ಅಯೋಧ್ಯೆ ತೀರ್ಪು: ಬಾಬ್ರಿ ಮಸೀದಿ ಪರ ವಾದ ಮಾಡಿದ್ದರು ಪುತ್ತೂರಿನ ವಕೀಲ
Team Udayavani, Nov 9, 2019, 2:36 PM IST
ಪುತ್ತೂರು: ಐತಿಹಾಸಿಕ ಅಯೋಧ್ಯೆ ರಾಮಜನ್ಮಭೂಮಿ ವಿವಾದ ಸಂಬಂಧ ಶನಿವಾರ ಕೊನೆಗೂ ಅಂತಿಮ ತೀರ್ಪು ಹೊರಬಿದ್ದಿದೆ. ಸುಮಾರು 40 ದಿನಗಳ ಸುದೀರ್ಘ ವಿಚಾರಣೆಯ ನಂತರ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ನೇತೃತ್ವದ ಪಂಚ ಸದಸ್ಯ ಪೀಠ ತೀರ್ಪು ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬ್ರಿ ಮಸೀದಿ ಪರ ವಾದ ನಡೆಸಿದ ವಕೀಲರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ಅಬ್ದುಲ್ ರಹಿಮಾನ್ ಕೂಡಾ ಇದ್ದು, ದೇಶದ ಗಮನಸೆಳೆದಿದ್ದಾರೆ.
ಯಾರಿದು ಅಬ್ದುಲ್ ರಹಿಮಾನ್?
ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ದಿ. ಇಸುಬು ಬ್ಯಾರಿ ಹಾಗೂ ಆಮಿನಮ್ಮ ದಂಪತಿಗಳ ಪುತ್ರ ಅಬ್ದುಲ್ ರಹಿಮಾನ್. ಇವರು ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿಯನ್ನು ಆರಂಭಿಸಿದ್ದರು. ಆ ಬಳಿಕ ಸರ್ವೋಚ್ಛ ನ್ಯಾಯಾಲಯದ ವಕೀಲರಾಗಿ ಸೇವೆ ಅರಂಭಿಸಿದ್ದರು.
ಬಾಬರಿ ಮಸೀದಿ ಪರ ಹಕ್ಕು ಪ್ರತಿಪಾದಿಸಿದ್ದ ಸುನ್ನಿ ವಕ್ಫ್ ಮಂಡಳಿ ತನ್ನ ಪರ ವಾದ ಮಾಡುವ ಸಲುವಾಗಿ ಘಟಾನುಘಟಿ ವಕೀಲರನ್ನೇ ಆಯ್ಕೆಮಾಡಿತ್ತು. ಈ ಪೈಕಿ ಉಪ್ಪಿನಂಗಡಿಯ ಅಬ್ದುಲ್ ರಹಿಮಾನ್ ಕೂಡಾ ಒಬ್ಬರು.
ಸುಪ್ರೀಂ ಕೋರ್ಟ್ ಹಿರಿಯ ವಕೀಲರುಗಳಾದ ಡಾ. ರಾಜೀವ್ ಧವನ್, ಮೀನಾಕ್ಷಿ ಅರೋರಾ, ದಫರುಲ್ಲಾ ಜೀಲಾನಿ ಮತ್ತು ಕಿರಿಯ ವಕೀಲರುಗಳಾದ ಶಕೀಲ್ ಅಹ್ಮದ್, ಇರ್ಷಾದ್ ಹನೀಫ್, ಇಜಾಸ್ ಅಹ್ಮದ್, ಶರೀಫ್ ಕೆ ಎ, ಶೈಕ್ ಮೌಲಾಲಿ ಬಾಷಾ, ಅನ್ಸಾರುಲ್ ಹಕ್ ಇಂಧೋರಿ ಜೊತೆ ಪುತ್ತೂರಿನ ಅಬ್ದುಲ್ ರಹಿಮಾನ್ ವಾದ ಮಂಡಿಸಿದ್ದರು.
ತೀರ್ಪು ನೀಡಿದ ಪಂಚ ಸದಸ್ಯ ಪೀಠದಲ್ಲಿದ್ದ ನ್ಯಾ. ಅಬ್ದುಲ್ ನಜೀರ್ ಕೂಡಾ ದಕ್ಷಿಣ ಕನ್ನಡದವರಾಗಿದ್ದು, ಮೂಡಬಿದ್ರೆ ಬಳಿಯ ಬೆಳುವಾಯಿ ಗ್ರಾಮದವರಾಗಿದ್ದಾರೆ.