ಹೊಗೆಯಾಡುತ್ತಲೇ ಇದೆ ಪಚ್ಚನಾಡಿ ತ್ಯಾಜ್ಯರಾಶಿ
ಬೆಂಕಿ ನಂದಿಸಲು ಅಗ್ನಿಶಾಮಕ ದಳದಿಂದ ಹರಸಾಹಸ
Team Udayavani, Jan 8, 2023, 6:30 AM IST
ಪಚ್ಚನಾಡಿ: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಉಂಟಾಗಿರುವ ಬೆಂಕಿಯನ್ನು ನಂದಿಸುವ ಕೆಲಸ ಶನಿವಾರವೂ ಮುಂದುವರಿದಿದೆ. ಸುಮಾರು 6 ಅಗ್ನಿಶಾಮಕ ವಾಹನ, ಸಿಬಂದಿ ಕಾರ್ಯಚರಣೆ ಬೆಂಬಲವಾಗಿ ಟ್ಯಾಂಕರ್ಗಳ ನಿರಂತರ ನೀರು ಸರಬರಾಜು ನಡೆಯುತ್ತಿದೆ.
ಶುಕ್ರವಾರ ಮಧ್ಯಾಹ್ನ ವೇಳೆ ಪಚ್ಚನಾಡಿಯಲ್ಲಿ ತ್ಯಾಜ್ಯದ ರಾಶಿಯ ಒಂದು ಭಾಗದಲ್ಲಿ ಬೆಂಕಿ ಕಾಣಿಸಿ ಬಳಿಕ ಇತರ ಕಡೆಗಳಿಗೂ ವ್ಯಾಪಿಸಿತ್ತು. ತತ್ಕ್ಷಣದಿಂದಲೇ ಆರಂಭವಾದ ಕಾರ್ಯಾಚರಣೆ ಶನಿವಾರವೂ ದಿನವಿಡೀ ನಡೆಯಿತು. ಹಲವು ಎಕ್ರೆ ಪ್ರದೇಶದಲ್ಲಿ ಬೆಂಕಿಯ ಹೊಗೆಯಾ ಡುತ್ತಿರು ವುದರಿಂದ ಮೂರು, ನಾಲ್ಕು ಕಡೆಗಳಲ್ಲಿ ಅಗ್ನಿ ಶಾಮಕ ವಾಹನಗಳ ಮೂಲಕ ಸಿಬಂದಿ ಬೆಂಕಿ ನಂದಿಸುವಲ್ಲಿ ಶ್ರಮಿಸುತ್ತಿದ್ದಾರೆ. ಕದ್ರಿ, ಪಾಂಡೇಶ್ವರ ಅಗ್ನಿಶಾಮಕ ದಳ ಸಿಬಂದಿ ಜತೆ ಎಂಎಸ್ಇಝೆಡ್, ಕೆಐಒಸಿಎಲ್, ಎಚ್ಪಿಸಿಎಲ್, ಎನ್ಎಂಪಿಎ, ಮಂಗಳೂರು ವಿಮಾನ ನಿಲ್ದಾಣದ ಅಗ್ನಿ ಶಾಮಕ ವಾಹನ, ಸಿಬಂದಿಯವರೂ ಕಾರ್ಯನಿರತರಾಗಿದ್ದಾರೆ. ಸ್ಥಳಕ್ಕೆ ಶನಿವಾರವೂ ಪಾಲಿಕೆ ಸದಸ್ಯರಾದ ಭಾಸ್ಕರ ಕೆ., ಹೇಮಲತಾ ರಘು ಸಾಲ್ಯಾನ್, ಸಂಗೀತಾ ನಾಯಕ್ ಮೊದಲಾದವರು ಭೇಟಿ ನೀಡಿದ್ದು, ಅಧಿಕಾರಿಗಳಿಗೆ ಸಲಹೆ ಸೂಚನೆ ಗಳನ್ನು ನೀಡಿದ್ದಾರೆ.
ಟ್ಯಾಂಕರ್ಗಳಲ್ಲಿ ನೀರು ಪೂರೈಕೆ
ಅಗ್ನಿ ಶಾಮಕದಳದ ವಾಹನಗಳಿಗೆ ಟ್ಯಾಂಕರ್ಗಳ ಮೂಲಕ ಕುಡುಪು, ವಾಮಂಜೂರು, ಪಚ್ಚನಾಡಿ, ಕೂಳೂರು ಸಹಿ ತ ಬೆಂದೂರಿನ ಪಂಪ್ಹೌಸ್, ಕೊಟ್ಟಾರದಿಂದಲೂ ನೀರು ಪೂರೈಕೆ ಮಾಡಲಾಗುತ್ತಿದೆ. 3 ಸಾವಿರ ಲೀ. ಸಾಮರ್ಥ್ಯದ, ಸಾವಿರ ಲೀ. ಸಾಮರ್ಥ್ಯದ ತಲಾ 2 ಟ್ಯಾಂಕರ್, 12 ಸಾವಿರ ಲೀ. ಸಾಮರ್ಥ್ಯದ 5 ಟ್ಯಾಂಕರ್ಗಳಲ್ಲಿ ನಿರಂತರವಾಗಿ ನೀರು ಪೂರೈಕೆ ನಡೆದಿದೆ.
