ಎತ್ತಿನಹೊಳೆ ಅರ್ಜಿದಾರರ ವಾದ ಪೂರ್ಣ
Team Udayavani, Aug 22, 2017, 7:25 AM IST
ಬೆಳ್ತಂಗಡಿ: ದಿಲ್ಲಿಯ ಹಸಿರುಪೀಠದಲ್ಲಿ ಸೋಮವಾರ ಎತ್ತಿನಹೊಳೆ ಯೋಜನೆ ವಿರುದ್ಧ ಅರ್ಜಿದಾರ ಪರಿಸರ ಹೋರಾಟಗಾರ ಕೆ.ಎನ್. ಸೋಮಶೇಖರ್ ಅವರ ಪರವಾಗಿ ವಾದಮಂಡನೆ ಮುಕ್ತಾಯವಾಗಿದೆ. ಸೆ.12 ಹಾಗೂ ಸೆ.13ರಂದು ವಾದಮಂಡನೆಗೆ ದಿನ ನಿಗದಿ ಮಾಡಿವಾದ ಪೂರ್ಣಗೊಳಿಸುವಂತೆ ಹಸಿರುಪೀಠ ನೀರಾವರಿ ನಿಗಮಕ್ಕೆ ಸೂಚನೆ ನೀಡಿದೆ.
ಯೋಜನೆ ಅನುಷ್ಠಾನ ಸಂದರ್ಭ ಪರಿಸರ ಇಲಾಖೆಯಿಂದ ನಿರಾಕ್ಷೇಪಣೆ ಪ್ರಕ್ರಿಯೆ ಕಾನೂನು ಸಮ್ಮತವಾಗಿ ನಡೆದಿಲ್ಲ ಎಂದು ಅರ್ಜಿದಾರರು ವಾದ ಮಂಡಿಸಿದ್ದಾರೆ. ಸ್ಟೇಜ್ 1 ಕ್ಲಿಯರೆನ್ಸ್ ಆಗದೆ ಸ್ಟೇಜ್ 2 ಕ್ಲಿಯರೆನ್ಸ್ ನೀಡಲಾಗಿದೆ. ಸ್ಟೇಜ್ 1ರ ಶರತ್ತುಗಳೇ ಉಲ್ಲಂಘನೆಯಾಗಿದ್ದು ಎರಡನೇ ಹಂತದ ನಿರಾಕ್ಷೇಪಣೆ ನೀಡಿದ್ದು ಸರಿಯಲ್ಲ ಎಂದು ವಾದ ಮಂಡಿಸಲಾಯಿತು. ಸೆ.13ರಂದು ಪ್ರತಿವಾದಿಗಳ ವಾದಮಂಡನೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಅನಂತರ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ.