ಹಿಂದೂ ಯುವಕರಿಬ್ಬರ ಹತ್ಯೆಗೆ ಸ್ಕೆಚ್: ಐವರು ಆರೋಪಿಗಳ ಸೆರೆ
Team Udayavani, Aug 30, 2017, 7:23 AM IST
ಉಳ್ಳಾಲ: ಹಿಂದೂ ಯುವಕರಿಬ್ಬರ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಐವರನ್ನು ಎಸಿಪಿ ನೇತೃತ್ವದ ವಿಶೇಷ ಪೊಲೀಸ್ ತಂಡ ಮತ್ತು ಉಳ್ಳಾಲ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮದನಿನಗರ ನಿವಾಸಿಗಳಾದ ತಸ್ಲೀಂ(24), ರಮೀಜ್ (20), ಖುರ್ಷಿದ್ (20), ನವಾಝ್ (24), ಅಂಬ್ಲಿಮೊಗರು ನಿವಾಸಿಗಳಾದ ನೌಷಾದ್ (32) ಬಂಧಿತರು. ತೊಕ್ಕೊಟ್ಟು ಓವರ್ಬ್ರಿಡ್ಜ್ ಬಳಿ 2016ರ ಎ.26ರಂದು ನಡೆದ ಸಫಾÌನ್ ಕೊಲೆಗೆ ಪ್ರತಿಕಾರವಾಗಿ, ಸಫಾÌನ್ ಕೊಲೆಯ ಆರೋಪಿ ಸಹಿತ ಕುತ್ತಾರ್ ಮೂಲದ ಹಿಂದೂ ಯುವಕರನ್ನು ಹತ್ಯೆ ನಡೆಸುವ ನಿಟ್ಟಿನಲ್ಲಿ ಸ್ಕೆಚ್ ರೂಪಿಸಿದ್ದ ಈ ಆರೋಪಿಗಳು 2017ರ ಜೂ.18ರಂದು ಕುತ್ತಾರು ಸಮೀಪ ಗಂಗಾಧರ್ ಅವರ ತಲೆಗೆ ಸೋಡಾ ಬಾಟಲಿಯಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದರು. ಆದರೆ ಆರೋಪಿಗಳಿಂದ ತಪ್ಪಿಸಿಕೊಂಡಿದ್ದ ಗಂಗಾಧರ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಹತ್ಯೆ ಯತ್ನ ಪ್ರಕರಣದಿಂದ ಬೆಳಕಿಗೆ: ಬೈಕ್ನಲ್ಲಿ ಆಗಮಿಸಿ ಮುನ್ನೂರು ಗ್ರಾಮದ ರಾಣಿಪುರ ಬಳಿಯ ದೆಕ್ಕಾಡಿನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ರಾಮಮೋಹನ್ ಮತ್ತು ಚಿರಂಜೀವಿ ಅವರನ್ನು ತಲವಾರಿನಿಂದ ಕಡಿದು ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನವಾಗಿ ಪ್ರಾರಂಭಗೊಂಡಿರುವ ಎಸಿಪಿ ನೇತೃತ್ವದ ವಿಶೇಷ ಪೊಲೀಸ್ ತಂಡ ತನಿಖೆ ನಡೆಸುತ್ತಿದ್ದಾಗ ಕೊಲೆಗೆ ಸ್ಕಚ್ ರೂಪಿಸಿದ ವಿಚಾರ ಬೆಳಕಿಗೆ ಬಂದಿದೆ.