ಪಚ್ಚನಾಡಿಯಲ್ಲಿ ಮುಂದುವರಿದ ಕಾರ್ಯಾಚರಣೆ: ಪರಿಸರದಲ್ಲಿ ಘಾಟು ಹೊಗೆ
Team Udayavani, Jan 8, 2023, 7:45 AM IST
ಮಂಗಳೂರು: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಪ್ರದೇಶದ ಹಳೆಯ ಲ್ಯಾಂಡ್ ಫಿಲ್ಲಿಂಗ್ ಪ್ರದೇಶದಲ್ಲಿ ತ್ಯಾಜ್ಯಕ್ಕೆ ಬಿದ್ದರುವ ಬೆಂಕಿಯ ಜ್ವಾಲೆಗಳು ಕಡಿಮೆಯಾಗಿದ್ದರೂ ಹೊಗೆ ಮಾತ್ರ ಇನ್ನೂ ಏಳುತ್ತಲೇ ಇದೆ.
ಶುಕ್ರವಾರ ಮಧ್ಯಾಹ್ನ ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದಿದ್ದು, ತಡರಾತ್ರಿ ವರೆಗೂ ಶಮನ ಗೊಳಿಸುವ ಕೆಲಸ ಮಾಡಲಾಯಿತು. ಶನಿವಾರ ಮುಂಜಾನೆಯಿಂದ ಮತ್ತೆ ಕಾರ್ಯಾಚರಣೆ ನಡೆದಿದೆ. ಕದ್ರಿ ಮತ್ತು ಪಾಂಡೇಶ್ವರ ಮೊದಲಾದೆಡೆಗಳ 6 ಅಗ್ನಿಶಾಮಕ ವಾಹನಗಳು, ಸಿಬಂದಿ ಕಾರ್ಯಾಚರಣೆ ನಡೆಸಿದರು. ಜತೆಗೆ ಸುಮಾರು 9 ಟ್ಯಾಂಕರ್ಗಳ ನೆರವಿನಿಂದ ಅಗ್ನಿಶಾಮಕ ವಾಹನಗಳಿಗೆ ನಿರಂತರ ನೀರು ಪೂರೈಕೆ ಮಾಡಲಾಗಿದೆ.
ತ್ಯಾಜ್ಯದಿಂದ ದಿನವಿಡೀ ಹೊಗೆಯಾಡುತ್ತಿದ್ದು, ಬೋಂದೆಲ್, ಪದವಿನಂಗಡಿ, ಕಾವೂರು, ಕುಡುಪು, ಮಂದಾರ, ವಾಮಂಜೂರು ಮೊದಲಾದ ಪ್ರದೇಶಗಳಲ್ಲಿ ವಾತಾವರಣದಲ್ಲಿ ಘಾಟು ಸಹಿತ ಹೊಗೆ ವ್ಯಾಪಿಸಿದೆ. ಮಂದಾರ ಪ್ರದೇಶದ ಜನರು ಸಂಕಷ್ಟ ಅನುಭವಿಸಿದ್ದಾರೆ. ಕಾರ್ಯಾಚರಣೆಗೂ ಹೊಗೆ ಅಡ್ಡಿಯಾಗಿದೆ. ಡಂಪಿಂಗ್ ಯಾರ್ಡ್ ಪಕ್ಕದ ಎಸ್ಡಿಎಂ ಮಂಗಳಜ್ಯೋತಿ ಶಾಲೆಗೆ ರಜೆ ಘೋಷಿಸಲಾಗಿತ್ತು.
ಬೆಂಕಿ ಆಕಸ್ಮಿಕದ ಕುರಿತು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯೆ ನೀಡಿ, ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಹೊಗೆ ಸಂಪೂರ್ಣ ಶಮನಕ್ಕೆ ಇನ್ನೂ ಕೆಲವು ದಿನ ಬೇಕಾಗಬಹುದು ಎಂದು ತಿಳಿಸಿದ್ದಾರೆ.