ಸುತ್ತಮುತ್ತ ವ್ಯಾಪಿಸಿದ ಹೊಗೆ
ಯಾರ್ಡ್ನಿಂದ ಏಳುತ್ತಿರುವ ಹೊಗೆ ಗಾಳಿ ಬಂದ ದಿಕ್ಕಿನತ್ತ ಸಾಗುತ್ತಿದ್ದು. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಗೆ ಆವರಿಸಿಕೊಂಡಿದೆ. ಅದರಲ್ಲೂ ಯೆಯ್ನಾಡಿ, ಪದವಿನಂದಗಡಿ, ಬೊಂದೇಲ್, ಕುಡುಪು, ಮಂದಾರ, ವಾಮಂಜೂರು ಭಾಗದಲ್ಲಿ ವಾತಾವರಣದಲ್ಲಿ ಘಾಟು ಸಹಿತ ಹೊಗೆ ವ್ಯಾಪಿಸಿದೆ. ಬೆಂಕಿಕಾಣಿಸಿಕೊಂಡಿರುವ ಸ್ಥಳದ ಪಕ್ಕದಲ್ಲೇ ಇರುವ ಮಂದಾರ ಪ್ರದೇಶದಲ್ಲಿಯೂ ದಟ್ಟವಾದ ಹೊಗೆ ಆಗಾಗ್ಗೆ ಆವರಿಸಿಕೊಳ್ಳುತ್ತಿದೆ. ಇದರಿಂದ ಸುಮಾರು 20-30 ಮನೆಗಳಿದ್ದು, ಹೊಗೆಯಿಂದ ಮನೆಯವರು ಸಮಸ್ಯೆ ಅನುಭವಿಸುತ್ತಿದ್ದಾರೆ. ರಾತ್ರಿ ಮತ್ತು ಬೆಳಗ್ಗಿನ ಹೊತ್ತು ದಟ್ಟವಾದ ಮಂಜು ಕವಿದಂತೆ ಹೊಗೆ ಇತ್ತು. ಮನೆಯ ಬಾಗಿಲು ತೆರದಿಡಲು, ಹೊರಗೆ ಬರಲು ಅಸಾಧ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.
ಕಾರ್ಯಾಚರಣೆಗೂ ಹೊಗೆ ಅಡ್ಡಿ
ಸ್ಥಳದಲ್ಲಿ ದಟ್ಟ ಹೊಗೆ ವ್ಯಾಪಿಸಿಕೊಂಡು ಕಾರ್ಯಾ ಚರಣೆಗೂ ಅಡ್ಡಿಯಾಗುತ್ತಿದೆ. ಕೆಲವು ಸಲ ಏನೂ ಕಾಣಿಸದೆ, ಮುಂದುವರಿಯಲು ಸಾಧ್ಯವಾಗುವುದಿಲ್ಲ. ತ್ಯಾಜ್ಯ ಸಂಪೂರ್ಣವಾಗಿ ಒದ್ದೆಯಾದರೆ ಸ್ವಲ್ಪ ಮಟ್ಟಿಗೆ ಹೊಗೆ ಕಡಿಮೆ ಯಾಗಬಹುದು. ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಹೊಗೆಯಾಡುತ್ತಿರುವುದರಿಂದ ಒಮ್ಮೆಲೇ ಅದು ನಂದಿ ಹೋಗುವುದೂ ಇಲ್ಲ. ಬೆಂಕಿ ನಂದಿಸಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ ಅಗ್ನಿಶಾಮಕ ದಳದ ಅಧಿಕಾರಿಗಳು.
ಶಾಲೆಗೆ ರಜೆ
ಬೆಂಕಿ ಆವರಿಸಿದ ಹಿನ್ನೆಲೆಯಲ್ಲಿ ಡಂಪಿಂಗ್ ಯಾರ್ಡ್ ಪಕ್ಕದಲ್ಲೇ ಇರುವ ವಾಮಂಜೂರಿನ ಮಂಗಳ ಜ್ಯೋತಿ ಶಾಲೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ರಜೆ ಘೋಷಿಸಲಾಯಿತು.
ಹೊಗೆ ಮತ್ತು ವಾಸನೆಯಿಂದ ಮಕ್ಕಳಿಗೆ ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕೆ ರಜೆ ನೀಡಲಾಗಿದೆ ಎಂದು ಕಾರ್ಪೋರೆಟರ್ ಭಾಸ್ಕರ ಕೆ. ಅವರು ಉದಯವಾಣಿಗೆ ತಿಳಿಸಿದ್ದಾರೆ.
ಕಾರ್ಯಾಚರಣೆ ಮುಂದುವರಿದಿದೆ
ಶುಕ್ರವಾರ ರಾತ್ರಿ ಸುಮಾರು 2 ಗಂಟೆಯ ವರೆಗೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು. ಶನಿವಾರ ಬೆಳಗ್ಗೆ 6.30ರಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದ್ದು. ಬೆಂಕಿ ತ್ಯಾಜ್ಯ ರಾಶಿಯ ಮಧ್ಯ ಭಾಗದಲ್ಲಿರುವುದರಿಂದ ಅಗ್ನಿ ಶಾಮಕದಳದ ವಾಹನಗಳಿಗೆ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹಿಟಾಚಿ ಮೂಲಕ ತ್ಯಾಜ್ಯವನ್ನು ಸರಿಸುವ ಕೆಲಸ ನಡೆಯುತ್ತಿದೆ.
-ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ
ಪ್ರತ್ಯಕ್ಷ ವರದಿ: ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