ತುಂಬೆ ಡ್ಯಾಂ: ಮುಳುಗಡೆ ಜಮೀನಿಗೆ ಪರಿಹಾರಕ್ಕೆ ಸಿದ್ಧತೆ
Team Udayavani, Dec 14, 2017, 1:05 PM IST
ಬಂಟ್ವಾಳ: ಮನಪಾ ಕುಡಿಯುವ ನೀರಿಗಾಗಿ ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಿಸಲಾಗಿರುವ ನೂತನ ಡ್ಯಾಂನಿಂದ ಮುಳುಗಡೆಗೊಳ್ಳುವ ಪ್ರದೇಶದ ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಗೆ ಸಿದ್ಧತೆಗಳಾಗಿದ್ದು, ಡಿ.13ರಂದು ಸಭೆ ನಡೆದಿದೆ.
ಮನಪಾ ಅಧಿಕಾರಿಗಳು, ತಹಶೀಲ್ದಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಭೂಮಿ ಮುಳುಗಡೆ ಹೊಂದುವ ಸಂತ್ರಸ್ತರು ಪಾಲ್ಗೊಂಡಿದ್ದರು. ರಾಜ್ಯ ಸರಕಾರದಿಂದ ಈ ಪರಿಹಾರ ಉದ್ದೇಶಕ್ಕೆ 7 ಕೋ.ರೂ. ಬಿಡುಗಡೆ ಆಗಿದ್ದಾಗಿ ಮೂಲಗಳು ತಿಳಿಸಿವೆ.
ಡ್ಯಾಂನಲ್ಲಿ 5 ಮೀ. ಎತ್ತರಕ್ಕೆ ನೀರು ಸಂಗ್ರಹಗೊಳ್ಳಲಿದೆ. ಇದರಿಂದ 27 ರೈತರ ಒಟ್ಟು 20.53 ಎಕ್ರೆ ಪಟ್ಟಾ ಜಮೀನು ಮುಳುಗಡೆ ಆಗುವುದು. ಜಮೀನಿಗೆ ಪರಿಹಾರ ಮತ್ತು ಅವಶ್ಯ ಕಡತ, ದಾಖಲೆ ನೀಡುವಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತಿಯಲ್ಲಿ ಮಾತುಕತೆ ನಡೆಯಿತು.
ಗ್ರಾಮವಾರು ವಿವರ
ಸಜೀಪಮುನ್ನೂರು ಗ್ರಾಮದಲ್ಲಿ 9 ಮಂದಿ ಖಾತೆದಾರರ 8.04 ಎಕರೆ, ಪಾಣೆಮಂಗಳೂರು ಗ್ರಾಮದ ಇಬ್ಬರು ಖಾತೆದಾರರ 0.78 ಎಕರೆ, ಕಳ್ಳಿಗೆ ಗ್ರಾಮದ 5 ಮಂದಿ ಖಾತೆದಾರರ 2.05 ಎಕರೆ, ಬಿ.ಮೂಡ ಗ್ರಾಮದ 11 ಮಂದಿ ಖಾತೆದಾರರ 9.66 ಎಕರೆ ಜಮೀನು ಮುಳುಗಡೆ ಆಗುವುದಾಗಿ ಕಂದಾಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಮುಳುಗಡೆ ಜಮೀನಿಗೆ ಸರಕಾರಿ ಮೌಲ್ಯದ ನಾಲ್ಕು ಪಟ್ಟು ಪರಿಹಾರ ಸಿಗುವುದಾಗಿ ಒಂದು ಮೂಲ ಮಾಹಿತಿ ನೀಡಿದೆ. ರಾಜ್ಯದ ಇತರ ಪ್ರದೇಶಗಳಲ್ಲಿ ಮುಳುಗಡೆ ಜಮೀನಿಗೆ ಪರಿಹಾರವನ್ನು ಇದೇ ಕ್ರಮದಲ್ಲಿ ನೀಡಲಾಗಿತ್ತು ಎಂದು ಉಲ್ಲೇಖೀಸಲಾಗಿದೆ.
