ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ನಾಯಕರು ಅಗತ್ಯ: ಪಾವ್ಲ್ ಡಿ’ಸೋಜಾ
Team Udayavani, Jan 29, 2018, 9:54 AM IST
ಮೂಡಬಿದಿರೆ: ಕ್ರೈಸ್ತ ಸಮಾಜದ ಅಭಿವೃದ್ಧಿಗಾಗಿ, ಸಮಾಜವನ್ನು ಮುನ್ನಡೆಸುವ ಪರಿಣಾಮಕಾರಿ ನಾಯಕರ ಅಗತ್ಯವಿದೆ. ನಮ್ಮ ಸುತ್ತಮುತ್ತಲಿನ ಜನರಲ್ಲಿ ಭಗವಂತನನ್ನು ಕಂಡುಕೊಂಡು, ಸರಕಾರಿ ಹುದ್ದೆಗಳಲ್ಲಿ, ರಾಜಕೀಯದಲ್ಲಿ ಮುಂದಾಳತ್ವ ವಹಿಸಿ, ಸಮಾಜದ ಅಭಿವೃದ್ಧಿಗಾಗಿ ತೆಗೆದುಕೊಂಡ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು’ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಹೇಳಿದರು.
ರವಿವಾರ ಸಂಜೆ ಆಲಂಗಾರು ಚರ್ಚ್ ಮೈದಾನ ದಲ್ಲಿ ಮೂಡಬಿದಿರೆ ವಲಯ ಕೆಥೋಲಿಕ್ ಸಭಾದ ಬೆಳ್ಳಿಹಬ್ಬ ಸಮಾರೋಪ ಸಮಾರಂಭದ ಪ್ರಯುಕ್ತ ಆಯೋಜಿಸಲಾದ ಕೆಥೋಲಿಕ್ ಸಮಾಜೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ದೀಪ ಬೆಳಗಿಸಿ, ಕೇಂದ್ರೀಯ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಾಯ್ ಅವರು ಗುಮಟೆ ಬಾರಿಸಿ, ರೊನಾಲ್ಡ್ ಕೊಲಾಸೊ ಅವರು ಹಿಂಗಾರ ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೆಥೋಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ| ಗುರು ಮ್ಯಾಥ್ಯೂ ವಾಸ್, ಮೂಡಬಿದಿರೆ ವಲಯದ ಪ್ರಧಾನ ಧರ್ಮಗುರು ವಂ| ಪಾವ್ಲ್ ಸಿಕ್ವೇರಾ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕ ಜೆ.ಆರ್. ಲೋಬೊ, ಕೆ. ಅಭಯಚಂದ್ರ, ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ಉಡುಪಿ ಧರ್ಮಪ್ರಾಂತದ ಕೆಥೋಲಿಕ್ ಸಭಾ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿದ್ದರು.
ಸಮ್ಮಾನ
ಮೂಲತಃ ಮೂಡಬಿದಿರೆ ವಲಯದವರಾದ, ಬಿಹಾರದ ಬೆಥೀಯ ಧರ್ಮಪ್ರಾಂತದ ನೂತನ ಧರ್ಮಾಧ್ಯಕ್ಷ ರೈ| ರೆ| ಡಾ| ಸೆಬೆಸ್ಟಿಯನ್ ಪೀಟರ್ ಗೋವಿಯಸ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ, ಮಂಗಳೂರು ಸಿಸಿಬಿ ಎಸಿಪಿ ವೆಲೆಂಟೈನ್ ಡಿ’ಸೋಜಾ, ಐಎಎಸ್ ಅಧಿಕಾರಿ ಕು| ಮಿಶಾಲ್ ಕ್ವೀನಿ ಡಿ’ಕೋಸ್ತಾ ನೀರುಡೆ ಅವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು. ಕೆಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ರಾಗಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು, ಕೇಂದ್ರ, ಪ್ರಾಂತ್ಯ ಹಾಗೂ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಕೆಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಾಯ್ ಪ್ರಧಾನ ಭಾಷಣ ಮಾಡಿ, ಸಾಂವಿಧಾನಿಕ ಹಕ್ಕುಗಳಿಗೆ ಕುತ್ತು ಬಂದಾಗ ಅವುಗಳ ವಿರುದ್ಧ ಹೋರಾಡುವ ಮನೋ ಭಾವ ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.
