Mangaluru ಈಜುಕೊಳದಲ್ಲಿ ಮುಳುಗಿ ಸಾವು
Team Udayavani, Dec 12, 2023, 9:52 PM IST
ಮಂಗಳೂರು: ನಗರದ ಮಂಗಳಾ ಈಜುಕೊಳದಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಹರ್ಯಾಣ ಮೂಲದ ಅಭಿಷೇಕ್ (30) ಮೃತಪಟ್ಟವರು. ಈಜುಕೊಳದಲ್ಲಿ ಸಂಜೆ 4.45ರಿಂದ 5.30ರ ವರೆಗೆ ಸಾರ್ವಜನಿಕರಿಗೆ ಈಜಲು ಪ್ರವೇಶಾವಕಾಶವಿದ್ದು ಅಭಿಷೇಕ್ 4.30ರ ವೇಳೆಗೆ ಟಿಕೆಟ್ ಪಡೆದುಕೊಂಡು ನೀರಿಗೆ ಇಳಿದಿದ್ದಾರೆ. ಸುಮಾರು 15 ನಿಮಿಷದ ಬಳಿಕ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಸುಮಾರು 30 ಮಂದಿ ಈಜಾಡುತ್ತಿದ್ದರು. ಆದರೆ ಅವರ ಗಮನಕ್ಕೆ ಬಂದಿರಲಿಲ್ಲ. ಹುಡುಗನೋರ್ವ ಗಮನಿಸಿ ಲೈಫ್ಗಾರ್ಡ್ಗಳಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಬದುಕಿಸುವ ಯತ್ನ ವಿಫಲ
ಈಜುಕೊಳದಲ್ಲಿ ಕಾರ್ಯನಿರತರಾಗಿದ್ದ ಲೈಫ್ಗಾರ್ಡ್ಗಳಾದ ರಾಜೇಂದ್ರ ಮತ್ತು ಪುಂಡಲೀಕ ಅವರು ಕಾರ್ಯಾಚರಣೆ ನಡೆಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಈಜಾಡಲು ಬಂದಿದ್ದ ಡಾ| ನರೇಂದ್ರ ನಾಯಕ್ ಮತ್ತು ಲೈಫ್ಗಾರ್ಡ್ ರಾಜೇಂದ್ರ ಅವರು ಅಭಿಷೇಕ್ ಅವರಿಗೆ ಕೃತಕ ಉಸಿರಾಟ ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ. ಅಭಿಷೇಕ್ ಅವರು ಈಜುಕೊಳಕ್ಕೆ ಯುವಕ ಬಂದಿರುವುದು, ಈಜುಕೊಳಕ್ಕೆ ಇಳಿದು ಈಜಾಡುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೃದಯಾಘಾತ?
ಅಭಿಷೇಕ್ ಅವರಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾಗ ಆಹಾರ ಹಾಗೂ ರಕ್ತ ವಾಂತಿ ಮಾಡಿರುವುದಾಗಿ ಈಜುಕೊಳದ ಸಿಬಂದಿ ತಿಳಿಸಿದ್ದಾರೆ. ಏಕಾಏಕಿ ನೀರಿನಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಹೃದಯಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮೂರನೇ ಸಾವು
ಮಂಗಳಾ ಈಜುಕೊಳದಲ್ಲಿ 2013ರ ಅ. 25ರಂದು ಬೋಳೂರಿನ ವಿದ್ಯಾರ್ಥಿ ಸೋಹನ್ (13) ಮೃತಪಟ್ಟಿದ್ದ. 2019 ಮಾ. 24ರಂದು ಜೋಡುಕಟ್ಟೆ ನಿವಾಸಿ ಯಜ್ಞೇಶ್ (19) ಮೃತಪಟ್ಟಿದ್ದರು.