ಅಂತಾರಾಷ್ಟ್ರೀಯ ಕ್ರೀಡಾ ಸಾಧಕಿ ಮನೆಗೆ ರಸ್ತೆ, ವಿದ್ಯುತ್ತಿಲ್ಲ
Team Udayavani, Nov 2, 2018, 10:14 AM IST
ಸುಳ್ಯ: ಮನೆಯ ಕತ್ತಲು ಕಳೆಯಲು ವಿದ್ಯುತ್ ಇಲ್ಲ, ತೆರಳಲು ರಸ್ತೆ ಇಲ್ಲ, ಆರ್ಥಿಕ ಗಟ್ಟಿತನಕ್ಕೆ ಉದ್ಯೋಗವೂ ಇಲ್ಲ. ಬಡತನದಲ್ಲಿ ದಿನದೂಡುತ್ತಿರುವ ಗುಡ್ಡಗಾ ಡು ಕುಟುಂಬದ ಮಹಿಳೆ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬರಿಗಾಲಿನಲ್ಲಿ ಓಡಿ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ! ದ.ಕ. ಜಿಲ್ಲೆ ಗಡಿಭಾಗದಲ್ಲಿರುವ ಮಡಿಕೇರಿ ತಾಲೂಕು ಪೆರಾಜೆಯ ಬಂಗಾರಕೋಡಿ ವಿದ್ಯಾ ಬಿ.ಎಚ್. ಬಂಗಾರ ಗೆದಿದ್ದಾರೆ!
ಹಿರಿಯರ ಕ್ರೀಡಾಕೂಟ
ಇಂಡೋನೇಷ್ಯದ ಜಕಾರ್ತದಲ್ಲಿ ಅ. 28ರಂದು ನಡೆದ ಹಿರಿಯರ ಕ್ರೀಡಾಕೂಟದಲ್ಲಿ 35ರಿಂದ 40 ವಯೋಮಾನ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ವಿದ್ಯಾ, 800 ಮೀ.ನಲ್ಲಿ ಪ್ರಥಮ ಸ್ಥಾನ, 400 ಮೀ., 1500 ಮೀ., 3000 ಮೀ.ನಲ್ಲಿ ದ್ವಿತೀಯ ಸ್ಥಾನ ಪಡೆದು ನಾಲ್ಕು ಪದಕಗಳನ್ನು ಗಳಿಸಿದ್ದಾರೆ. 10ಕ್ಕೂ ಅಧಿಕ ರಾಷ್ಟ್ರಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಆಲೆಟ್ಟಿ ಗ್ರಾಮದ ರಂಗತ್ತಮಲೆಯ ಕೂಸಪ್ಪ ಗೌಡ ಮತ್ತು ಸಣ್ಣಮ್ಮ ಅವರ ಐದನೆ ಪುತ್ರಿ ಆಗಿರುವ ವಿದ್ಯಾ ಅವರನ್ನು ಕೊಡಗು ಸಂಪಾಜೆ ಪೆರಾಜೆಗೆ ವಿವಾಹ ಮಾಡಿ ಕೊಡಲಾಯಿತು. ಪತಿ ಹರೀಶ್, ಮೂವರು ಮಕ್ಕಳು ಇರುವ ಕುಟುಂಬದ ಈ ಮಹಿಳೆ ಬಡತನ ಮೀರಿ ಸಾಧನೆ ತೋರಿದ್ದಾರೆ.
ಬೆಳಕು, ರಸ್ತೆಯಿಲ್ಲ
ಬಂಗಾರಕೋಡಿಯ ಗುಡ್ಡಭಾಗದಲ್ಲಿ ಇವರ ಮನೆಯಿದೆ. ವಿದ್ಯುತ್ ಇಲ್ಲ. ಲೈನ್ ಎಳೆಯಲು ಇರುವ ತೊಡಕಿನಿಂದ ಬೆಳಕು ಹರಿದಿಲ್ಲ. ಒಂದು ಕಿ.ಮೀ. ದೂರ ಕಾಲು ದಾರಿಯಲ್ಲಿ ಸಾಗಬೇಕು. ರಸ್ತೆಯೂ ಇಲ್ಲ. ಮೂಲ ಸೌಕರ್ಯ ಇಲ್ಲದ ಮನೆಯಲ್ಲಿ ಈ ಕುಟುಂಬದ ಬದುಕು. ಎಳೆಯ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು ಆಶ್ರಮ ಶಾಲೆಗೆ ಸೇರಿಸಿದ್ದೇನೆ. ಅಂಗನವಾಡಿಗೆ ತೆರಳುವ ಪುತ್ರನನ್ನು ಶಾಲೆಗೆ ಸೇರಿಸಲು ರಸ್ತೆ ಇಲ್ಲ. ಆಶ್ರಮ ಶಾಲೆಗೆ ಸೇರಿಸಬೇಕಷ್ಟೆ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು ಸಾಧಕಿ ವಿದ್ಯಾ ಬಿ.ಎಚ್. ಅವರ ಪತಿ ಹರೀಶ್.
