ಶಿಕ್ಷಕರಿಗೆ ರಜೆ ಕೊಡದೆ ಸಜೆ ಕೊಟ್ಟ ಸರಕಾರ
4ನೇ ಶನಿವಾರದ ರಜೆಯೂ ಇಲ್ಲ ; 5 ಸಾಂದರ್ಭಿಕ ರಜೆಯೂ ಇಲ್ಲ !
Team Udayavani, Jun 27, 2019, 6:00 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ನಾಲ್ಕನೇ ಶನಿವಾರದ ರಜೆ ಸೌಲಭ್ಯದಿಂದ ಶಿಕ್ಷಕ ರನ್ನು ರಾಜ್ಯ ಸರಕಾರ ಹೊರಗಿಟ್ಟಿರುವು ದಲ್ಲದೆ, ಅವರ ಐದು ಸಾಂದರ್ಭಿಕ ರಜೆಗಳನ್ನೂ ಕಡಿತಗೊಳಿಸಿದೆ.
ಕೇಂದ್ರ ಸರಕಾರಿ ನೌಕರರಂತೆ ರಾಜ್ಯ ಸರಕಾರಿ ನೌಕರರಿಗೂ ನಾಲ್ಕನೇ ಶನಿವಾರ ರಜೆ ಘೋಷಿಸಿ ಇತ್ತೀಚೆಗೆ ರಾಜ್ಯ ಸರಕಾರ ಆದೇಶಿ ಸಿತ್ತು. ನಾಲ್ಕನೇ ಶನಿವಾರವೂ ಶಾಲೆ ಗಳಿರುವುದರಿಂದ ಈ ಸೌಲಭ್ಯ ಶಿಕ್ಷಕ ವರ್ಗಕ್ಕೆ ಅನ್ವಯಿಸಿರಲಿಲ್ಲ. ಆದರೂ ಇತರರಿಗೆ ಕಡಿತಗೊಳಿಸಿದಂತೆ ಶಿಕ್ಷಕರ ವಾರ್ಷಿಕ 15 ಸಾಂದರ್ಭಿಕ ರಜೆ (ಸಿಎಲ್)ಗಳ ಪೈಕಿ 5ನ್ನು ಕಡಿತ ಗೊಳಿಸಿ 10ಕ್ಕೆ ನಿಗದಿಪಡಿಸಿದೆ. ಇದರಿಂದ ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಮಿಕ್ಕಿ ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರು, 1 ಲಕ್ಷಕ್ಕೂ ಹೆಚ್ಚು ಪ.ಪೂ. ಕಾಲೇಜು ಹಾಗೂ ಪದವಿ ಕಾಲೇಜು ಉಪನ್ಯಾಸಕರಿಗೆ ರಜೆ ನಷ್ಟವಾಗಲಿದೆ.
‘ಈಗ ಇತರರಂತೆ ಶಿಕ್ಷಕರಿಗೆ 2ನೇ ಮತ್ತು 4ನೇ ಶನಿವಾರದ ರಜೆ ಇಲ್ಲದಿದ್ದರೂ ಅವರ ಸಾಂದರ್ಭಿಕ ರಜೆಯನ್ನು 10ಕ್ಕೆ ಇಳಿಸಲಾಗಿದೆ. ಹಾಗಾಗಿ ಸಾಂದರ್ಭಿಕ ರಜೆಗಳನ್ನು ಯಥಾಪ್ರಕಾರ ಮುಂದುವರಿಸ ಬೇಕು’ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಡಾ| ರಾಮಕೃಷ್ಣ ಶಿರೂರು ತಿಳಿಸಿದ್ದಾರೆ.
‘ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಶಿಕ್ಷಕರು ಪ್ರತಿಭಟಿ ಸುವರು’ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಕೆ. ಮಂಜುನಾಥ್ ‘ಉದಯವಾಣಿ’ಗೆ ತಿಳಿಸಿದ್ದಾರೆ.
ರಜೆ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ್, ‘4ನೇ ಶನಿವಾರವನ್ನು ಸರಕಾರಿ ರಜೆಯಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಸಾಂದರ್ಭಿಕ ರಜೆಯಲ್ಲಿ ಕಡಿತವಾಗಿರುವುದು ಗಮನಕ್ಕೆ ಬಂದಿದೆ. ಈ ಗೊಂದಲ ಬಗೆಹರಿಸಲು ಜೂ. 29ರಂದು ಶಿಕ್ಷಕರ ಸಭೆ ಕರೆಯಲಾಗಿದೆ’ ಎಂದು ತಿಳಿಸಿದ್ದಾರೆ.