ಬೆಳೆಯುತ್ತಿರುವ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ
Team Udayavani, Sep 23, 2018, 10:44 AM IST
ಕಿನ್ನಿಗೋಳಿ: ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್ಗಳ ವ್ಯಾಪ್ತಿಯನ್ನೂ ಒಳಗೊಂಡಿರುವ ಕಿನ್ನಿಗೋಳಿ ಪೇಟೆ ಬೆಳೆಯುತ್ತಿರುವ ಪಟ್ಟಣವಾಗಿದೆ. ಇಲ್ಲಿನ ಬಸ್ ನಿಲ್ದಾಣ, ಮುಖ್ಯ ರಸ್ತೆ ಬದಿ ಶಿಸ್ತು ಬದ್ಧವಾಗಿಲ್ಲದ ಪಾರ್ಕಿಂಗ್ ನಿಂದಾಗಿ ಪ್ರತಿನಿತ್ಯವೂ ಪಾರ್ಕಿಂಗ್, ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ.
ಕಿನ್ನಿಗೋಳಿ ಪೇಟೆಯಲ್ಲಿನ ಪರಿಸರದ ಸುಮಾರು 40 ಗ್ರಾಮಗಳಿಗೆ ಮುಖ್ಯ ಪೇಟೆಯಾಗಿದೆ. ಅಲ್ಲದೇ ಇಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು, 8ಕ್ಕೂ ಅಧಿಕ ಸಭಾಭವನಗಳು ಇದ್ದು, ರವಿವಾರ ಬೆಳಗ್ಗೆ 10 ರಿಂದ ಸಂಜೆ 3 ಗಂಟೆಯವರೆಗೆ ಟ್ರಾಫಿಕ್ ಜಾಮ್ ಮಾಮೂಲಿಯಾಗಿದೆ.
ಟ್ರಾಫಿಕ್ ಜಾಮ್; ಕಾರಣ ಹಲವು
ಮುಖ್ಯ ರಸ್ತೆ, ಬಸ್ ನಿಲ್ದಾಣಗಳಲ್ಲಿ ಖಾಸಗಿ ಕಾರು, ವ್ಯಾನ್ ಸರಕು ಸಾಗಾಟದ ವಾಹನಗಳು ನಿಲ್ಲುವುದು, ಕಟೀಲು, ಮೂಡಬಿದಿರೆ, ಮುಂಡ್ಕೂರು ಕಡೆಗೆ ಹೋಗುವ ಬಸ್ಗಳು ನಿಲ್ದಾಣದಿಂದ ನಿಧಾನವಾಗಿ ಬಂದು ಸಿಂಡಿಕೇಟ್ಬ್ಯಾಂಕ್ ಸಮೀಪದ ಬಸ್ ನಿಲ್ದಾಣದಲ್ಲಿ ಹೆಚ್ಚು ಹೊತ್ತು ನಿಲ್ಲುವುದು, ನಿಧಾನವಾಗಿ ಜನರನ್ನು ಹತ್ತಿಸುತ್ತಾ ಬರುವುದು, ಕಟೀಲು ಕಡೆಯಿಂದ ಬರುವ ಬಸ್ಗಳು ಅತೀ ವೇಗದಿಂದ ಬಂದು ಯುಗಪುರುಷ ಸಭಾಭವನದ ಬಳಿ ನಿಲ್ಲಿಸುವುದು, ಜನರನ್ನು ಇಳಿಸುವುದು, ಹತ್ತಿಸುವುದು ಮೊದಲಾದ ಕಾರಣಗಳಿಂದಾಗಿಯೇ ಇಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಗುತ್ತಿದೆ. ಕಿನ್ನಿಗೋಳಿ ಮುಖ್ಯ ರಸ್ತೆಯ ಮಾರ್ಕೆಟ್ ಬದಿಯಲ್ಲಿ ರಿಕ್ಷಾ ನಿಲ್ದಾಣವಿದ್ದು, ಇದರಿಂದ ಬೇರೆ ವಾಹನಗಳಿಗೆ ನಿಲ್ಲಲು ಸ್ಥಳದ ಸಮಸ್ಯೆ ಎದುರಾಗಿದೆ.
