55 ಕೋಟಿ ರೂ. ಅಕ್ರಮ ವರ್ಗಾವಣೆ: ಐವರ ಸೆರೆ
Team Udayavani, Nov 29, 2017, 10:52 AM IST
ಸುರತ್ಕಲ್: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆ ಠೇವಣಿ ಇಟ್ಟಿದ್ದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಸ್ವಂತಕ್ಕೆ ಬಳಸಿದ ಐಒಬಿ ಕುಳಾ ಶಾಖೆಯ ಮ್ಯಾನೇಜರ್ ಸಹಿತ ಐವರು ಅಧಿಕಾರಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಐಒಬಿ ರೀಜನಲ್ ಕಚೇರಿಯ ಮ್ಯಾನೇಜರ್ ಸೆರಿನ್ ಮಧುಸೂದನ್, ಸಿಜೋ, ಸುನಿಲ್, ಜೆರಿ ಮತ್ತು ಸಲಾಮ್ ಬಂಧಿತರು. ಅವರಿಗೆ
ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಆರ್ಐಡಿಎಲ್ನ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆ ಚುರುಕುಗೊಳಿಸಲಾಗಿತ್ತು. ಇದೀಗ ಬ್ಯಾಂಕ್ ಅಧಿಕಾರಿಗಳ ಕೈವಾಡದಿಂದ ಹಣ ದರ್ಬಳಕೆಯಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಕೆಆರ್ ಐಡಿಎಲ್ ಬ್ಯಾಂಕ್ ಖಾತೆಯಿಂದ 55 ಕೋಟಿ ರೂ. ಅಕ್ರಮ ವರ್ಗಾವಣೆಯಾಗಿದ್ದು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಬ್ಯಾಂಕ್ ಮ್ಯಾನೇಜರ್ ತಲೆಮರೆಸಿಕೊಂಡಿದ್ದರು.
ಇನ್ಸ್ಪೆಕ್ಟರ್ ಚೆಲುವರಾಜ್ ನೇತೃತ್ವದಲ್ಲಿ ಸಂಸ್ಥೆಯ ಅಧಿಕಾರಿಗಳ ಸಹಿತ ಕುಳಾçಯಲ್ಲಿರುವ ಐಒಬಿ ಶಾಖೆಯಲ್ಲಿ ತನಿಖೆ ನಡೆಸಿದ್ದರು. ತಡರಾತ್ರಿ ವರೆಗೆ ದಾಖಲೆಗಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದರು.