ರೈತರಿಗೆ ಮತ್ತೆ ಸೈನಿಕ ಹುಳು ಕಾಟ
ಹರಿಹರ ತಾಲೂಕಲ್ಲಿ ಕಂಡು ಬಂದಿದೆ ಲದ್ದಿಹುಳುಕೃಷಿ ಅಧಿಕಾರಿಗಳಿಂದ ಮಾರ್ಗದರ್ಶನ
Team Udayavani, Apr 10, 2019, 11:50 AM IST
ದಾವಣಗೆರೆ: ನಿಟ್ಟೂರು ಗ್ರಾಮದ ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಸೈನಿಕ (ಲದ್ದಿ)ಹುಳುಗಳನ್ನುರೈತರೊಂದಿಗೆ ವೀಕ್ಷಿಸುತ್ತಿರುವ ಹರಿಹರ ಸಹಾಯಕ ಕೃಷಿ ನಿರ್ದೇಶಕ ವಿ.ಪಿ. ಗೋವರ್ಧನ್.
ದಾವಣಗೆರೆ: ಬೇಸಿಗೆಯ ಈ ಹಂಗಾಮಿನಲ್ಲಿ ರೈತರು ಹಗಲಿರುಳು ನೀರಿಗಾಗಿ ಪರಿತಪಿಸುತ್ತಾ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಧ್ಯೆಯೇ ಭತ್ತ, ಅಡಿಕೆ ತೋಟದ ಬೆಳೆಗಾರರಿಗೆ ಮತ್ತೂಂದು ಕಂಟಕ ಎದುರಾಗಿದೆ.
ಹರಿಹರ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಸುಮಾರು 15 ಎಕರೆ ಭತ್ತದ ಬೆಳೆ ಹಾಗೂ 2ರಿಂದ 3 ಎಕರೆ ಅಡಿಕೆ ತೋಟದಲ್ಲಿ ಲದ್ದಿಹುಳು (ಸೈನಿಕ) ಕಾಟ ಹೆಚ್ಚಾಗಿದ್ದು, ಇದರಿಂದಾಗಿ ರೈತರಲ್ಲಿ ಮತ್ತೆ ಆತಂಕ ಶುರುವಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ
ಭತ್ತ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳ ಮೇಲೆ ಆಕ್ರಮಣ ಮಾಡುತ್ತಿದ್ದ ಲದ್ದಿಹುಳು (ಸೈನಿಕ) ಆಕ್ರಮಣ ಪುನಾರಂಭವಾಗಿದ್ದು, ಜಿಲ್ಲೆಯ ಇತರೆ ಭಾಗಗಳ ರೈತರ ನಿದ್ದೆಗೆಡಿಸಿವೆ.
ಲದ್ದಿಹುಳುಗಳ ನಿಯಂತ್ರಣಕ್ಕೆ ಆರಂಭದಲ್ಲಿಯೇ ಪರಿಣಾಮಕಾರಿಯಾಗಿ ಕ್ರಮ ಕೈಗೊಂಡರೆ ಮಾತ್ರ ಈ ಹುಳುವನ್ನು ಹತೋಟಿಗೆ ತರಲು ಸಾಧ್ಯ. ಒಂದು ವೇಳೆ ಹುಳು ವ್ಯಾಪಕವಾಗಿ ಹರಡಿದ್ದಾದರೆ ದಿನದಿಂದ ದಿನಕ್ಕೆ ನೋಡನೋಡುತ್ತಲೇ ಬೆಳೆಯ ಎಲ್ಲ ಕಾಂಡ, ಎಲೆಗಳನ್ನು ಪೂರ್ಣವಾಗಿ ತಿಂದುಹಾಕುವುದರಲ್ಲಿ
ಯಾವುದೇ ಸಂಶಯವಿಲ್ಲ. ಆದ್ದರಿಂದ ಕೂಡಲೇ ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ತ್ಯಾವಣಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀನಿವಾಸಲು.
