ಪ.ವಾ ಯೋಜನೆ; ಬಜೆಟ್ನಲ್ಲಿ 1,000 ಕೋ. ರೂ. ಒದಗಿಸಲು ಬಾವಾ ಆಗ್ರಹ
Team Udayavani, Feb 9, 2017, 3:45 AM IST
ಮಂಗಳೂರು: ಸರಕಾರ ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಂಡಿರುವುದರಿಂದ ಹಾಗೂ ಈ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಶ್ಚಿಮ ವಾಹಿನಿ ಯೋಜನೆಗೆ ಈ ವರ್ಷದ ಬಜೆಟ್ನಲ್ಲಿ 1,000 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಶಾಸಕ ಬಿ.ಎ. ಮೊದಿನ್ ಬಾವಾ ಬುಧವಾರ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 200 ಎಕರೆ ಹೆಚ್ಚುವರಿ ಜಮೀನಿನ ಬೇಡಿಕೆ ಮಂಡಿಸಿರುವುದರಿಂದ ಈ ಜಮೀನಿಗೆ ಸಂಬಂಧಿಸಿ ಸೂಕ್ತ ಪರಿಹಾರ ಧನವನ್ನು ಸಂತ್ರಸ್ತರಿಗೆ ಒದಗಿಸಬೇಕು ಹಾಗೂ ತನ್ಮೂಲಕ ಮಂಗಳೂರು ರಾಜ್ಯದ 2ನೇ ಆರ್ಥಿಕ ರಾಜಧಾನಿಯಾಗಿ ಬೆಳವಣಿಗೆ ಹೊಂದಲು ನೆರವಾಗಬೇಕು ಎಂದು ಅವರು ಆಗ್ರಹಿಸಿದರು.
ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಒದಗಿಸುವ ಹಣದ ಹೊರತಾಗಿ 4ನೇ ನಗರೋತ್ಥಾನ ಯೋಜನೆಯಲ್ಲಿ 100 ಕೋಟಿ ರೂ.ಗಳನ್ನು ಮಂಜೂರು ಮಾಡಬೇಕೆಂದೂ ಅವರು ಆಗ್ರಹಿಸಿದರು. ಜಿಲ್ಲೆಯ ಶಾಸಕರ, ಅಧಿಕಾರಿಗಳ ಸಭೆ
ಮುಂದಿನ ಮಂಗಳವಾರ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಮತ್ತು ಅಧಿಕಾರಿಗಳ ಸಭೆ ಕರೆದಿದ್ದು, ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಗುವುದು ಎಂದು ಬಿ.ಎ. ಮೊದಿನ್ ಬಾವಾ ತಿಳಿಸಿದ್ದಾರೆ.
ಶ್ರೀನಿವಾಸ ಮಲ್ಯ ಭವನಕ್ಕೆ ಮತ್ತೆ 1 ಕೋ. ರೂ.
ಸುರತ್ಕಲ್ನಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀನಿವಾಸ ಮಲ್ಯ ಭವನಕ್ಕೆ ಕಳೆದ ವರ್ಷ 1 ಕೋಟಿ ರೂ. ಸರಕಾರ ಒದಗಿಸಿದ್ದು, ಕಾಮಗಾರಿ ನಡೆಯುತ್ತಿದೆ. ಇದೀಗ ಈ ವರ್ಷ ಮತ್ತೆ 1 ಕೋಟಿ ರೂ. ಗಳನ್ನು ಮುಖ್ಯಮಂತ್ರಿ ಒದಗಿಸಿದ್ದಾರೆ ಎಂದು ಶಾಸಕ ಬಿ.ಎ. ಮೊದಿನ್ ಬಾವಾ ತಿಳಿಸಿದ್ದಾರೆ.