ಹೆಚ್ಚುತ್ತಿರುವ ಬಿಸಿಲ ಧಗೆ: ಭತ್ತ ಕಟಾವಿಗೆ ಕೂಲಿ ಕಾರ್ಮಿಕರ ಅಭಾವ
Team Udayavani, Nov 4, 2018, 10:22 AM IST
ಆಲಂಕಾರು: ಈ ವರ್ಷ ಭತ್ತ ಬೇಸಾಯದ ಕಟಾವು ಕಾರ್ಯ ಆರಂಭವಾಗಿದ್ದು, ಎಲ್ಲಡೆ ಕೂಲಿ ಕಾರ್ಮಿಕರ ಅಭಾವ ಎದುರಾಗಿದೆ. ಮಳೆ ನಿಂತ ಬಳಿಕದ ದಿನಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧೆಗೆ ಹೆಚ್ಚಾಗುತ್ತಿದೆ. ಸುಡು ಬಿಸಿಲಿನ ತಾಪವನ್ನು ತಾಳಲಾರದೆ ಪೈರು ಕಟಾವಿಗೆ ಬರಲು ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ನಾಟಿ ಮಾಡಿದ ನೇಜಿ ಸಂಪೂರ್ಣವಾಗಿ ಕೊಳೆತು ರೈತರಿಗೆ ನಷ್ಟವಾಗಿದೆ. ಆಮೇಲೆ ಮಳೆ ನಿಂತ ಪರಿಣಾಮ ಭತ್ತದ ಗದ್ದೆಗಳಿಗೆ ಸಮರ್ಪಕವಾಗಿ ನೀರಿಲ್ಲದೆ ಬೆಳೆ ಸಂಪೂರ್ಣವಾಗಿ ಸುಟ್ಟು ಹೋಗಿತ್ತು.
ಎಲ್ಲ ಸವಾಲುಗಳಿಂದ ರಕ್ಷಿಸಿದ ಭತ್ತದ ಪೈರು ಇದೀಗ ತೆನೆ ಬಿಟ್ಟು ಕಟಾವಿಗೆ ತಯಾರಾಗುತ್ತಿರುವಾಗಲೇ ಕಟಾವಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಬೆಳೆದು ನಿಂತ ಪೈರನ್ನು ಕಟಾವು ಮಾಡುವುದು ಸವಾಲಾಗಿ ಪರಿಣಮಿಸಿದೆ. ಜತೆಗೆ ನಿರಂತರವಾಗಿ ಗದ್ದೆಗಳಿಗೆ ಕಾಡು ಪ್ರಾಣಿಗಳ ದಾಳಿಯಿಂದಾಗಿ ಇದ್ದ ಪೈರನ್ನು ಕಟಾವು ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಣಾಮ ಸಕಾಲದಲ್ಲಿ ಕಟಾವು ಮಾಡಲಾಗುತ್ತಿಲ್ಲ.
ಯಂತ್ರಕ್ಕೆ ಬಿಡುವಿಲ್ಲದ ಕೆಲಸ
ಕೂಲಿ ಕಾರ್ಮಿಕರ ಕೊರತೆಯ ಪರಿಣಾಮ ಕಳೆದ ಕೆಲವು ವರ್ಷಗಳಿಂದ ಬೇಸಾಯ ಕೃಷಿಯು ಯಾಂತ್ರೀಕೃತವಾಗಿಯೇ ನಡೆಯುತ್ತಿದೆ. ಉಳುಮೆಗೆ ಪವರ್ ಟಿಲ್ಲರ್, ನೇಜಿ ನಾಟಿಗೆ ಯಂತ್ರಗಳಿವೆ. ಇದೀಗ ಕಟಾವಿಗೂ ಯಂತ್ರವನ್ನು ಉಪಯೋಗಿಸುತ್ತಿದ್ದು, ಭತ್ತ ಬೇರ್ಪಡಿಸುವ ಕಾರ್ಯವನ್ನೂ ಯಂತ್ರದ ಮೂಲಕವೇ ನಡೆಸಲಾಗುತ್ತಿದೆ. ಮೂರು ದಿನಗಳ ಕೆಲಸ ಮೂರು ಗಂಟೆಗಳಲ್ಲೇ ಮುಗಿಯುವುದರಿಂದ, ರೈತರ ಹಣ, ಶ್ರಮ ಉಳಿತಾಯವಾಗುತ್ತಿದೆ. ಹೀಗಾಗಿ, ರೈತರು ಕಟಾವು ಯಂತ್ರದ ಮೊರೆ ಹೋಗುತ್ತಿದ್ದಾರೆ.
ಸಂಜೆ ಮಳೆ ಭೀತಿಯಿಂದ ಮುಕ್ತಿ ಪೈರನ್ನು ಯಂತ್ರದ ಮೂಲಕ ಕಟಾವು ಮಾಡುವುದರ ಪರಿಣಾಮ ಸಂಜೆ ವೇಳೆ ಮಳೆಯ ಭೀತಿಯನ್ನೂ ದೂರ ಮಾಡಿದೆ. ಸಂಜೆ ಭತ್ತ ಬೇರ್ಪಡಿಸುವ ಕಾರ್ಯ ಮಾಡುತ್ತಾರೆ. ಸಂಜೆ ಸುರಿಯುತ್ತಿದ್ದ ಮಳೆಗೆ ಅಪಾರ ಪ್ರಮಾಣ ಭತ್ತ ಹಾಗೂ ಬೈಹುಲ್ಲು ನಷ್ಟವಾಗುತ್ತಿತ್ತು. ಯಾಂತ್ರೀಕೃತ ಕಟಾವಿನಿಂದಾಗಿ ಕಟಾವಿನ ವೇಳೆಯೇ ಭತ್ತದ ಬೇರ್ಪಡಿಸುವಿಕೆ ಒಟ್ಟಿಗೆ ಆಗುತ್ತಿದೆ.
