ದರ್ಬೆ ತೋಡಿಗೆ ಕಿರುಸೇತುವೆ: ಕಾಮಗಾರಿ ವಿಳಂಬ
Team Udayavani, May 21, 2019, 10:26 AM IST
ನಗರ : ರಾಜ್ಯ ಸರಕಾರವು ಎರಡು ವರ್ಷಗಳ ಹಿಂದೆ ಪುತ್ತೂರಿಗೆ ನೀಡಿರುವ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ದರ್ಬೆಯ ಕಿರು ಸೇತುವೆ ಕಾಮಗಾರಿ ವಿಳಂಬವಾಗಿ ಆರಂಭ ಗೊಂಡಿದ್ದು, ಕೆಲಸವೂ ಆಮೆಗತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ನಗರಸಭೆ ಈ ಕಾಮಗಾರಿಯನ್ನು ಜೂನ್ 15ರೊಳಗೆ ಮುಗಿಸುವ ಯೋಚನೆಯಲ್ಲಿದೆ.
ಸರಕಾರವು ನಗರೋತ್ಥಾನ ಯೋಜನೆಯಲ್ಲಿ ಪುತ್ತೂರಿಗೆ 25 ಕೋಟಿ ರೂ. ನೀಡಿದ್ದು, ಅದರಲ್ಲಿ 15 ಲಕ್ಷ ರೂ.ಗಳಲ್ಲಿ ದರ್ಬೆಯಲ್ಲಿ ಹರಿಯುತ್ತಿರುವ ತೋಡಿಗೆ ಕಿರುಸೇತುವೆ ಸಹಿತ 20 ಕಾಮಗಾರಿಗಳ ಪಟ್ಟಿ ಮಾಡಲಾಗಿತ್ತು. ಹಿಂದೆ ತೋಡಿಗೆ ಮೋರಿ ಅಳವಡಿಸಿದ್ದ ಪರಿಣಾಮ ಅದು ಕಿರಿದಾಗಿ ಪದೇ ಪದೇ ಬ್ಲಾಕ್ ಆಗುವ ಸಮಸ್ಯೆ ಎದುರಾಗುತ್ತಿತ್ತು.
ಪ್ರಸ್ತುತ ಶೀಘ್ರ ಮಳೆಗಾಲ ಆರಂಭದ ಎಲ್ಲ ಲಕ್ಷಣಗಳು ಕಂಡುಬರುತ್ತಿರುವುದರಿಂದ ಕಿರುಸೇತುವೆ ಕಾಮಗಾರಿಯನ್ನು ಶೀಘ್ರ ಮುಗಿಸಬೇಕಿದೆ. ಆದರೆ ಈಗ ಒಂದು ಬದಿಯ ಕಾಮಗಾರಿ ಮಾತ್ರ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕವೇ ಮತ್ತೂಂದು ಬದಿಯ ಕಾಮಗಾರಿ ಆರಂಭಗೊಳ್ಳಬೇಕಿದೆ. ಹೀಗಾಗಿ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆಯೇ ಎಂಬ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಈ ತೋಡಿನ ಮೂಲಕ ಪಾಂಗಳಾಯಿ ಕಡೆಯಿಂದ ನೀರು ಹರಿದು ಬರುತ್ತಿದ್ದು, ದರ್ಬೆಯ ಮುಖ್ಯರಸ್ತೆಯನ್ನು ಹಾದು ಕೂರ್ನಡ್ಕ ಭಾಗಕ್ಕೆ ಹರಿಯುತ್ತದೆ. ಮಳೆಗಾಲದಲ್ಲಿ ತೋಡಿನಲ್ಲಿ ವ್ಯಾಪಕ ನೀರು ಹರಿಯುವುದರಿಂದ ಕೃತಕ ನೆರೆಯ ಭೀತಿಯ ಹಿನ್ನೆಲೆಯಲ್ಲಿ ಪ್ರಸ್ತುತ ಕಿರುಸೇತುವೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಹಿಂದಿನ ಮೋರಿಯನ್ನು ತೆಗೆದು ತೋಡನ್ನು ಅಗಲಗೊಳಿಸಿ, ಅದರ ಎರಡೂ ಭಾಗಗಳಲ್ಲಿ ಕಾಂಕ್ರೀಟ್ ತಡೆಗೋಡೆ ರಚನೆ ಮಾಡಿ ಬಳಿಕ ಮೇಲ್ಗಡೆ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ. ಪ್ರಸ್ತುತ ಡಿವೈಡರ್ನ ಒಂದು ಭಾಗದ ಕಾಮಗಾರಿ ನಡೆಯುತ್ತಿದ್ದು, ಮುಂದೆ ಅದೇ ರೀತಿ ಇನ್ನೊಂದು ಭಾಗದ ಕಾಮಗಾರಿ ನಡೆಯಲಿದೆ.
ಬಸ್ಸುಗಳಿಗೆ ಬದಲಿ ಮಾರ್ಗ
ಕಿರು ಸೇತುವೆಯ ಕಾಮಗಾರಿಯ ಹಿನ್ನೆಲೆಯಲ್ಲಿ ಪುತ್ತೂರು-ದರ್ಬೆ ಮಾರ್ಗ ದಲ್ಲಿ ಸಂಚರಿಸುವ ಬಸ್ಸುಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿವೆ. ಪುತ್ತೂರಿನಿಂದ ಸುಳ್ಯ, ಕುಂಬ್ರ, ಮಾಡಾವು, ಬೆಳ್ಳಾರೆ, ಸುಳ್ಯಪದವು, ಈಶ್ವರಮಂಗಲಕ್ಕೆ ಹೋಗುವ ಬಸ್ಸುಗಳು ಬಸ್ ನಿಲ್ದಾಣದಿಂದ ಎಂ.ಟಿ. ರೋಡ್ ಮೂಲಕ ತೆರಳಿ ಪರ್ಲಡ್ಕ-ಬೈಪಾಸ್ ಮೂಲಕ ತೆರಳುತ್ತವೆ. ಈ ಪ್ರದೇಶಗಳಿಗೆ ತೆರಳುವವರು ದರ್ಬೆ ಜಂಕ್ಷನ್ನಲ್ಲಿ ನಿಂತರೆ ಕಷ್ಟವಾಗಲಿದೆ. ಸವಣೂರು-ಕಾಣಿಯೂರು ಕಡೆಗೆ ತೆರಳುವ ಬಸ್ಸುಗಳು ಬೈಪಾಸ್ನಿಂದ ಮತ್ತೆ ದರ್ಬೆ ಜಂಕ್ಷನ್ ಮೂಲಕ ತೆರಳುತ್ತವೆ. ಈ ರೀತಿಯ ಗೊಂದಲ ಇರುವುದರಿಂದ ಶೀಘ್ರದಲ್ಲಿ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಬೇಕಿದೆ.
ಮಳೆಗಾಲ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಕಾಮಗಾರಿ ಇಷ್ಟು ವಿಳಂಬ ಏಕಾಯಿತು ಎಂದು ನಗರಸಭೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ತೋಡಿಗೆ ಅಡ್ಡಲಾಗಿ ಕೇಬಲ್ಗಳು ಹಾದು ಹೋಗಿರುವುದರಿಂದ ತೊಂದರೆಯಾಯಿತು. ಇದು ವಿಳಂಬಕ್ಕೂ ಕಾರಣವಾಗಿದೆ ಎಂಬ ಉತ್ತರ ನೀಡುತ್ತಾರೆ.
ಪ್ರಮುಖವಾಗಿ ಬಿಎಸ್ಸೆನ್ನೆಲ್ ಕೇಬಲ್ ಹಾದುಹೋಗಿದ್ದು, ಅವರು ಸೂಕ್ತ ಸಮಯದಲ್ಲಿ ಬಾರದೇ ಇದ್ದುದರಿಂದ ವಿಳಂಬವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಶಾಸಕ ಸಂಜೀವ ಮಠಂದೂರು, ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಭೇಟಿ ನೀಡಿ, ಶೀಘ್ರ ಮುಗಿಸುವಂತೆ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್