ಉಳ್ಳಾಲ: ಮದುವೆಯಾದ 15 ದಿನದಲ್ಲೇ ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ
Team Udayavani, Sep 5, 2022, 5:50 PM IST
ಉಳ್ಳಾಲ: ಮದುವೆಯಾದ 15 ದಿನದಲ್ಲೇ ನವ ವಿವಾಹಿತೆಯೊಬ್ಬಳ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತುವಿನ ರಶ್ಮಿ ಆಚಾರ್ಯ(24) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದು ಬಂದಿದೆ.
ರಶ್ಮಿ ಆಚಾರ್ಯ ಅವರ ನಿಶ್ಚಿತಾರ್ಥ ಕಳೆದ ಆರು ತಿಂಗಳ ಹಿಂದೆ ಗಂಜಿಮಠ ಮೂಲದ ಸಂದೀಪ್ ಎಂಬಾವರ ಜೊತೆ ನಡೆದಿತ್ತು. ಆಗಸ್ಡ್ 21 ರಂದು ವಿವಾಹ ನೆರವೇರಿತ್ತು. ಸೆ.3 ರಂದು ರಶ್ಮಿಯ ಅಕ್ಕನ ಮನೆಯಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ಅದೇ ದಿನ ರಶ್ಮಿ ಇಲಿ ಪಾಷಣ ಸೇವಿಸಿದ್ದಳು ಎನ್ನಲಾಗಿದೆ.
ಅಸ್ವಸ್ಥರಾದ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಶ್ಮಿ ಮೃತಪಟ್ಟಿದ್ದಾಳೆ.
ಈ ಬಗ್ಗೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.