Mangaluru; ರಾಜ್ಯದ ಮೀನುಗಾರರಿಗೆ ಕೇರಳ,ತಮಿಳುನಾಡಿನ ಮೀನುಗಾರರಿಂದ ಹಲ್ಲೆ ಆರೋಪ
Team Udayavani, Feb 26, 2024, 9:45 PM IST
ಮಂಗಳೂರು: ಕರ್ನಾಟಕದ ಮೀನುಗಾರರ ಮೇಲೆ ತಮಿಳುನಾಡು ಮತ್ತು ಕೇರಳದ ಮೀನುಗಾರರು ಈ ಬಾರಿಯೂ ತಮಿಳುನಾಡು ಭಾಗದಲ್ಲಿ ಹಲ್ಲೆ ನಡೆಸಿರುವುದಾಗಿ ಮೀನುಗಾರರು ದೂರಿದ್ದಾರೆ.
ಪ್ರತಿ ವರ್ಷವೂ ರಾಜ್ಯದ ಮೀನುಗಾರರು ರಿಬ್ಬನ್ ಫಿಶ್ ಹಿಡಿಯುವ ಉದ್ದೇಶದಿಂದ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳುಗಳಲ್ಲಿ ತಮಿಳುನಾಡಿನ ರಾಮೇಶ್ವರದವರೆಗೂ ಹೋಗುತ್ತಾರೆ. ಹೀಗೆ ಹೋದಾಗ ಹಿಂದೆಯೂ ಕೇರಳ ಮತ್ತು ತಮಿಳುನಾಡಿನ ಮೀನುಗಾರರು ಹಲ್ಲೆ ನಡೆಸಿ ಬೋಟ್ಗಳಿಗೆ ಹಾನಿ ಮಾಡಿದ್ದರು. ಈ ಬಾರಿಯೂ ಇದೇ ರೀತಿ ಹಲ್ಲೆ ನಡೆಸಿ ನಷ್ಟವನ್ನುಂಟು ಮಾಡಲಾಗಿದೆ ಎಂದು ರಾಜ್ಯದ ಮೀನುಗಾರರು ದೂರಿಕೊಂಡಿದ್ದಾರೆ.
ಆಳಸಮುದ್ರ ಮೀನುಗಾರಿಕೆಗೆ ಗಡಿಯ ನಿಯಮ ಇರುವುದಿಲ್ಲ. ತಮಿಳುನಾಡು ಮೀನುಗಾರರು ಕೂಡ ಕರ್ನಾಟಕ ಭಾಗಕ್ಕೆ ಬರುತ್ತಾರೆ. ಅವರಿಗೆ ಅಡ್ಡಪಡಿಸಿಲ್ಲ. ಆದರೆ ತಮಿಳುನಾಡು ಭಾಗದಲ್ಲಿ ಪ್ರತಿ ಬಾರಿಯೂ ತೊಂದರೆಯನ್ನುಂಟು ಮಾಡಲಾಗುತ್ತಿದೆ ಎಂದು ಕರ್ನಾಟಕದ ಮೀನುಗಾರರು ಆರೋಪಿಸಿದ್ದಾರೆ.
ಪ್ರತಿವರ್ಷ ಕರ್ನಾಟಕದ ಸಮಾರು 300ರಷ್ಟು ಬೋಟ್ಗಳು ತೆರಳುತ್ತಿದ್ದವು. ಆದರೆ ಈ ಬಾರಿ ಸುಮಾರು 20 ಬೋಟ್ಗಳು ಮಾತ್ರ ಹೋಗಿದ್ದವು. ಆದರೂ ಹಲ್ಲೆ ನಡೆಸಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮೀನುಗಾರರು ದೂರಿದ್ದಾರೆ.