ಕದಿಕೆ ಸೇತುವೆಯಲ್ಲಿ ಎರಡನೇ ಹಂತದ ಕಾಮಗಾರಿ
ಹಿಟಾಚಿ ಬಳಸಿ ಹೂಳೆತ್ತುವಿಕೆಗೆ ಚಾಲನೆ
Team Udayavani, May 26, 2019, 6:00 AM IST
ಸಸಿಹಿತ್ಲು: ಇಲ್ಲಿನ ಕದಿಕೆ ಸೇತುವೆಯಲ್ಲಿ ಎರಡನೇ ಹಂತದ ಕಾಮಗಾರಿಯಾಗಿ ಹೂಳೆತ್ತಲು ವಿವಿಧ ಯಂತ್ರಗಳನ್ನು ಬಳಸಲಾಗುತ್ತಿದೆ. ಮೊದಲನೇ ಹಂತದಲ್ಲಿ 10 ಮಂದಿ ಶ್ರಮಿಕ ವರ್ಗದವರು ಹೂಳೆತ್ತುವ ಕಾರ್ಯ ನಡೆಸಿದ್ದರು.
ಮುಂಡ ಬೀಚ್ನಲ್ಲಿ ತೀವ್ರವಾದ ನದಿ ಕೊರೆ ತಕ್ಕೆ ಪರೋಕ್ಷವಾಗಿ ಕಾರಣವಾಗಿರುವ ವಿವಿಧ ಸೇತುವೆಗಳ ಹೂಳು ತೆರವುಗೊಳಿಸುವ ಕಾರ್ಯ ಕಳೆದ ಇಪ್ಪತ್ತು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಆರಂಭದಲ್ಲಿ ಪಾವಂಜೆ ಹೆದ್ದಾರಿಯ ಸೇತುವೆಯ ಕೆಳಗೆ ನಡೆದು ಸಾಕಷ್ಟು ಹೂಳನ್ನು ತೆರವು ಮಾಡಲಾಗಿದೆ.
ಕದಿಕೆ ಸೇತುವೆಯಲ್ಲೂ ಎರಡು ಹಂತದಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಸೇತುವೆಯ ಮೂರು ಕಂಬಗಳ ನಡುವೆ ಮಣ್ಣು ಇದ್ದು, ಇದು ಸೇತುವೆ ನಿರ್ಮಾಣವಾಗುವಾಗ ತಾತ್ಕಾಲಿಕವಾಗಿ ನಿರ್ಮಿ ಸಲಾಗಿತ್ತು. ಸುಮಾರು 5 ವರ್ಷದಿಂದ ಇರುವ ಈ ಮಣ್ಣಿನ ಸುತ್ತ ನೀರು ಸರಾಗವಾಗಿ ಹರಿದು ಗಟ್ಟಿಗೊಂಡಿದ್ದು ಮಾನವ ಶ್ರಮದಿಂದ ಒಂದು ವಾರ ತೆರವು ಕಾರ್ಯಾಚರಣೆ ನಡೆಸಿ ದರು. ಸಂಪೂರ್ಣವಾಗಿ ತೆರವು ಮಾಡಲು ಸಾಧ್ಯವಾ ಗದಿದ್ದರಿಂದ ಹಿಟಾಚಿಯನ್ನು ಬಳಸಲಾಗುತ್ತಿದೆ.
ಬೃಹತ್ ಕ್ರೇನ್ ಮೂಲಕ ಹಿಟಾಚಿಯನ್ನು ಸೇತು ವೆಯ ಮೇಲಿನಿಂದ ಕೆಳಗಿಳಿಸಿ,ಹಿಟಾಚಿಯ ಬಕೆಟ್ನ ಮೂಲಕ ಮಣ್ಣನ್ನು ತೆರವು ಮಾಡಲಾಗುತ್ತಿದೆ ಒಂದು ಬಾರಿ ತೆಗೆದ ಮಣ್ಣು ಸಾಧಾರಣ ಒಂದು ಟನ್ನ ಬಕೆಟ್ನಲ್ಲಿ ಪ್ರತ್ಯೇಕವಾಗಿ ಹಾಕಿ ಅದನ್ನು ಕ್ರೇನ್ ಮೂಲಕ ಲಾರಿಗೆ ತುಂಬಿಸಿ ತೆರವು ಮಾಡಲಾಗುತ್ತಿದೆ.