ಬರಿಗಾಲಿನಲ್ಲಿ ಓಟ
ಸ್ಪರ್ಧೆಗೆ ಪೂರ್ವಭಾವಿಯಾಗಿ ಅಭ್ಯಾಸ ಮಾಡಲು ಇವರಿಗೆ ಸೂಕ್ತ ಮೈದಾನವೂ ಇಲ್ಲ. ಬೆಂಗಳೂರಿನಲ್ಲಿ ಇವರ ಓಟ ಗಮನಿಸಿದ ನಟರಾಜ ಬೆಂಗಳೂರು ಮತ್ತು ಮಾರಪ್ಪ ಕೋಲಾರ ಪ್ರೋತ್ಸಾಹ ನೀಡಿರುವುದು ಇವರಿಗೆ ಸ್ಫೂರ್ತಿ ಸಿಕ್ಕಿತ್ತು. ತರಬೇತಿ ಇಲ್ಲದೆ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ತೆರಳಿದ್ದಾರೆ. ಸ್ಪೈಕ್ಸ್ ಹಾಕಿ ಓಡಲು ಅನುಕೂಲ ಇರಲಿಲ್ಲ. ಅಂತಾರಾಷ್ಟ್ರೀಯ ಟ್ರಾಕ್ನಲ್ಲಿ ನಾನು ಬರಿಗಾಲಿನಲ್ಲಿ ಓಡಿದೆ. ಉಳಿದ ಎಲ್ಲ ಸ್ಪರ್ಧಿಗಳಲ್ಲಿಯು ಶೂ ಇತ್ತು. ಆದರೂ ಅವರನ್ನು ಮೀರಿ ಗೆದ್ದು ಬಂದೆ ಎಂದರು ವಿದ್ಯಾ.
ಉದ್ಯೋಗ ನೀಡಿ
ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಇವರಿಗೆ ಆರ್ಥಿಕವಾಗಿ ಬಡತನ ಇದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ತೆರಳುವ ಎಲ್ಲ ಖರ್ಚು ವೆಚ್ಚವನ್ನು ಸ್ಪರ್ಧಿಯೇ ಭರಿಸಬೇಕಾಗಿತ್ತು. 66 ಸಾವಿರ ರೂ. ಹಣ ವಿಮಾನಕ್ಕೆ, 4 ಸಾವಿರ ರೂ. ಮೈದಾನ ಶುಲ್ಕ, 1600 ರೂ. ಟ್ರಾಕ್ ಶೂ ವೆಚ್ಚ ಭರಿಸಿ ತೆರಳಬೇಕಿತ್ತು. ಕುಟುಂಬಸ್ಥರು, ಸಾರ್ವಜನಿಕರು, ಹಿತೈಷಿಗಳು ಸಹಕಾರ ನೀಡಿದ ಕಾರಣ ತೆರಳಲು ಸಾಧ್ಯವಾಯಿತು. ಸರಕಾರ ನನಗೆ ಉದ್ಯೋಗ ಕೊಟ್ಟರೆ ವಿಶ್ವಮಟ್ಟದಲ್ಲಿ ಇನ್ನಷ್ಟು ಸಾಧನೆ ತೋರುತ್ತೇನೆ ಎನ್ನುತ್ತಾರೆ ವಿದ್ಯಾ ಬಿ.ಎಚ್.
ಕಿರಣ್ ಪ್ರಸಾದ್ ಕುಂಡಡ್ಕ