ಖಾಸಗಿ ಪಟ್ಟಾದಾರರ 20.53 ಎಕರೆ ಜಮೀನು ಮುಳುಗಡೆಯಾಗುವುದರ ಜತೆಗೆ 12.59 ಎಕರೆ ಸರಕಾರಿ ಜಮೀನು ಕೂಡ ಮುಳುಗಡೆಯಾಗಲಿದೆ. ಅಂದರೆ ಒಟ್ಟು 33.12 ಎಕರೆ ಜಮೀನು ಮುಳುಗಡೆ ಆಗುವುದಾಗಿ ಮನಪಾ ಅಧಿಕೃತ ಮಾಹಿತಿಯನ್ನು ಉದ್ಧರಿಸಿ ಬಂಟ್ವಾಳ ತಾ. ಕಂದಾಯ ಇಲಾಖೆಯ ದಾಖಲೆ ತಿಳಿಸಿದೆ.
ಜಂಟಿ ಸರ್ವೇ
ಮುಳುಗಡೆ ಜಮೀನಿಗಾಗಿ ನೆಝ್ ಇನ್ಫ್ರಾಟೆಕ್ ಪ್ರೈ. ಲಿ., ಬಂಟ್ವಾಳ ತಾ| ಭೂಮಾಪನ ಇಲಾಖೆ ಸಿಬಂದಿ, ಆಯಾ ಗ್ರಾಮಗಳ ಗ್ರಾಮ ಕರಣಿಕರ ಸಹಿಯ ಜಂಟಿ ಸರ್ವೆ ನಡೆ ಸಿದ್ದಾಗಿ ವಿವರ ಹೇಳಿದೆ. ಬಂಟ್ವಾಳ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮುಳುಗಡೆ ಜಮೀನು ಪಟ್ಟಾದಾರರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಮನಪಾ ಕಾ.ನಿ. ಎಂಜಿನಿಯರ್ ಮರಳಿ ಮಠ, ಭೂ ಸ್ವಾಧೀನ ಅಧಿಕಾರಿ ಗಾಯತ್ರಿ ನಾಯಕ್, ಮನಪಾ ನ್ಯಾಯವಾದಿ ದೀಪರಾಜ್ ಅಂಬಟ್, ಕಂದಾಯ ಅಧಿಕಾರಿ ರಾಮ ಉಪಸ್ಥಿತರಿದ್ದರು.
ವರ್ಷದ ಹಿಂದೆ ಮಂಜೂರು
ವರ್ಷದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಬೆಂಗ ಳೂರಿ ನಲ್ಲಿ ಮುಖ್ಯಮಂತ್ರಿಗಳ ಜತೆ ಸಮಾ ಲೋಚಿಸಿದ ಸಂದರ್ಭವೇ ಪ್ರಥಮ ಹಂತದ ಪರಿಹಾರಕ್ಕಾಗಿ ಅನುದಾನ ಮಂಜೂರಾತಿ ನೀಡಿದ್ದರು.
ಎರಡನೇ ಹಂತದ ಪರಿಹಾರ
ಪ್ರಸ್ತುತ ಹಂತದಲ್ಲಿ ನೀರು ಸಂಗ್ರಹ ಗೊಳ್ಳುವ ಮಟ್ಟವನ್ನು 5 ಮೀ. ಇರಿಸುವ ಉದ್ದೇಶ ಹೊಂದಿದ್ದು, ಇದರಿಂದ ಮುಳುಗಡೆಯಾಗುವ ಭೂಮಿಗೆ ಮಾತ್ರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಹಂತದಲ್ಲಿ ನೀರಿನ ಮಟ್ಟವನ್ನು 6 ಮೀ.ಗೆ ಏರಿಸಿದಲ್ಲಿ ಉಳಿಕೆ ಮುಳುಗಡೆ ಭೂಮಿಗೆ ಪರಿಹಾರ ನೀಡುವ ಬಗ್ಗೆ ಚರ್ಚಿಲಾಗುತ್ತದೆ.