ಪ್ಲಾಸ್ಟಿಕ್ ನಿಷೇಧದ ಜಾಗೃತಿ ಅಗತ್ಯ
ಪ್ಲಾಸ್ಟಿಕ್ ಮುಕ್ತ ಹಳ್ಳಿಗಳ ನಿರ್ಮಾಣಕ್ಕೆಶ್ರಮಿಸಿ ಜಿಪಂನಿಂದ ಅರಿವು ಕಾರ್ಯ
Team Udayavani, Dec 16, 2019, 5:09 PM IST
ದಾವಣಗೆರೆ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್ ನಿಷೇಧದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ, ಮೋತಿ ವೀರಪ್ಪ, ಸರ್ಕಾರಿ ಬಾಲಕರ, ಎಸ್.ಎಲ್., ಡಿ. ಮಂಜುನಾಥ್ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕುಂದುವಾಡ ಕೆರೆ ಆವರಣದಲ್ಲಿ ಜಿಲ್ಲಾ ಮಟ್ಟದ ಎನ್ನೆಸ್ಸೆಸ್ ಶಿಬಿರದಲ್ಲಿ ಮಾತನಾಡಿದ ಅವರು, ಒಂದು ಬಾರಿ ಉಪಯೋಗಿಸಿ, ಬೀಸಾಡುವಂತಹ ಪ್ಲಾಸ್ಟಿಕ್ನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ನಿಂದ ಗ್ರಾಮೀಣ ಭಾಗದಲ್ಲೂ ಪ್ಲಾಸ್ಟಿಕ್ ನಿಷೇಧದ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಲ್ಲಿಸುವ ನಿಟ್ಟಿನಲ್ಲಿ ಎನ್ ಎಸ್ಸೆಸ್ ಶಿಬಿರಾರ್ಥಿಗಳು ಸಹ ಜಾಗೃತಿ ಮೂಡಿಸುವ ಮೂಲಕ ಪ್ಲಾಸ್ಟಿಕ್ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ನಿಂದ ಗ್ರಾಮೀಣ ಭಾಗದ ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಕೆಲವು ಕಡೆ ಸರಿಯಾಗಿ ಶೌಚಾಲಯ ಬಳಕೆ ಮಾಡದೇ ಇರುವುದು ಕಂಡು ಬರುತ್ತಿದೆ. ಎನ್ಎಸ್ಸೆಸ್ ಶಿಬಿರಾರ್ಥಿಗಳು ಶೌಚಾಲಯದ ಬಳಕೆಯ ಅಗತ್ಯತೆಯ ಬಗ್ಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು.
ಮಾಯಕೊಂಡ ಶಾಸಕ ಪ್ರೊ| ಎನ್. ಲಿಂಗಣ್ಣ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲೂ ಯುವ ಸಬಲೀಕರಣ ಎನ್ನುವುದು ಬರೀ ಬಾಯಿ ಮಾತಿಗೆ ಸೀಮಿತ ಎನ್ನುವಂತಾಗುತ್ತಿದೆ. ಜ್ಞಾನ, ತರಬೇತಿ, ಉದ್ಯೋಗದ ಮೂಲಕ ಯುವ ಸಬಲೀಕರಣ ಆಗಬೇಕು ಎಂದು ಆಶಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮಾತನಾಡಿ, ಪ್ರತಿಯೊಬ್ಬರು ಸಮಾಜಜೀವಿಗಳು. ಹಾಗಾಗಿ ಎಲ್ಲರೂ ನಾಗರಿಕರಾಗಿ ಜೀವನ ನಡೆಸಬೇಕು. ನಮ್ಮ ಬದುಕಿಗೆ ಅಮೂಲ್ಯ ಕಾಣಿಕೆ ನೀಡಿರುವ ನೈಸರ್ಗಿಕ ಸಂಪತ್ತನ್ನು ಉಳಿಸಿ, ಬಳಸುವತ್ತ ಗಮನ ನೀಡಬೇಕು ಎಂದು ತಿಳಿಸಿದರು.
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಶ್ರಮದಾನ ಉದ್ಘಾಟಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಿರಂಜನ್ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯೆ ಶಿಲ್ಪಾ ಜಯಪ್ರಕಾಶ್, ಬಿ.ವಿ. ಪ್ರದೀಪ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷ, ಬಿ. ನಾಗರಾಜಪ್ಪ, ಎನ್. ಶಿವಪ್ಪ, ಸಿ. ವೀರಣ್ಣ, ಆರ್. ಲೋಕೇಶಪ್ಪ, ಎಸ್.ಬಿ. ಮಧುಕುಮಾರ್ ಇತರರು ಇದ್ದರು.