರಾವಳಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಸಚಿವ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವಾಸಿ ಕೇಂದ್ರವಾಗಿ ಮಾಡಲು ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಜನವರಿಯಲ್ಲಿ ನದಿ ತೀರದ ಉತ್ಸವ ಆಯೋಜಿಸಲಾಗಿದೆ. ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಪ್ರಾಕೃತಿಕವಾಗಿ ಜಿಲ್ಲೆ ಉತ್ತಮ ಸ್ಥಳವಾಗಿದೆ. ಕೇರಳ, ಗೋವಾ ರಾಜ್ಯಕ್ಕಿಂತ ನಮ್ಮ ಬೀಚ್ಗಳು ಆಯಕಟ್ಟಿನ ಪ್ರದೇಶದಲ್ಲಿವೆ. ಆದರೆ ಪ್ರವಾಸೋದಮದಲ್ಲಿ ನಾವು ಹಿಂದುಳಿದಿದ್ದೇವೆ. ಚಿಕ್ಕ ರಾಜ್ಯಗಳು ಸಮುದ್ರವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಆದಾಯ ಗಳಿಸುತ್ತಿವೆ. ದಕ್ಷಿಣ ಕನ್ನಡದ ಕರಾವಳಿಯೂ ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳವಾಗಿದೆ. ಹೋಮ್ ಸ್ಟೇ, ಆಹಾರ ಉದ್ಯಮ ಮತ್ತಿತರ ವ್ಯವಸ್ಥೆಗಳ ಮೂಲಕ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡುವಂತಹ ವಾತಾವರಣ ರೂಪಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿಲ್ಡಾ ರಾಯಪ್ಪನ್, ಇಲ್ಲಿಯ ಜನತೆ ಐದಾರು ಭಾಷೆ ಮಾತನಾಡಬಲ್ಲರು. ಕರಾವಳಿ ಬಹು ಸಂಸ್ಕೃತಿಯಾಗಿ ಬೆಳೆದು ಬಂದಿದೆ. ಹೀಗಾಗಿ ತುಳುನಾಡಿನಲ್ಲಿ ಬದುಕುವುದೇ ವಿಶೇಷ ಎಂದರು. ಸೌಹಾರ್ದದಲ್ಲಿ ಬದುಕಿ ಉತ್ತಮ ಜೀವನ ನಡೆಸಿ ಎಂದು ನಮ್ಮ ಹಿರಿಯರು ಪಾಠ ಹೇಳಿಕೊಟ್ಟಿದ್ದಾರೆ ಎಂದು ಹಿಲ್ಡಾ ರಾಯಪ್ಪನ್ ಹೇಳಿದರು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಮುಡಾ ಆಯುಕ್ತ ಶ್ರೀಕಾಂತ್ ರಾವ್, ಅಪರ ಜಿಲ್ಲಾ ಧಿಕಾರಿ ಕುಮಾರ್, ಪಣಂಬೂರು ಬೀಚ್ ಸಿಇಒ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
ಗಮನ ಸೆಳೆದ ಮರಳು ಕಲಾಕೃತಿ
ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆ ಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನಿರ್ಮಿಸಿದ್ದ ಮರಳಿನ ಕಲಾಕೃತಿ ಗಮನ ಸೆಳೆಯಿತು. ಕಲಾವಿದ ದಿನೇಶ್ ಹೊಳ್ಳ ಅವರ ನಿರ್ದೇಶನದಲ್ಲಿ ಕಲಾವಿದರಾದ ಮಡಪಾಡಿ ರವಿ ಹಿರೇಬೆಟ್ಟು, ಪುರಂದರ ತೊಟ್ಟಂ ಹಾಗೂ ಇತರ 3 ಮಂದಿ ಸತತ ಆರು ಗಂಟೆ ಶ್ರಮಿಸಿ ಕಲಾಕೃತಿ ನಿರ್ಮಿಸಿದರು. ಇದಕ್ಕೆ ಬೀಚ್ ಉತ್ಸವ ಸಮಿತಿ, ಪೊಲೀಸ್ ಇಲಾಖೆ ಸಹಕಾರ ನೀಡಿತು.
ಬೀಚ್ನಲ್ಲಿ ಜನಸ್ತೋಮ
10 ದಿನಗಳಿಂದ ಮಂಗಳೂರು, 3 ದಿನಗಳಿಂದ ಪಣಂಬೂರು ಬೀಚ್ನಲ್ಲಿ ನಡೆಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ರವಿವಾರ ತೆರೆಬಿತ್ತು. ಪಣಂಬೂರು ಬೀಚ್ನಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಭಾರೀ ಜನಸ್ತೋಮ ಕಂಡುಬಂತು. ಗಾಳಿಪಟ ಹಾರಾಟ ನಡೆಸಿ ಚಿಣ್ಣರು ಸಂಭ್ರಮಪಟ್ಟರೆ, ಕಲಾವಿದರು ಮರಳು ಆಕೃತಿ ಬಿಡಿಸಿ ಜನತೆಯ ಮನಗೆದ್ದರು. ಹಿರಿಯರು, ಕಿರಿಯರು ಕರಾವಳಿಯ ಮೀನು ಖಾದ್ಯ ಸಹಿತ ವಿಶೇಷ ತಿಂಡಿ ತಿನಿಸುಗಳ ರುಚಿ ಸವಿದರು. ಕಡಲ ಕಿನಾರೆಯಲ್ಲಿ ಕುದುರೆ ಸವಾರಿ, ದೋಣಿ ವಿಹಾರ, ಸ್ಪೀಡ್ ಬೋಟ್ನಲ್ಲಿ ಕುಳಿತು ಮೋಜು ಅನುಭವಿಸಿದರು. ಕುಟುಂಬ ಸಹಿತರಾಗಿ ಆಗಮಿಸಿದ್ದ ಸ್ಥಳೀಯರು, ಪ್ರವಾಸಿಗರು ಬೀಚ್ ಉತ್ಸವದಲ್ಲಿ ಪಾಲ್ಗೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹಾಗೂ ಬೀಚ್ ರಕ್ಷಣಾ ಸಿಬಂದಿ ವಿಶೇಷ ನಿಗಾ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