ಕರಾವಳಿಯಲ್ಲಿ ಸಾಧಾರಣ ಮಳೆ
Team Udayavani, May 1, 2019, 6:25 AM IST
ಮಂಗಳೂರು/ ಉಡುಪಿ: ಮಂಗಳವಾರದಂದು ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣವಿತ್ತು. ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿ ಬಳಿಕ ಬ್ರಹ್ಮಾವರ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಉಡುಪಿ, ಮಣಿಪಾಲ, ಕಾಪು, ಪಡುಬಿದ್ರಿ ಮೊದಲಾದೆಡೆ ಸಾಮಾನ್ಯ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ 33 ಡಿ.ಸೆ. ಗರಿಷ್ಠ ಉಷ್ಣಾಂಶ ಮತ್ತು 26 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ಮಳೆ ಸಾಧ್ಯತೆ
ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ “ಫೋನಿ’ ಚಂಡಮಾರುತ ವಾಯವ್ಯ ದಿಕ್ಕಿನೆಡೆಗೆ ಸಾಗುತ್ತಿದೆ. ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿದ್ದು ಮುಂದಿನ ಎರಡು ದಿನಗಳ ಕಾಲ ರಾಜ್ಯ ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಂಗಳಕ್ಕೆ ನುಗ್ಗಿದ ನೀರು
ಕುಂದಾಪುರ: ತಾಲೂಕಿನ ವಿವಿಧೆಡೆ ಮಂಗಳವಾರ ಬೆಳಗ್ಗಿನ ಜಾವ ಉತ್ತಮ ಮಳೆಯಾಗಿದೆ. ತಲ್ಲೂರಿನಲ್ಲಿಯೂ ಸಾಧಾರಣ ಮಳೆಯಾಯಿತು. ಆದರೆ ಹೆದ್ದಾರಿ ಕಾಮಗಾರಿಯ ಅವಾಂತರದಿಂದಾಗಿ ಇಲ್ಲಿನ ಸಮೀಪದ ಕಲ್ಕೆರಿಯಲ್ಲಿ ರಸ್ತೆಯ ಮಳೆ ನೀರೆಲ್ಲ ಮನೆಗಳ ಅಂಗಳಕ್ಕೆ ನುಗ್ಗಿದ ಘಟನೆ ನಡೆದಿದೆ.
ಗುತ್ತಿಗೆದಾರರು ಚರಂಡಿ ನಿರ್ಮಿಸದ್ದರಿಂದ ಮಳೆ ನೀರು ಇಲ್ಲಿನ ಸುಮಾರು 15 ಮನೆಗಳ ಅಂಗಳಕ್ಕೆ ನುಗ್ಗಿದೆ. ಜತೆಗೆ ಮಣ್ಣು ಕೊಚ್ಚಿ ಅಂಗಳಕ್ಕೆ ತಲುಪಿ ಮನೆಯ ರಸ್ತೆ ಸಂಪರ್ಕಕ್ಕೂ ತೊಡಕಾಗಿದೆ.
ಈ ಬಗ್ಗೆ ಹಿಂದೆಯೇ ಇಲ್ಲಿನ ಸಹಾಯಕ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವು. ಆದರೆ ಇದಕ್ಕೆ ಸ್ಪಂದನೆ ಮಾತ್ರ ಸಿಕ್ಕಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ.