ವೃದ್ಧ ತಂದೆಗೆ ಹಲ್ಲೆ ಮಾಡುತ್ತಿದ್ದ ಮಗ ಕಾಲಿಗೆ ಬಿದ್ದು ಕ್ಷಮೆ ಕೇಳಿದ!
Team Udayavani, Aug 9, 2018, 3:15 AM IST
ಸುರತ್ಕಲ್: ಹೊಸಬೆಟ್ಟು ಶ್ರೀ ರಾಘವೇಂದ್ರ ಮಠದಲ್ಲಿ ತೀರ್ಥ ಪ್ರಸಾದ ಕೊಡುವ ಸೇವೆ ಮಾಡುತ್ತಿದ್ದ ಯೋಗೀಶ ಭಟ್ಟ (88) ಅವರ ಮಗ ಸುರೇಶ ಭಟ್ಟ (38) ಸುಮಾರು 8 ವರ್ಷದಿಂದ ದುಡ್ಡಿಗಾಗಿ ತಂದೆಗೆ ನೀಡುತ್ತಿದ್ದ ಹಿಂಸೆ ಸುರತ್ಕಲ್ ಪೊಲೀಸರ ಮಧ್ಯಪ್ರವೇಶದಿಂದ ಕೊನೆಯಾಗಿದೆ. ಈತ ಮಠಕ್ಕೆ ಬಂದು ಅಪ್ಪನಿಗೆ ಹೊಡೆಯುವ, ಪೆಟ್ಟಿಗೆ ಎಳೆದುಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಜನರಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ವೃದ್ಧ ತಂದೆಗೆ ಹಿಂಸೆ ನೀಡುವ ಮಗನಿಗೆ ಶಿಕ್ಷೆಯಾಗಲೇಬೇಕು ಜನರು ಆಗ್ರಹಿಸುತ್ತಿದ್ದರು.
ಕೊನೆಗೂ ಉಡುಪಿಯಲ್ಲಿದ್ದ ಯೋಗೀಶ ಭಟ್ಟರ ಮಗನನ್ನು ಬುಧವಾರ ಠಾಣೆಗೆ ಕರೆಸಿದ ಪೊಲೀಸರು, ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಆತನಿಗೆ ಹೇಳಿದರು. ಜತೆಗೆ ಮುಂದೆ ಹಲ್ಲೆ, ಹಿಂಸೆ ನೀಡಿದರೆ ಕಠಿನ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು. ಇದಕ್ಕೆ ಒಪ್ಪಿದ ಸುರೇಶ ಭಟ್ಟ ತಂದೆಯನ್ನು ಚೆನ್ನಾಗಿ ಗೌರವದಿಂದ ನೋಡಿಕೊಳ್ಳುವುದಾಗಿ ಮಾತುಕೊಟ್ಟ ಬಳಿಕ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಯಿತು. ಯೋಗೀಶ ಭಟ್ಟರು ಹಲವಾರು ವರ್ಷಗಳಿಂದ ರಾಘವೇಂದ್ರ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು, ಭಕ್ತರ ಪ್ರೀತಿಗೂ ಪಾತ್ರರಾಗಿದ್ದಾರೆ.