ಕ್ರೈಸ್ತರಿಗೆ ಹೆಚ್ಚಿನ ಸೀಟು
ಕೆಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಅನಿಲ್ ಲೋಬೋ ಮಾತನಾಡಿ, ದ.ಕ., ಉಡುಪಿ ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯಕ್ಕೆ ರಾಜಕೀಯದಲ್ಲಿ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಅತೀ ಹೆಚ್ಚು ಕ್ರೈಸ್ತ ಮತದಾರರಿರುವ ಮೂಡಬಿದಿರೆ ಕ್ಷೇತ್ರದಲ್ಲಿಯೂ ಕ್ರೈಸ್ತ ಅಭ್ಯರ್ಥಿಗೆ ಅವಕಾಶ ಸಿಗು ವಲ್ಲಿ ಹೋರಾಟ ನಡೆಸಬೇಕಾಗಿದೆ ಎಂದರು. ಕೆಥೋಲಿಕ್ ಸಭಾ ವಲಯಾಧ್ಯಕ್ಷ ಹೆರಿ ರೇಗೊ ಪ್ರಸ್ತಾವನೆಗೈದರು.
ಮುಖ್ಯ ಅತಿಥಿ, ಶಾಸಕ ಅಭಯಚಂದ್ರ ಮಾತ ನಾಡಿ, “ಮಂಗಳೂರಿನಲ್ಲಿ ಕಾಂಗ್ರೆಸ್ಗೆ ನಿರಂತರ ಸೋಲಾದಾಗ, ಕ್ರೈಸ್ತ ಅಭ್ಯರ್ಥಿಗೆ ಅವ ಕಾಶ ಕೊಡದಿದ್ದರೆ ಸ್ಪರ್ಧಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದೆ. ರಾಜಕೀಯದಲ್ಲಿ ಕ್ರೈಸ್ತ ಸಮಾಜಕ್ಕೆ ಅನ್ಯಾಯ ವಾಗುವುದಕ್ಕೆ ಬಿಡುವು ದಿಲ್ಲ. ಜತೆಗೆ ಎಲ್ಲರಿಗೂ ನ್ಯಾಯ ಒದಗಿಸಿರುವೆ ಎಂಬ ತೃಪ್ತಿ ನನಗಿದೆ ಎಂದರು.
ಸಮ್ಮಾನ ಸ್ವೀಕರಿಸಿದ ರೊನಾಲ್ಡ್ ಕೊಲಾಸೊ ಮಾತನಾಡಿ, ಕ್ರೈಸ್ತ ಸಮುದಾಯದ ಸಂಖ್ಯೆ ನೋಡಿದರೆ ಆರೋಗ್ಯ, ಶಿಕ್ಷಣ ಮೊದಲಾದ ರಂಗಗಳಲ್ಲಿ ಸರ್ವ ಸಮಾಜದವರಿಗೆ ಸಲ್ಲಿಸಿದ ಸೇವೆ ಇತರರಿಗಿಂತ ಮೇಲ್ಮಟ್ಟದಲ್ಲಿದೆ. ಆದರೆ, ಅದಕ್ಕೆ ತಕ್ಕ ಮನ್ನಣೆ ಯಾವುದೇ ಸರಕಾರ, ಪಕ್ಷಗಳಿಂದ ಸಿಕ್ಕಿಲ್ಲ. ಅದಕ್ಕಾಗಿ ನಾವು ಸಂಘಟಿತ ಹೋರಾಟ ಮಾಡಬೇಕಾಗಿದೆ’ ಎಂದರು.
ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಡಿ’ಕೋಸ್ತಾ ಮೊದಲಾದವರು ಉಪಸ್ಥಿತರಿದ್ದರು. ಲೋಯ್ಡ ರೇಗೊ ವರದಿ ವಾಚಿಸಿದರು. ಮನೋಹರ್ ಕುಟಿನ್ಹಾ ವಂದಿಸಿದರು. ಆ್ಯಂಡ್ರೂ ಡಿ’ಸೋಜಾ ಮತ್ತು ಕ್ಲೊಟಿಲ್ಡಾ ಮಿರಾಂದಾ ನಿರ್ವಹಿಸಿದರು. ಕೆಥೋಲಿಕ್ ಸಮಾಜೋತ್ಸವದಲ್ಲಿ 5,000 ಮಂದಿ ಪಾಲ್ಗೊಂಡಿದ್ದರು.
ಠರಾವು ಮಂಡನೆ
ಕ್ರೈಸ್ತ ಯುವತಿಯರು ಕನಿಷ್ಠ ಸ್ನಾತಕೋತ್ತರ ಶಿಕ್ಷಣ ಪಡೆಯುವುದೂ ಸೇರಿದಂತೆ ಯುವಕರಿಗೆ ಉನ್ನತ ಶಿಕ್ಷಣಕ್ಕೆ ಹಾಗೂ ಸ್ವಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು, ಸರಕಾರಿ ಹುದ್ದೆಗಳನ್ನು ಪಡೆಯಲು ಮಾರ್ಗ ದರ್ಶನ ನೀಡಬೇಕು.
ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಲು ಹೋರಾಟ ನಡೆಸಬೇಕು.
ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಯಾಗಬೇಕು.
ಸಮಯ ಪರಿಪಾಲನೆಗೆ ಒತ್ತು ನೀಡ ಬೇಕು. ಅನಗತ್ಯ ದುಂದು ವೆಚ್ಚ ಕಡಿಮೆ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