ದೋಣಿಯ ಮೂಲಕ ದಡಕ್ಕೆ ಸಾಗಾಟ
ಆರಂಭದಲ್ಲಿ ಕಾರ್ಮಿಕರು ಹೂಳನ್ನು ತೆರವು ಮಾಡಲು ಹಗ್ಗದ ಮೂಲಕ ಹಾಗೂ ನದಿಯಲ್ಲಿ ಈಜಿಕೊಂಡು ತೆರಳಿದ್ದು ಅಲ್ಲಿನ ಗಟ್ಟಿಯಾದ ಮಣ್ಣನ್ನು ತೆರವು ಮಾಡಿ ದೋಣಿಯ ಮೂಲಕ ದಡಕ್ಕೆ ಸಾಗಾಟ ನಡೆಸುವ ಕಾರ್ಯ ನಿಧಾನವಾಗಿ ನಡೆಯುತ್ತಿದ್ದರಿಂದ ಈ ಬದಲಾವಣೆ ನಡೆಸಲಾಗಿದೆ. ಮಳೆ ಸುರಿಯಲು ಆರಂಭವಾದಲ್ಲಿ ಮಣ್ಣು ತೆಗೆಯಲು ತೊಡಕಾಗಬಹುದು ಎಂಬ ಆತಂಕದಿಂದ ಕಾಮಗಾರಿಯನ್ನು ತುರ್ತಾಗಿ ನಡೆಸಲಾಗುತ್ತಿದೆ.
ತಾ.ಪಂ. ಸದಸ್ಯ ಜೀವನ್ಪ್ರಕಾಶ್ ಕಾಮೆರೊಟ್ಟು, ಮೀನುಗಾರರ ಮುಖಂಡ ಶೋಭೇಂದ್ರ ಸಸಿಹಿತ್ಲು, ಹಳೆಯಂಗಡಿ ಗ್ರಾಮ ಪಂಚಾಯತ್ನ ಸದಸ್ಯರಾದ ಅಶೋಕ್ ಬಂಗೇರ, ಚಿತ್ರಾ ಸುಖೇಶ್, ವಿನೋದ್ಕುಮಾರ್ ಕೊಳುವೈಲು, ಸ್ಥಳೀಯರಾದ ಅನಂದ ಸುವರ್ಣ, ಸೂರ್ಯ ಕಾಂಚನ್ ಹಾಗೂ ಸಾಮಾಜಿಕ ಕಾರ್ಯಕರ್ತ ಮನೋಜ್ಕುಮಾರ್ ಕೆಲಸಿಬೆಟ್ಟು ಉಪಸ್ಥಿತರಿದ್ದರು.
ಜನ ಪ್ರತಿನಿಧಿಗಳ ಭೇಟಿ
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿಯವರೊಂದಿಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳೀಯರ ನಿಯೋಗದ ಮೂಲಕ ನಡೆದ ಮಾತುಕತೆಯ ಪ್ರಯತ್ನದಿಂದ ಕಳೆದ ಐದು ವರ್ಷದಿಂದ ಬೇಡಿಕೆಯಾಗಿದ್ದ ಹೂಳೆತ್ತುವ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯೇ ಇದರ ನಿರ್ವಹಣೆ ನಡೆಸುತ್ತಿರುವುದರಿಂದ ಇಲಾಖೆಯ ಎಂಜಿನಿಯರ್ ಮಾರ್ಗದರ್ಶನದಲ್ಲಿ ಹೂಳೆತ್ತಲಾಗುತ್ತಿದೆ. ಸೇತುವೆಯ ನಿರ್ಮಾಣದ ಸಮಯದಲ್ಲಿಯೇ ತೆರವು ಮಾಡಿದ್ದಲ್ಲಿ ಇಷ್ಟೊಂದು ಸುದೀರ್ಘ ದಿನದಲ್ಲಿ ಕಾಮಗಾರಿ ನಡೆಯುತ್ತಿರಲಿಲ್ಲ ಎಂದರು.