ಗುತ್ತಕಾಡು ದೇಗುಲಕ್ಕೆ ನುಗ್ಗಿ ಕಳವು
Team Udayavani, Jul 10, 2017, 2:50 AM IST
ಕಿನ್ನಿಗೋಳಿ: ಗುತ್ತಕಾಡು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಶನಿವಾರ ರಾತ್ರಿ ಕಳ್ಳರು ದೇವಳದ ಮುಂದಿನ ಬಾಗಿಲು ಮುರಿದು ಒಳನುಗ್ಗಿ ಗರ್ಭಗುಡಿಯ ಬಾಗಿಲು ಬೀಗ ಮುರಿದು ದೇವರ ಮೇಲಿದ್ದ ಚಿನ್ನದ ಕರಿಮಣಿ ಸಹಿತ 1. 75 ಲಕ್ಷರೂ ವೆcಚ್ಚದ ಬೆಳ್ಳಿ ವಸ್ತುಗಳು ಕಳವು ನಡೆಸಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ ಅವರು ತಿಳಿಸಿದ್ದಾರೆ.
ಎಂದಿನಂತೆ ಶನಿವಾರ ರಾತ್ರಿ 10 ಗಂಟೆಗೆ ರಾತ್ರಿ ಪೂಜೆ ಮುಗಿಸಿದ ಬಳಿಕ ದೇವಸ್ಥಾನದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ರವಿವಾರ ಮುಂಜಾನೆ 5 ಗಂಟೆಯ ಹೊತ್ತಿಗೆ ಬರುವಾಗ ಹೊರಗಿನ ತೀರ್ಥ ಮಂಟಪದ ಬಾಗಿಲು ತೆರೆದಿರುವುದು ಕಂಡು ಬಂತು ಮತ್ತೆ ಒಳಗೆ ಹೋಗಿ ನೋಡುವಾಗ ಗರ್ಭಗುಡಿಯ ಬಾಗಿಲು ಮುರಿದು ತೆರೆದಿರುವುದು ಕಂಡುಬಂದು ಮೂಲ್ಕಿ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು.
ದೇವರ ಬೆಳ್ಳಿಯ ಪ್ರಭಾವಳಿ, ದೇವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಬೆಳ್ಳಿಯಿಂದ ನಿರ್ಮಿತ ದೇವರ ಮುಖವಾಡ, ಕಿರೀಟ , ತ್ರಿಶೂಲ ಹಾಗೂ ತೀರ್ಥ ಮಂಟಪದಲ್ಲಿದ್ದ ದೇವರ ಕಾಣಿಕೆ ಹುಂಡಿ ಕಳವು ಮಾಡಲಾಗಿದೆ. ಕಾಣಿಕೆ ಹುಂಡಿಯು ದೇವಸ್ಥಾನದ ಪಕ್ಕದಲ್ಲಿನ ಸಮಾಧಿಯ ಸ್ಥಳದಲ್ಲಿ ಬಿಟ್ಟು ಹೋಗಿದ್ದು ಪತ್ತೆಯಾಗಿದೆ.
ಸ್ಥಳಕ್ಕೆ ಮೂಲ್ಕಿ ವಲಯ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಬೆರಳಚ್ಚು ತಂಡ, ಶ್ವಾನದಳ ಬಂದಿದ್ದು ಪ್ರಕರಣ ದಾಖಾಲು ಮಾಡಿ ತನಿಖೆ ನಡೆಸುತ್ತಿದ್ದಾರೆ. ಮೂಲ್ಕಿ sಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಾಳಿಯ ಮಾದರಿ ಕಾವಲು ಉತ್ತಮ:
ಸಣ್ಣಪುಟ್ಟ ಮಂದಿರ, ದೇವಸ್ಥಾಗಳಲ್ಲಿ ರಾತ್ರಿ ಹೊತ್ತು ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಪಾಳಿಯ ತರಹ ತಂಡಗಳನ್ನು ಮಾಡಿ ಮಲಗುವುದು ಉತ್ತಮ. ದೇವಸ್ಥಾನ, ಮಂದಿರಗಳ ಭದ್ರತೆಯ ದೃಷ್ಟಿಯಿಂದ ಸಿಸಿ ಕೆಮರಾ ಆಳವಡಿಸಬೇಕಾಗಿದೆ ಅದರಿಂದ ಕಳ್ಳರ ಸುಳಿವು ಲಭ್ಯವಾಗಲಿದೆ ಎಂದು ಮೂಲ್ಕಿ ವಲಯ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರು ತಿಳಿಸಿದ್ದಾರೆ.