ನಮ್ಮ ಶರತ್ ಏನು ಅನ್ಯಾಯ ಮಾಡಿದ್ದಾನೆ?
Team Udayavani, Jul 12, 2017, 3:25 AM IST
ಬಂಟ್ವಾಳ: ನಮ್ಮ ಶರತ್ ಏನು ಅನ್ಯಾಯ ಮಾಡಿದ್ದಾನೆ?ಯಾಕೆ ಅವನ ಮೇಲೆ ದ್ವೇಷ ಸಾಧಿಸಿದರು? ಸರಕಾರ ನೀಡುವ ಪರಿಹಾರದ ಹಣದಿಂದ ನಮ್ಮ ಶರತ್ ವಾಪಸ್ ಬರುವನೇ? ಹೀಗೆಂದು ಶರತ್ ಸಹೋದರಿಯರು ಜು.11ರಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಎದುರು ಕಣ್ಣೀರು ಹಾಕಿದರು. ಸದಾನಂದ ಗೌಡ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದ ಶರತ್ ಅವರ ಮನೆಗೆ ತೆರಳಿ ಮನೆಮಂದಿಗೆ ಸಾಂತ್ವನ ಹೇಳಿದ ಸಂದರ್ಭದಲ್ಲಿ ಶರತ್ ಅವರ ಮನೆಯವರ ದುಃಖದ ಕಟ್ಟೆಯೊಡೆಯಿತು.
ಹಾಲು ಕರೆಯುತ್ತಿದ್ದ…
‘ತಾಯಿ ಬೆಳಗ್ಗೆ ಬೇಗ ಎದ್ದು ದನಗಳ ಹಾಲು ಕರೆಯಲು ಸಾಧ್ಯವಿಲ್ಲ. ದನಗಳನ್ನು ಕೊಡುವ’ ಎಂದು ನಾವು ಮನೆಯವರು ಹೇಳಿದ್ದೆವು. ಹಾಗಾಗಿ ಶರತ್ ತಾನೇ ಬೆಳಗ್ಗೆ ಬೇಗ ಎದ್ದು ಹಾಲು ಕರೆಯುವ ಕೆಲಸ ಮಾಡುತ್ತಿದ್ದ. ಈಗ ನಾವು ಹಾಲು ಕರೆಯಲು ಹೋಗುವಾಗ ಅವನ ಚಿತ್ರವೇ ಕಣ್ಣಿಗೆ ಕಟ್ಟುತ್ತದೆ. ದೇವರು ಅವನನ್ನು ಯಾಕೆ ರಕ್ಷಿಸಲಿಲ್ಲ? ಎಂದು ಸಹೋದರಿಯರು ಕಣ್ಣೀರಿಟ್ಟರು.
ಭಾಗ್ಯ ಕಳೆದುಕೊಂಡೆ
‘ನಾನು ಎಲ್ಲ ಭಾಗ್ಯವನ್ನು ಕಳೆದುಕೊಂಡಿದ್ದೇನೆ. ಈಗ ಮಗನೇ ಇಲ್ಲವಾಗಿದ್ದಾನೆ ಎಂದು ಶರತ್ ಅವರ ತಂದೆ ತನಿಯಪ್ಪ ಅವರು ಕಣ್ಣೀರು ಹಾಕಿದರು. ಡಿ.ವಿ.ಸದಾನಂದ ಗೌಡ ಅವರು ತಾನು ಪುತ್ರನನ್ನು ಕಳೆದುಕೊಂಡ ದಾರುಣ ಸಂದರ್ಭವನ್ನು ಸ್ಮರಿಸಿ ಕಣ್ಣೀರು ಸುರಿಸಿದರು. ‘ಧೈರ್ಯವಾಗಿರಿ. ಎಲ್ಲಕ್ಕೂ ಕಾಲವೇ ಉತ್ತರಿಸುತ್ತದೆ. ನಿಮ್ಮ ದುಃಖದಲ್ಲಿ ನಾನು ಸಹ ಭಾಗಿ. ಸಮಾಜ ನಿಮ್ಮ ಜತೆಗಿದೆ’ ಎಂದು ಸದಾನಂದ ಗೌಡ ಅವರು ಧೈರ್ಯ ತುಂಬುವ ಪ್ರಯತ್ನ ಮಾಡಿದರು.
ಬಿಜೆಪಿ ನೇತಾರ ರಾಜೇಶ್ ನಾೖಕ್ ಉಳಿಪಾಡಿಗುತ್ತು , ಕ್ಷೇತ್ರ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಕಾರ್ಕಳ ಶಾಸಕ, ಪ್ರತಿಪಕ್ಷ ನಾಯಕ ಸುನಿಲ್ ಕುಮಾರ್, ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಜಿ. ಆನಂದ, ಕಿಶೋರ್ ಕುಮಾರ್ ಬೊಟ್ಯಾಡಿ, ರಂಜನ್ ಗೌಡ ಬೆಳ್ತಂಗಡಿ, ದಿನೇಶ್ ಭಂಡಾರಿ ಬಂಟ್ವಾಳ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಅಶೋಕ ರೈ ಪುತ್ತೂರು, ರಾಮ್ದಾಸ್ ಬಂಟ್ವಾಳ ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.