1 ಗಂಟೆಯಲ್ಲಿ 1 ಎಕ್ರೆ ಕಟಾವು
ಉಪ್ಪಿನಂಗಡಿ ಹೋಬಳಿಯ ಕೃಷಿ ಯಂತ್ರಧಾರೆಯಲ್ಲಿ ಭತ್ತ ಬೇರ್ಪಡಿಸುವ ಒಂದು ಯಂತ್ರದ ಜತೆಗೆ ಕಟಾವಿನ ಎರಡು ಯಂತ್ರಗಳಿವೆ. ಭತ್ತ ಬೇರ್ಪಡಿಸುವ ಯಂತ್ರಕ್ಕೆ ಭಾರೀ ಬೇಡಿಕೆಯಿದೆ. ಗಂಟೆಗೆ 1,800 ರೂ. ಬಾಡಿಗೆ ನಿಗದಿಯಾಗಿದೆ. 1 ಎಕ್ರೆ ಗದ್ದೆಯ ಪೈರನ್ನು ಯಂತ್ರವು ಕೇವಲ ಒಂದು ಗಂಟೆಯಲ್ಲಿ ಕಟಾವು ಮಾಡುತ್ತದೆ. ಮನುಷ್ಯ ಕಟಾವು ಮಾಡುವುದಾದರೆ 25 ಕೂಲಿ ಆಳಿನ ಅಗತ್ಯವಿದೆ. ಯಂತ್ರದ ಮೂಲಕ ಕಟಾವು ಮಾಡುವುದರಿಂದ ಗದ್ದೆ ಮಾಲಕರಿಗೆ ಶೇ. 60 ಖರ್ಚು ಉಳಿತಾಯವಾಗುತ್ತದೆ. ಯಂತ್ರದವರು ಚಿಕ್ಕ ಗದ್ದೆಗಳಿಗೆ ಕಟಾವಿಗೆ ಹೋಗುತ್ತಿಲ್ಲ. 30ರಿಂದ 40 ಎಕ್ರೆ ವಿಸ್ತೀರ್ಣದ ಗದ್ದೆಗಳಿಗೆ ಮಾತ್ರ ಹೋಗುತ್ತಿದ್ದಾರೆ.
ಕಟಾವಿಗೆ ಹೊಂದಾಣಿಕೆ
ಸಣ್ಣ ಗದ್ದೆಗಳಿಗೆ ಹೋಗುವುದು ನಮಗೂ ನಷ್ಟದಾಯಕ. ಆದರೆ, ಭತ್ತದ ಬೇಸಾಯಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಾವು ಕಡಿಮೆ ಅವಧಿಯ ಗದ್ದೆಯನ್ನು ಕಟಾವು ಮಾಡದೆ ಬಿಡುವುದಿಲ್ಲ. ಅಕ್ಕಪಕ್ಕದ ಗ್ರಾಮಗಳ ಬೇಡಿಕೆಗಳನ್ನು ಹೊಂದಾಣಿಕೆ ಮಾಡಿಕೊಂಡು ಕಟಾವು ಮಾಡಿ ಕೊಡುತ್ತಿದ್ದೇವೆ.
– ಯತೀಶ್,
ಉಪ್ಪಿನಂಗಡಿ ವಲಯ ಯಂತ್ರಧಾರೆಯ ಪ್ರಬಂಧಕ
ಯಂತ್ರ ಲಾಭಕರ
ಒಂದು ಎಕ್ರೆ ಗದ್ದೆಯನ್ನು ಕಟಾವು ಮಾಡಲು 25ರಿಂದ 30 ಕೂಲಿಯಾಳುಗಳು ಬೇಕಾಗುತ್ತಾರೆ. ಅವರ ಸಂಬಳ 12 ಸಾವಿರ ರೂ. ಗಳಿಗೂ ಹೆಚ್ಚಾಗುತ್ತದೆ. ಯಂತ್ರವಾದರೆ ಒಂದು ಗಂಟೆಯಲ್ಲಿ ಮುಗಿಸುತ್ತದೆ. ಇದಕ್ಕೆ ಕೇವಲ 1,800 ಮತ್ತು ಲಾರಿ ಬಾಡಿಗೆ ಭರಿಸಿದರೆ ಸಾಕಾಗುತ್ತದೆ. ಸಮರ್ಪಕವಾದ ಯಂತ್ರ ಆಪರೇಟರ್ ಗಳಿದ್ದರೆ ಯಾಂತ್ರೀಕೃತ ಕಟಾವು ಲಾಭಕರ. ಆಪರೇಟರ್ ಸರಿ ಇಲ್ಲದಿದ್ದರೆ ಗದ್ದೆಯ ಮಾಲಕ ನಷ್ಟ ಅನುಭವಿಸಬೇಕಾಗುತ್ತದೆ.
– ನಾರಾಯಣ ನಡುಮನೆ,
ಪ್ರಗತಿಪರ ಕೃಷಿಕ
ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salaar: ಜಪಾನ್ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್ – ಪ್ರಶಾಂತ್ ನೀಲ್ ʼಸಲಾರ್ʼ
Spray fans: ಬಿಸಿ ಗಾಳಿಯೂ ತಂಪಾಯ್ತು
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