ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿದರೂ ಮೂಲಸೌಲಭ್ಯ ಮರೀಚಿಕೆ
Team Udayavani, Sep 21, 2021, 3:20 AM IST
ಬಜಪೆ: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಇರುವ ಕರಂಬಾರಿನ ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ 1928ರಲ್ಲಿ ಸ್ಥಾಪನೆಗೊಂಡಿದ್ದು, ಇನ್ನೇನೂ 7 ವರ್ಷಗಳಲ್ಲಿ ಶತಮಾ ನೋತ್ಸವವನ್ನು ಆಚರಿಸಿಕೊಳ್ಳಲಿದೆ. ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಗೊಳಪಡುವ ಈ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳಗೊಂಡಿದೆ. ಆದರೆ ಶಾಲೆಯಲ್ಲಿ ಮಾತ್ರ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ.
1ರಿಂದ 7ನೇ ತರಗತಿಯವರೆಗೆ ನಡೆಯುತ್ತಿದ್ದು, ಈ ಶಾಲೆಯಲ್ಲಿ 2019ರಲ್ಲಿ 60, 2020ರಲ್ಲಿ 85, 2021ರಲ್ಲಿ 105 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಈ ಸಾಲಿನಲ್ಲಿ ಒಟ್ಟು 33 ವಿದ್ಯಾರ್ಥಿಗಳು 1ನೇ ತರಗತಿಗೆ ದಾಖಲಾಗಿದ್ದಾರೆ. 2019ರಲ್ಲಿ ಹಳೆ ವಿದ್ಯಾರ್ಥಿಗಳು, ಎಸ್ಡಿಎಂಸಿ ಸದಸ್ಯರು, ಹೆತ್ತವರ ದಾನಿಗಳ ಸಹಕಾರದಿಂದ ಇಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಲಾಗಿದ್ದು, ಪ್ರಸುತ್ತ ಎಲ್ಕೆಜಿ ಯಲ್ಲಿ 35, ಯುಕೆಜಿಯಲ್ಲಿ 33 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಮೂರು ಶಿಕ್ಷಕರು ಬೇಕು:
ಈಗ ಶಾಲೆಯಲ್ಲಿ ಮೂವರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನು ಮೂರು ಹುದ್ದೆ ಖಾಲಿ ಉಳಿದಿವೆ. ಗಣಿತ, ವಿಜ್ಞಾನ, ಇಂಗ್ಲಿಷ್ ಭಾಷೆ ಹಾಗೂ ಸಹ ಶಿಕ್ಷಕ ಒಟ್ಟು 3 ಹುದ್ದೆ ಖಾಲಿ ಇವೆ. ಇದರಿಂದ ಇಲ್ಲಿ ಶಿಕ್ಷಕರ ನೇಮಕ ಅಗತ್ಯವಿದೆ. 1ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಜತೆ ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿವೆ.
ಹೊಸ ಶಾಲಾಕಟ್ಟಡ ಅಗತ್ಯ:
ಹಳೆಯ ಕಟ್ಟಡದಲ್ಲಿ ತರಗತಿಗಳು ನಡೆಯಿತ್ತಿವೆ. ಇಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಾಣ ಅಗತ್ಯವಿದೆ. ಕನ್ನಡ ಹಾಗೂ ಆಂಗ್ಲ ಮಾಧ್ಯಮ ತರಗತಿಗಳು ನಡೆಯುದರಿಂದ ಹೆಚ್ಚು ತರಗತಿ ಕೊಠಡಿಗಳ ಅವಶ್ಯವಿದೆ. ಶಿಕ್ಷಕರ ಕೊಠಡಿಗಳು ಇಲ್ಲ, ಸ್ಮಾರ್ಟ್ ತರಗತಿಗಳು ನಡೆಸಲು ಕೊಠಡಿಗಳಿಲ್ಲ. ಹೆಚ್ಚಿನ ಪೀಠೊಪಕರಣಗಳ ಅವಶ್ಯವಿದೆ. ಕುಡಿಯುವ ನೀರು ಮಳವೂರು ವೆಂಟಡ್ ಡ್ಯಾಂನಿಂದ ಸರಬರಾಜು ಆಗುತ್ತಿದೆ. ಆದರೂ ನೀರಿನ ಕೊರತೆ ಇದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಂಎಸ್ಈಝಡ್, ಎಂಆರ್ಪಿಎಲ್ ಸಂಸ್ಥೆಗಳ ಸಮೀಪದಲ್ಲಿಯೇ ಈ ಶಾಲೆ ಇದೆ. ಈ ಶಾಲೆಗಳ ಬಗ್ಗೆ ಸಂಸ್ಥೆಗಳು ಕಾಳಜಿ ವಹಿಸಿ, ಹೆಚ್ಚು ಒತ್ತನ್ನು ನೀಡಬೇಕಿದೆ. ಶಾಲಾ ಪರಿಸರ ಚೆನ್ನಾಗಿದ್ದಾಗ ಹೆತ್ತವರು ಈ ಬಗ್ಗೆ ಗಮನ ನೀಡುತ್ತಾರೆ. ಆಗ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು. ತಂತ್ರಜ್ಞಾನ ಶಿಕ್ಷಣ, ಶಾರೀರಿಕ ಬೆಳವಣಿಗೆ ಜಿಮ್ ಅಗತ್ಯವಿದೆ. –ಚಂದ್ರಕಲಾ ಎ., ಶಾಲಾ ಮುಖ್ಯ ಶಿಕ್ಷಕಿ, ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ, ಕರಂಬಾರು.
– ಸುಬ್ರಾಯ ನಾಯಕ್, ಎಕ್ಕಾರು