ರಕ್ತದಾನಕ್ಕೆ ಲಿಂಗ-ಮತಭೇದವಿಲ್ಲ : ಕುಡ್ವ
Team Udayavani, Apr 28, 2017, 3:06 PM IST
ಮೂಲ್ಕಿ: ಮಾನವನಿಗೆ ರಕ್ತದ ಅಗತ್ಯ ಬಿದ್ದಾಗ ಲಿಂಗ, ಮತಭೇದವಿರುವುದಿಲ್ಲ. ಆದ್ದರಿಂದ ರಕ್ತದಾನಕ್ಕಿಂತ ಮಿಗಿಲಾದ ದಾನ ಮತ್ತೂಂದಿಲ್ಲ ಎಂದು ಉದ್ಯಮಿ ಹಾಗೂ ಶ್ರೀ ವೆಂಕಟರಮಣ ದೇಗುಲದ ಮೊಕ್ತೇಸರ ಎಂ. ಅತುಲ್ ಕುಡ್ವ ಹೇಳಿದರು.
ಅವರು ಜಿ.ಎಸ್.ಬಿ. ಸಭಾ ಮೂಲ್ಕಿ, ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ಬಪ್ಪನಾಡು ಮತ್ತು ಬಡಗಿತ್ಲು ಯುವಕ ಮತ್ತು ಯುವತಿ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ವೆನ್ಸಾಕ್ ಆಸ್ಪತ್ರೆಯ ಬ್ಲಿಡ್ ಬ್ಯಾಂಕ್ ಮೂಲಕ ಜರಗಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವೆನಾಕ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ| ಶರತ್ ಮಾತನಾಡಿ, ಆರೋಗ್ಯವಂತರು ಕಾಲಕಾಲಕ್ಕೆ ರಕ್ತವನ್ನು ದಾನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಕಾಯಿಲೆಗಳಿಂದ ದೂರವಿರಬಹುದು. ಜತೆಗೆ ಇತರರಿಗೆ ಸಹಾಯ ಮಾಡಿದ ತೃಪ್ತಿಯನ್ನೂ ಪಡೆಯಬಹುದು ಎಂದರು.
ಜಿ.ಎಸ್.ಬಿ. ಸಭಾದ ಅಧ್ಯಕ್ಷ ಸತ್ಯೇಂದ್ರ ಶೆಣೈ ಪ್ರಾಸ್ತಾವಿಸಿದರು. ಉಪಾಧ್ಯಕ್ಷ ಜಿ. ಗಿರಿಧರ ಕಾಮತ್, ಕೋಶಾಧಿಕಾರಿ ವಿಶ್ವನಾಥ ಶೆಣೈ, ಸಮಿತಿ ಪದಾಧಿಕಾರಿಗಳಾದ ಡಾ| ಎಂ. ಚಂದ್ರಕಾಂತ ಭಟ್, ಅಶೋಕ್ ಕಾಮತ್, ಯು. ಸುರೇಂದ್ರ ಶೆಣೈ, ಅಜಿತ್ ಶೆಣೈ, ಪ್ರಸಾದ್ ಕಾಮತ್, ಬಡಗಿತ್ಲು ಯುವಕ ಮಂಡಲದ ಅಧ್ಯಕ್ಷ ಕಮಲಾಕ್ಷ, ದುರ್ಗಾಫ್ರೆಂಡ್ಸ್ ಅಧ್ಯಕ್ಷ ಜಯರಾಮ ಸದಸ್ಯ ದಾಮೋದರ್ ಮುಂತಾದವರಿದ್ದರು.