ಆಮೆ ನಡಿಗೆಯಲ್ಲಿ ಚರಂಡಿ ಕಾಮಗಾರಿ
ಕಿನ್ನಿಗೋಳಿ ಪೇಟೆಯ ಮುಖ್ಯ ರಸ್ತೆಯಲ್ಲಿ ಕಾಂಕ್ರೀಟ್ ಚರಂಡಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಪಾರ್ಕಿಂಗ್ ಸಮಸ್ಯೆಗೆ ಕಾರಣವಾಗಿದೆ. ಇಲ್ಲಿ ಗುರುವಾರ ವಾರದ ಸಂತೆ ನಡೆಯುತ್ತಿದೆ. ಹೊಸ ಪಂಚಾಯತ್ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸಮಯದಲ್ಲಿ ಒಳಭಾಗದಲ್ಲಿ ಜಾಗವಿಲ್ಲ ಎಂಬ ಕಾರಣದಿಂದ ವಾರದ ಸಂತೆ ವ್ಯಾಪಾರಿಗಳಿಗೆ ಮುಖ್ಯ ರಸ್ತೆ ಹಾಗೂ ತೆರೆದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ವಾಹನ ಚಾಲಕರಿಗೆ ಸಮಸ್ಯೆಯಾಗಿದೆ. ಸಂತೆ ಮಾರುಕಟ್ಟೆಯಲ್ಲಿ ಸಾಕಷ್ಟು ಅಂಗಡಿಗಳು ಖಾಯಂ ಆಗಿ ಠಿಕಾಣಿ ಹೊಡಿರುವುದರಿಂದಲೂ ವಾರದ ಸಂತೆ ವ್ಯಾಪಾರಿಗಳಿಗೆ ಕೊರತೆ ಉಂಟುಮಾಡಿದೆ.
ಟ್ರಾಫಿಕ್ ಪೊಲೀಸರ ನೇಮಕವಾಗಲಿ
ಬೆಳೆಯುತ್ತಿರುವ ಪಟ್ಟಣವಾದ ಕಿನ್ನಿಗೋಳಿಗೆ ಟ್ರಾಫಿಕ್ ಪೊಲೀಸ್ ಹೊರ ಠಾಣೆ ಮಾಡುವ ಬಗ್ಗೆ ಹಿಂದಿನ ಗೃಹ ಸಚಿವ ದಿ| ವಿ. ಎಸ್. ಆಚಾರ್ಯ ಅವರ ಬಳಿ ಪ್ರಸ್ತಾವ ಮಾಡಲಾಗಿತ್ತು. ಅವರು ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೆ ಆಗಲೇ ಇಲ್ಲ. ಕಿನ್ನಿಗೋಳಿ ಬಸ್ ನಿಲ್ದಾಣದ ತಿರುವು ಹಾಗೂ ಮಾರ್ಕೆಟ್ ಬಳಿಯಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿದರೆ ಸದ್ಯದ ಸಮಸ್ಯೆ ಕೊಂಚ ಮಟ್ಟಿಗೆ ಪರಿಹಾರವಾಗಬಹುದು.
ಕಟ್ಟು ನಿಟ್ಟಿನ ಕ್ರಮ ಅಗತ್ಯ
ಬಸ್ಸುಗಳು ಬಸ್ ನಿಲ್ದಾಣದಿಂದ ನಿರ್ಗಮಿಸಲು ಸಮಯವಿದ್ದರೂ ನಿಲ್ದಾಣದಲ್ಲೇ ನಿಲ್ಲಿಸಿ ದುರಸ್ತಿ ಕಾರ್ಯ ನಡೆಸುವುದು, ಹೆಚ್ಚು ಹೊತ್ತು ನಿಲ್ಲುವುದು, ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಬಸ್ ನಿಲ್ಲಿಸಿ ಜನರನ್ನು ಹತ್ತಿಸುವುದು, ಇಳಿಸುವುದು, ಬಸ್ ನಿಲ್ದಾಣದಲ್ಲಿ ಏಕಮುಖ ಸಂಚಾರವಿದ್ದರೂ ರಿಕ್ಷಾ, ದ್ವಿಚಕ್ರ ವಾಹನಗಳ ಸವಾರರು ಸಂಚಾರಿ ನಿಯಮ ಮೀರಿ ವಾಹನ ಚಲಾಯಿಸುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಈ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿ ಕ್ರಮ ಕೈಗೊಳ್ಳಬೇಕಿದೆ.
ಗ್ರಾಮ ಪಂಚಾಯತ್ ನಿಂದ ಸೂಚನೆ
ಕಿನ್ನಿಗೋಳಿ ನಗರದಲ್ಲಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತ್ನಲ್ಲಿ ಸಂಚಾರಿ ಪೊಲೀಸರ ಸಭೆ ನಡೆಸಲಾಗಿದೆ. ಸಂತೆ ದಿನ ಮುಖ್ಯ ರಸ್ತೆ ಹಾಗೂ ತೆರೆಸಾ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡಬಾರದು ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಈಗಾಗಲೇ ತಿಳಿಸಲಾಗಿದೆ.
–ಅರುಣ್ ಪ್ರದೀಪ್
ಡಿ’ಸೋಜಾ, ಪಿಡಿಒ, ಕಿನ್ನಿಗೋಳಿ
ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ
Hunsur: ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ
Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