Mangaluru: ಸುಲಿಗೆ ಪ್ರಕರಣದಲ್ಲಿ ಬಾಲಾಪರಾಧಿ ಸೇರಿ ಇಬ್ಬರ ಬಂಧನ
Team Udayavani, Jun 17, 2023, 7:44 PM IST
ಮಂಗಳೂರು: ಯುವಕನೋರ್ವನ ಬಳಿ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಬಾಲಾಪರಾಧಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಂತ್ರಸ್ತನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬೆಂಗ್ರೆ ನಿವಾಸಿ ನಿಹಾಲ್ ವೈ ಸುವರ್ಣ (19) ಮತ್ತು ಅಪ್ರಾಪ್ತ ವಯಸ್ಕ ಬಾಲಕನನ್ನು ಬಂಧಿಸಿದ್ದಾರೆ.
ದೂರಿನ ಪ್ರಕಾರ ನಿಹಾಲ್ ಮತ್ತು ಸುಲಿಗೆಗೆ ಒಳಗಾದ ಯುವಕ ಪರಸ್ಪರ ಪರಿಚಿತರು. ಜೂನ್ 16 ರಂದು ಆರೋಪಿಗಳು ಸಂತ್ರಸ್ತನನ್ನು ಬೈಕಂಪಾಡಿ ಬಳಿಯ ರೈಲ್ವೆ ಹಳಿ ಬಳಿ ಕರೆದಿದ್ದರು. ಕಣ್ಣಿಗೆ ಮೆಣಸಿನ ಪುಡಿ ಎಸೆದು ಮೊಬೈಲ್ ಫೋನ್ ಮತ್ತು ಚಿನ್ನದ ಸರವನ್ನು ದೋಚಿದ್ದರು.
5.79 ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು ಮೌಲ್ಯ 45,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.