ಹೆಲಿಕಾಪ್ಟರ್ ನೀಡುವುದಾಗಿ ಹೇಳಿ ಬೆಂಗಳೂರು ಮೂಲದ ಟೆಕ್ಕಿಗೆ ವಂಚನೆ
Team Udayavani, Oct 7, 2022, 7:20 AM IST
ಮಂಗಳೂರು: ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ಕಿಂಗ್ ನೆಪದಲ್ಲಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರಿಗೆ ಮಂಗಳೂರಿನಲ್ಲಿ ಆನ್ಲೈನ್ ಮೂಲಕ ವಂಚಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಯುವಕ ಇಲ್ಲಿ ಸುತ್ತಾಡಿದ ಬಳಿಕ ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ಹೆಲಿಕಾಪ್ಟರ್ ಇರುವ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಬುಕ್ಕಿಂಗ್ ಮಾಡುವ ನೆಪದಲ್ಲಿ 38,060 ರೂ. ಪಡೆದು ವಂಚಿಸಿದ್ದಾನೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ. 3ರಂದು ಘಟನೆ ನಡೆದಿದ್ದು, ಮಂಗಳೂರಿನಲ್ಲಿ ಸುತ್ತಾಡಿದ ಬಳಿಕ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್ ಸರ್ಚ್ ಮಾಡಿದ್ದಾರೆ. ಈ ವೇಳೆ ವಿಮಾನ ಇಲ್ಲದಿರುವುದು ತಿಳಿದು, ಖಾಸಗಿ ಹೆಲಿಕಾಪ್ಟರ್ ಇದೆಯೇ ಎಂದು ಸರ್ಚ್ ಮಾಡಿದಾಗ, ವೆಬ್ಸೈಟ್ ಒಂದು ಸಿಕ್ಕಿದೆ. ಆದನ್ನು ಸಂಪರ್ಕಿಸಿದಾಗ, ನಿತಿನ್ ಎನ್ನುವ ವ್ಯಕ್ತಿ ಫೋನ್ ಕರೆಗೆ ಸಿಕ್ಕಿದ್ದು, ಆತ ತನ್ನನ್ನು ವೈಷ್ಣೋದೇವಿ ದೇವಸ್ಥಾನದ ಪ್ರತಿನಿಧಿಯೆಂದು ಹೇಳಿಕೊಂಡಿದ್ದ.
ಬುಕ್ಕಿಂಗ್ ಅಡ್ವಾನ್ಸ್ ಎಂದು 38,060 ರೂ. ಕಳುಹಿಸಿ ಕೊಡಲು ಹೇಳಿದ್ದು, ಅದರಂತೆ ಆತ ಕಳಿಸಿದ ಕ್ಯೂಆರ್ ಕೋಡ್ಗೆ ಹಣ ಕಳಿಸಿದ್ದಾರೆ. ಅನಂತರ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ದೇವಸ್ಥಾನಕ್ಕೆ ಕರೆ ಮಾಡಿದಾದ ತಮ್ಮಲ್ಲಿ ಅಂತಹ ಯಾರೇ ಪ್ರತಿನಿಧಿ ಇಲ್ಲವೆಂದು ಹೇಳಿದ್ದು, ಈ ವೇಳೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಅದರಂತೆ ಮಂಗಳೂರಿಗೆ ಬಂದು ಸೈಬರ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.