ಸಿಎಂಗೆ ಕರಿಪತಾಕೆ ಪ್ರದರ್ಶಿಸಲೆತ್ನಿಸಿದವರ ಬಂಧನ
Team Udayavani, Jan 8, 2018, 12:31 PM IST
ಪುತ್ತೂರು: ರಾಜ್ಯ ಸರಕಾರದ ಸಾಧನಾ ಸಂಭ್ರಮದ ಹಿನ್ನೆಲೆಯಲ್ಲಿ ರವಿವಾರ ಪುತ್ತೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರಿಪತಾಕೆ ಪ್ರದ ರ್ಶಿಸಲು ಯತ್ನಿಸಿದ ಬಿಜೆಪಿ, ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿಗಳು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಂದರ್ಭ ಕಾಲೇಜಿನ ಗೇಟಿನ ಬಳಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಕರಿಪತಾಕೆಯೊಂದಿಗೆ ನೆಲದಲ್ಲಿ ಕುಳಿತು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನೆ ನಿರತ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಡಿ. ಶಂಭು ಭಟ್, ಲಕ್ಷ್ಮಣ ಕೋಡಿಂಬಾಡಿ, ಅನೀಶ್ ಬಡೆಕ್ಕಿಲ, ಹಿಂದೂ ಸಂಘಟನೆಗಳ ಮುಖಂಡರಾದ ಮುರಳೀಕೃಷ್ಣ ಹಸಂತಡ್ಕ, ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವರನ್ನು ಬಂಧಿಸಿ ವಾಹನದಲ್ಲಿ ಕೊಂಬೆಟ್ಟು ಶಾಲೆಗೆ ಕರೆದೊಯ್ದರು.
ಜೆಡಿಎಸ್ ಪ್ರತಿಭಟನೆ
ರಾಜ್ಯದಲ್ಲಿ ಶಾಂತಿ, ಸೌಹಾರ್ದದ ನೆಲೆಯಾಗಿಸಲು ವಿಫಲವಾಗಿರುವ ಸಿದ್ದ ರಾಮಯ್ಯ ಅವರಿಗೆ ಕರಿಪತಾಕೆ ಪ್ರದರ್ಶಿ ಸಲು ನಗರದ ಕೆ.ಪಿ. ಕಾಂಪ್ಲೆಕ್ಸ್ ಬಳಿಯ ಕಚೇರಿಯಿಂದ ಹೊರಟ ಜೆಡಿಎಸ್ ಮುಖಂಡರು ಹಾಗೂ
ಕಾರ್ಯಕರ್ತರನ್ನು ಪೊಲೀಸರು ತಡೆದು ಬಸ್ನಲ್ಲಿ ಬೀರ್ನಹಿತ್ಲು ಶಾಲೆಗೆ ಕರೆದೊಯ್ದರು.
ಜೆಡಿಎಸ್ ಪುತ್ತೂರು ಅಧ್ಯಕ್ಷ ಐ.ಸಿ. ಕೈಲಾಸ್, ಕಾರ್ಯದರ್ಶಿ ಚಂದ್ರಶೇಖರ್ ಅಂಚನ್, ರಾಜ್ಯ ಪದಾಧಿಕಾರಿಗಳಾದ ಇಬ್ರಾಹಿಂ ಗೋಳಿಕಟ್ಟೆ, ಅಶ್ರಫ್ ಕಲ್ಲೇಗ, ಮಹಿಳಾ ಘಟಕದ ಪದ್ಮ ಮಣಿಯನ್, ಅದ್ದು ಪಡೀಲ್, ಕರೀಂ ಪಳ್ಳತ್ತೂರು, ಶಿವು ಸಾಲಿಯಾನ್, ಅಶ್ರಫ್ ಕೊಟ್ಯಾಡಿ ಮೊದಲಾದವರನ್ನು ಪೊಲೀಸರು ಬಂಧಿಸಿದರು.