ಮೇ 10 ಸಂಜೆ 6ಕ್ಕೆ ಬಹಿರಂಗ ಪ್ರಚಾರ ಮುಕ್ತಾಯ
Team Udayavani, May 7, 2018, 6:50 AM IST
ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಮೇ 10ರಂದು ಸಂಜೆ 6 ಗಂಟೆಗೆ ಕೊನೆಗೊಳ್ಳುತ್ತದೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಆ ಬಳಿಕ ಬಹಿರಂಗ ಪ್ರಚಾರ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಚುನಾವಣಾ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು ಮೇ 10ರ ಸಂಜೆ 6 ಗಂಟೆಯ ಬಳಿಕ ಮೆರವಣಿಗೆ, ಬಹಿರಂಗ ಪ್ರಚಾರ ನಡೆಸುವುದಕ್ಕೆ ನಿಷೇಧವಿರುತ್ತದೆ. ಆದರೆ ಅಭ್ಯರ್ಥಿಗಳು, ಏಜೆಂಟರು, ಬೆಂಬಲಿಗರು ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡಲು ಅವಕಾಶವಿದೆ. ಈ ಅವಧಿಯಲ್ಲಿ ಕಲಂ 144 ರನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ 5 ಮಂದಿಗಿಂತ ಹೆಚ್ಚು ಮಂದಿ ಒಟ್ಟು ಸೇರಿ ಮನೆಮನೆ ಪ್ರಚಾರ ನಡೆಸುವಂತಿಲ್ಲ. ಮತದಾನ ಮುಕ್ತಾಯವಾಗುವ ಸಮಯದ ಹಿಂದಿನ 48 ಗಂಟೆಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದರು.
ಮತದಾನದ ಕೊನೆಯ 48 ಗಂಟೆಗಳಲ್ಲಿ ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು, ತಾರಾ ಪ್ರಚಾರಕರು ಹಾಗೂ ಇತರರು ಆಯಾಯ ಕ್ಷೇತ್ರಗಳಲ್ಲಿ ಇರದಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ. ಈ ಬಗ್ಗೆ ನೇಮಕ ಮಾಡಲಾದ ವಿವಿಧ ಅಧಿಕಾರಿಗಳು, ಪೊಲೀಸರು ಎಲ್ಲ ಹೊಟೇಲ್, ವಸತಿಗೃಹ, ಛತ್ರ ಮುಂತಾದೆಡೆ ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಲಿರುವರು ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಬೆಳ್ತಂಗಡಿ, ಸುಳ್ಯ ಸೇರಿದಂತೆ 60 ಜನವಸತಿ ಕೇಂದ್ರಗಳಿಗೆ ಸೂಕ್ತ ಸಂಚಾರ ವ್ಯವಸ್ಥೆಯ ಕೊರತೆ ಇರುವುದರಿಂದ ಮತದಾನಕ್ಕೆ ಬರಲು ವಾಹನ ವ್ಯವಸ್ಥೆ ಮಾಡುವಂತೆ ಕೋರಿಕೆ ಬಂದಿದ್ದು ಕೆಎಸ್ಆರ್ಟಿಸಿ ಬಸ್ಗಳನ್ನು ವ್ಯವಸ್ಥೆಗೊಳಿಸಲಾಗುವುದು. ಜಿಲ್ಲೆಯಲ್ಲಿ 13 ಮತದಾನ ಕೇಂದ್ರಗಳಲ್ಲಿ ದೂರವಾಣಿ ಸಂಪರ್ಕ ಸಮಸ್ಯೆ ಗುರುತಿಸಲಾಗಿದ್ದು ಇದಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಮತಗಟ್ಟೆಯೊಳಗೆ ಮತದಾರ/ಮತದಾರರ ಕೈಗೂಸು, ಕುರುಡ ಮತ್ತು ದುರ್ಬಲ ಮತದಾರನ ಸಂಗಡಿಗ, ಮತಗಟ್ಟೆ ಸಿಬಂದಿ, ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿತ ಅಧಿಕಾರಿಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ/ಅವರ ಚುನಾವಣಾ ಏಜೆಂಟ್, ಮತದಾರನಿಗೆ ಝಡ್+ ರಕ್ಷಣೆಗೆ ನಿಯೋಜಿತ ಸಮವಸ್ತ್ರ ಧರಿಸದ ಹಾಗೂ ಶಸ್ತ್ರಾಸ್ತ್ರವನ್ನು ಮರೆಮಾಚಿದ ಭದ್ರತಾ ಸಿಬಂದಿಗಳಿಗೆ ಮಾತ್ರ ಪ್ರವೇಶವಿರುತ್ತದೆ ಎಂದರು. ದ.ಕ. ಜಿಲ್ಲೆಯಲ್ಲಿ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ವೆಬ್ಕಾಸ್ಟಿಂಗ್/ಸಿ.ಪಿ.ಎಂ.ಎಫ್ ನಿಯೋಜನೆ/ವೀಡಿಯೋಗ್ರಾಫಿ ಮತ್ತು ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದವರು ತಿಳಿಸಿದರು. ಮತದಾನಕ್ಕೆ ಮೊದಲು ಅಣುಕು ಮತದಾನ ನಡೆಸಬೇಕಾಗಿರುವುದರಿಂದ ಎಲ್ಲ ಪೊಲಿಂಗ್ ಏಜೆಂಟರು ಬೆಳಗ್ಗೆ 5.45ಕ್ಕೆ ಮತದಾನ ಕೇಂದ್ರದಲ್ಲಿ ಹಾಜರಿರುವಂತೆ ತಿಳಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.
ಅಭ್ಯರ್ಥಿಗಳ ಚುನಾವಣಾ ಬೂತು
ಮತಗಟ್ಟೆಯಿಂದ 200 ಮೀ. ದೂರದಲ್ಲಿ ಅಭ್ಯರ್ಥಿಯ ಬೂತು ನಿರ್ಮಿಸಲು ಅವಕಾಶವಿರುತ್ತದೆ. ಈ ಬೂತಿನಲ್ಲಿ 1 ಮೇಜು, 2 ಕುರ್ಚಿಗಳು ಮತ್ತು 3 ಅಡಿ x 1.5 ಅಡಿ ಅಗಲದ ಬ್ಯಾನರನ್ನು ಉಪಯೋಗಿಸಬಹುದಾಗಿದೆ. ಆದರೆ ಬೂತುಗಳನ್ನು ನಿರ್ಮಿಸುವ ಬಗ್ಗೆ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ. ಮತದಾನ ದಿನಾಂಕದಂದು ಮತಗಟ್ಟೆಯ 100 ಮೀ. ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.
ಮೇ 11 ಮತ್ತು 12ರಂದು ಅಭ್ಯರ್ಥಿ 1, ಚುನಾವಣೆ ಏಜೆಂಟ್ 1 ಮತ್ತು ಪಕ್ಷದ ಕಾರ್ಯಕರ್ತರು 1 ವಾಹನ ಸೇರಿ ಒಟ್ಟು ಮೂರು ವಾಹನಗಳನ್ನು ಅನುಮತಿ ಪಡೆದು ಉಪಯೋಗಿಸಲು ಅವಕಾಶವಿರುತ್ತದೆ. ಹಾಗೂ ವಾಹನದಲ್ಲಿ ವಾಹನ ಚಾಲಕ ಸೇರಿ ಒಟ್ಟು 5 ಮಂದಿ ಪ್ರಯಾಣಿಸಬಹುದಾಗಿದೆ ಎಂದು ಚುನಾವಣಾಧಿಕಾರಿಯವರು ತಿಳಿಸಿದರು.
1.80 ಕೋ.ರೂ ಮೌಲ್ಯದ ಅಕ್ರಮ ಮದ್ಯ ವಶ
ಜಿಲ್ಲೆಯಲ್ಲಿ ಅನಧೀಕೃತ 15,89,500 ರೂ. ನಗದು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು ಇದರಲ್ಲಿ 12,89,500 ರೂಪಾಯಿಯನ್ನು ಸಂಬಂಧಪಟ್ಟವರ ದಾಖಲೆ ಇತ್ಯಾದಿಗಳನ್ನು ಪರಿಶೀಲಿಸಿ ಜಿಲ್ಲಾ ಪರಿಹಾರ ಸಮಿತಿ ಬಿಡುಗಡೆಗೊಳಿಸಿದೆ. 31763.605 ಲೀಟರ್ ಅಕ್ರಮ ಸಂಗ್ರಹ ಮತ್ತು ಮಾರಾಟ ಮದ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು ಇದರ ಅಂದಾಜು ಮೌಲ್ಯ 1,80,95,794 ರೂ.ಆಗಿರುತ್ತದೆ. 9 ವಾಹನಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?