ಲದ್ದಿಹುಳು ಹತೋಟಿಗೆ ರೈತರು ಎರಡೂವರೆ ಎಕರೆ ಪ್ರದೇಶಕ್ಕೆ ಸುಮಾರು 50 ಕೆ.ಜಿ. ಅಕ್ಕಿ ತೌಡು, 5ಕೆ.ಜಿ. ಬೆಲ್ಲ, 624 ಮಿ.ಲೀ. ಮೋನೋಕ್ರೋಟೋಫಸ್, 10 ಲೀ. ನೀರಿನೊಂದಿಗೆ ಮಿಶ್ರಣ ಮಾಡಿ 24 ತಾಸು ಗಾಳಿ, ಬೆಳಕು ಪ್ರವೇಶಿಸದಂತೆ ಕಲಿಯಲು ಬಿಡಬೇಕು. ನಂತರ ಬೆಳೆಗಳಿಗೆ ಸಂಜೆ ಹೊತ್ತಿನಲ್ಲಿ ಎರಚಬೇಕು. ಅಕ್ಕಪಕ್ಕದ ಹೊಲಗಳಿಗೆ ಹರಡದಂತೆ ಹೊಲದ ಸುತ್ತ ಬದುಗಳಲ್ಲಿ ಈ ವಿಷ ಆಹಾರ ಎರಚಬೇಕು.
ಇನ್ನು ಭತ್ತಕ್ಕೆ ವ್ಯಾಪಕವಾಗಿ ಹರಡಿದ ಲದ್ದಿಹುಳು ಹತೋಟಿಗಾಗಿ ಕೂಡಲೇ ಲ್ಯಾಮ್ಡಾ ಸೈಲೋಥ್ರಿನ್ 1ಮಿ.ಲೀ 1ಲೀಟರ್ಗೆ ಮಿಶ್ರಣ ಮಾಡಬೇಕು ಅಥವಾ ಸೈಫರ್ವೆುಥ್ರಿನ್ ಮತ್ತು ಕ್ಲೋರೋಫೈರಿಫಸ್ 2ಮಿ. ಲೀ 1ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಿದ್ದಾರೆ ಶೇ.60 ರಷ್ಟು ಲದ್ದಿಹುಳುಗಳನ್ನು ಕೂಡಲೇ ಹತೋಟಿಗೆ ತರಬಹುದು ಎನ್ನುತ್ತಾರೆ ಹರಿಹರ ಸಹಾಯಕ ಕೃಷಿ ನಿರ್ದೇಶಕ ವಿ.ಪಿ. ಗೋವರ್ಧನ್.
2017ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ
ವಿವಿಧ ತಾಲೂಕಿನಲ್ಲಿ ರೈತರು ಬೆಳೆದ ಮೆಕ್ಕೆಜೋಳ
ಬೆಳೆಯಲ್ಲಿ ಸಾಕಷ್ಟು ಹಾನಿ ಕಂಡು ಬಂದಿತ್ತು. ಜಿಲ್ಲೆಯಲ್ಲಿ
ಬಿತ್ತನೆಯಾದ 2,44,631 ಹೆಕ್ಟೇರ್ ಪ್ರದೇಶದಲ್ಲಿ
15,682 (ಶೇ.50ಕ್ಕಿಂತ ಹೆಚ್ಚು), 39464 (ಶೇ.50ಕ್ಕಿಂತ ಕಡಿಮೆ)
ಸೇರಿದಂತೆ ಒಟ್ಟು 55,146 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಹಾನಿಯಾಗಿತ್ತು.
ಭದ್ರಾ ನಾಲೆ ನೀರಿನ ಅಚ್ಚುಕಟ್ಟು ಪ್ರದೇಶದ ರೈತರಾದ ನಾವು ಹಗಲಿರುಳೆನ್ನದೇ ಕಾದು ಪಾಳಿ ಪ್ರಕಾರದಲ್ಲಿ ನಾಲೆ ನೀರನ್ನು ಭತ್ತದ ಗದ್ದೆಗಳಿಗೆ ಹಾಯಿಸುತ್ತಿದ್ದೇವೆ. ಇಷ್ಟೊಂದು ಕಷ್ಟಪಟ್ಟು ಬೆಳೆದ ಭತ್ತದ ಬೆಳೆಗೆ ಲದ್ದಿಹುಳು ಕಾಟ ಹೆಚ್ಚಾಗಿದ್ದು, ಇದರಿಂದಾಗಿ ಮತ್ತಷ್ಟು ರೋಸಿಹೋಗಿದ್ದೇವೆ. ಕೂಡಲೇ ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಎಲ್ಲಾ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು.
ಸಿದ್ದೇಶ್, ನಿಟ್ಟೂರು ರೈತ
ಕೆಂಗಲಹಳ್ಳಿ ವಿಜಯ್