ಉಳಿಯದಲ್ಲಿ 50ಕ್ಕೂ ಅಧಿಕ ಮನೆಗಳು ಜಲಾವೃತ
Team Udayavani, Aug 18, 2018, 11:47 AM IST
ಉಳ್ಳಾಲ: ಹಲವು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆ ಶುಕ್ರವಾರ ಕಡಿಮೆಯಾದರೂ ಉಳ್ಳಾಲದಾದ್ಯಂತ ನೇತ್ರಾವತಿ ನದಿ ಹರಿವು ಕಡಿಮೆಯಾಗಿಲ್ಲ. ಉಳ್ಳಾಲ ಉಳಿಯ ಸಹಿತ ನದಿ ತೀರದ ಸುಮಾರು 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಉಳ್ಳಾಲ ಉಳಿಯದಲ್ಲಿ ವಿಲ್ಫ್ರೆಡ್ ಡಿ’ಸೋಜಾ, ಹೆಂಡ್ರಿ ಡಿ’ಸೋಜಾ, ಸುನಿಲ್, ಭವಾನಿ, ಜಗದೀಶ್, ಲ್ಯಾನ್ಸಿ ಡಿ’ಸೋಜಾ, ರುಫೀನಾ ಡಿ’ಸೋಜಾ, ರೆಮೇಝಾ, ಫೆಲಿಕ್ಸ್ ಡಿ’ಸೋಜಾ, ಸ್ಟೀವನ್, ಪ್ರವೀಣ್ ಕುಟಿನ್ಹಾ, ರಾಬರ್ಟ್ ಡಿ’ಸೋಜಾ, ಸ್ಟೆಲ್ಲಾ, ರಚನಾ, ಸುಝಾನ ಡಿ’ಸೋಜಾ ಅವರ ಮನೆಗಳು ಜಲಾವೃತವಾಗಿದೆ.
ಅಪಾಯದಲ್ಲಿ ಕುದ್ರು ಪ್ರದೇಶಗಳು
ಪಾವೂರು ಉಳಿಯ ಕುದ್ರು, ಹರೇಕಳ ಸಮೀಪದ ಕೊಟ್ಟಾರಿ ಕುದ್ರು, ಸೋಮನಾಥ ಉಳಿಯ ಸಮೀಪದ ರಾಣಿಪುರ ಕುದ್ರುವಿನ ಒಳಭಾಗದಲ್ಲಿ ನೇತ್ರಾವತಿ ನದಿ ನೆರೆ ಬಂದಿದ್ದು ಈ ವ್ಯಾಪ್ತಿಯ ಜನರು ಆತಂಕದಲ್ಲಿದ್ದರು. ಉಳಿದಂತೆ ಉಳ್ಳಾಲ ಹೊಗೆ, ರಾಣಿಪುರ ಸೋಮನಾಥ ಉಳಿಯದಲ್ಲಿ ನೆರೆ ನೀರು ಹರಿದಿದೆ.
ತಾ.ಪಂ. ಅಧ್ಯಕ್ಷರು ಭೇಟಿ
ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ನೆರೆಯಿಂದ ಆವೃತವಾದ ಪಾವೂರು ಉಳಿಯ ಕುದ್ರುವಿಗೆ ಯಾಂತ್ರಿಕೃತ ದೋಣಿಯ ಮೂಲಕ ಭೇಟಿ ನೀಡಿ ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬಿದರು.
ಉಳ್ಳಾದಲ್ಲಿ ಸಮುದ್ರ ಬಿರುಸು
ಉಳ್ಳಾಲ ಮತ್ತು ಮೊಗ ವೀರ ಪಟಣ್ಣ, ಕೈಕೋ, ಕಿಲೇ ರಿಯಾ ನಗರ, ಸುಭಾಷ್ ನಗರ, ಸೀಗ್ರೌಂಡ್ ವ್ಯಾಪ್ತಿಯಲ್ಲಿ ಸಮುದ್ರದ ಅಲೆಗಳ ಬಿರುಸು ಎಂದಿನಂತೆ ಇದೆ. ಸೋಮೇ ಶ್ವರ, ಉಚ್ಚಿಲದಲ್ಲೂ ಸಮುದ್ರದ ದೊಡ್ಡ ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.