ಸುಳ್ಯ: ಸಂಪಾಜೆ ಮನೆ ದರೋಡೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ
Team Udayavani, Mar 31, 2022, 1:24 PM IST
ಸುಳ್ಯ: ಕೆಲವು ದಿನಗಳ ಹಿಂದೆ ಸುಳ್ಯ ತಾಲೂಕಿನ ಸಂಪಾಜೆಯ ಮನೆಯೊಂದರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಕಾರ್ತಿಕ್ (38), ನರಸಿಂಹನ್ (40), ಹಾಸನ ಮೂಲದ ಯದುಕುಮಾರ್ (33), ದೀಕ್ಷಿತ್ (26) ಬಂಧಿತ ಆರೋಪಿಗಳು.
ಆರೋಪಿಗಳಿಂದ ನಗದು ಹಾಗೂ ಕೆಲವಸ್ತುಗಳು, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮೊಬೈಲ್ ವಶ ಪಡೆದಿದ್ದು, ಘಟನೆಗೆ ಸಂಬಂಧಿಸಿದ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸಂಪಾಜೆ ಚಟ್ಟೆಕಲ್ಲು ಎಂಬಲ್ಲಿ ಅಂಬರೀಶ್ ಭಟ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಮಚ್ಚು ಹಿಡಿದು ಬೆದರಿಸಿ ಚಿನ್ನ ಹಾಗೂ ಸುಮಾರು 1.8 ಲಕ್ಷ ರೂಪಾಯಿ ದರೋಡೆ ನಡೆಸಿದ ಘಟನೆ ನಡೆದಿತ್ತು.
ಅಂಬರೀಶ್ ಅವರ ಮನೆಗೆ ಮಾ.20ರ ರಾತ್ರಿ ಸುಮಾರು 8.30 ರ ಹೊತ್ತಿಗೆ ದರೋಡೆಕೋರರು ನುಗ್ಗಿ ಅಂಬರೀಶ್ ಅವರ ಸೊಸೆ ಹಾಗೂ ಪತ್ನಿಯನ್ನು ಬೆದರಿಸಿ ದರೋಡೆ ಕೃತ್ಯ ಎಸಗಿದ್ದರು. ಈ ಸಮಯದಲ್ಲಿ ಅಂಬರೀಶ್ ಭಟ್ ಹಾಗೂ ಅವರ ಪುತ್ರ ಮನೆಯಲ್ಲಿ ಇರಲಿಲ್ಲ. ಈ ಪ್ರಕರಣದ ಬಗ್ಗೆ ಅಂಬರೀಶ್ ಅವರ ಸೊಸೆ ಆಶಾ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ:ಕೇಜ್ರಿವಾಲ್ ನಿವಾಸದ ಎದುರು ಪ್ರತಿಭಟನೆ ವೇಳೆ ಆಸ್ತಿ ಹಾನಿ: 8 ಜನರ ಬಂಧನ
ಆರೋಪಿಗಳ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕರಾದ ಸೋನಾವಣೆ ಋಷಿಕೇಶ್ ಭಗವಾನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ನಿರ್ದೇಶನದಂತೆ ಪೊಲೀಸ್ ಉಪಾಧೀಕ್ಷಕ ಗಾನಾ ಪಿ ಕುಮಾರ್ ಅವರು ಸುಳ್ಯ ಪೊಲೀಸ್ ವೃತ್ತನಿರೀಕ್ಷಕ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ವಿವಿಧ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು.
ಕಾರ್ಯಾಚರಣೆಯಲ್ಲಿ ಸುಳ್ಯ ಪೊಲೀಸ್ ಉಪನಿರೀಕ್ಷಕರಾದ ದಿಲೀಪ್ ಆರ್, ರತ್ನಕುಮಾರ್, ಬಂಟ್ವಾಳ ಠಾಣಾ ಪಿಎಸ್ಐ ಹರೀಶ್ ಎಂ.ಆರ್., ಬೆಳ್ಳಾರೆ ಠಾಣಾ ಎಎಸ್ಐ ಭಾಸ್ಕರ್, ಪೊಲೀಸ್ ಇಲಾಖಾ ಸಿಬಂದಿಗಳಾದ ಜಯರಾಮ್, ಉದಯ್ ಗೌಡ, ಅನಿಲ್, ಮಹದೇವ ಪ್ರಸಾದ್, ದೇವರಾಜ, ವಿಜಯಕುಮಾರ್ ಭಾಗವಹಿಸಿದ್ದರು.