ಮನೆ ತೆರವಿಗೆ ಅಡ್ಡಿ: ಲಾಠಿ ಪ್ರಹಾರ
Team Udayavani, Feb 7, 2018, 5:17 PM IST
ಹರಿಹರ: ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸುವ ವೇಳೆ ಕಾರ್ಯಾಚರಣೆಗೆ ಅಡ್ಡಿಪಡಿಸಿದ
ನಿವಾಸಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಹಶೀಲ್ದಾರ್ ರೆಹನ್ ಪಾಷಾ, ಸಿಪಿಐ ಲಕ್ಷ್ಮಣ ನಾಯ್ಕ, ಪಿಎಸ್ಐ ಸಿದ್ದೇಗೌಡ ನೇತೃತ್ವದಲ್ಲಿ ಬೆಳಗ್ಗೆ 10:30ಕ್ಕೆ ಗ್ರಾಮದ ಗೋಮಾಳ ಜಮೀನಿನಲ್ಲಿ
ಕಟ್ಟಿಕೊಂಡಿರುವ ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಆದರೆ, ನಿವಾಸಿಗಳು ಈ ವೇಳೆ ಜೆಸಿಬಿಗೆ ಅಡ್ಡ ಮಲಗಿ
ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಮಕ್ಕಳು, ಮಹಿಳೆಯರು, ವಯೋವೃದ್ಧರ ಮೇಲೂ ಪೊಲೀಸರು ಲಾಠಿ ಬೀಸಿದ್ದು, ಈ ವೇಳೆ ಇಬ್ಬರಿಗೆ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂಬ ಆರೋಪದ ಮೇಲೆ 10 ಜನರನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಸ್ಥಳಕ್ಕೆ ಕರೆಸಲಾಗಿತ್ತು. ಡಿವೈಎಸ್ಪಿ ಎಂ.ಕೆ. ಗಂಗಲ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಘಟನೆ ಹಿನ್ನೆಲೆ: ಗ್ರಾಮದ ಸರ್ವೇ ನಂ.52ರ ಸುಮಾರು 10 ರಿಂದ 26 ಎಕರೆ ಗೋಮಾಳ ಜಮೀನಿನಲ್ಲಿ ವಿವಿಧ ಸಮುದಾಯದವರು ಮನೆ, ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ಆ ಜಮೀನಿನಲ್ಲಿ ಕೆಲವು ಮನೆಗಳು ಮಾತ್ರ ಹಿಂದಿನಿಂದಲೂ ಇದ್ದು, ಸರ್ಕಾರ ಅಕ್ರಮ ಸಕ್ರಮ ಯೋಜನೆಯಡಿ ಘೋಷಿಸಲಾಗಿದೆ. ಆದರೆ ರಾತ್ರೋರಾತ್ರಿ ಮನೆ ನಿರ್ಮಿಸಿಕೊಂಡ ಕೆಲವರು ತಮ್ಮ ಮನೆಗಳನ್ನೂ ಸಕ್ರಮಗೊಳಿಸಿಕೊಳ್ಳುವ ಯತ್ನ
ನಡೆಸಿದ್ದಾರೆ ಎಂದು ತಾಲೂಕು ಆಡಳಿತ ಆರೋಪಿಸಿದೆ. ಮಳೆಗಾಲದಲ್ಲಿ ಹಳೆ ಗ್ರಾಮದ ಬಹುತೇಕ ಮನೆಗಳಿಗೆ ಪ್ರವಾಹಕ್ಕೀಡಾಗುತ್ತವೆ ಎಂದು
1992ರಲ್ಲೇ ನಿವಾಸಿಗಳಿಗೆ ಗೋಮಾಳ ಜಾಗ ನೀಡಲಾಗಿತ್ತು. ಆಗಲೇ ಅಲ್ಲಿಗೆ ಸ್ಥಳಾಂತರಗೊಂಡ 19 ನಿವಾಸಿಗಳಿಗೆ ಹಕ್ಕುಪತ್ರ ಸಹ ವಿತರಿಸಲಾಗಿತ್ತು. ಹಳೆ ಮನೆಗಳಲ್ಲೇ ವಾಸವಾಗಿದ್ದ ಕೆಲವರು ನಂತರದ ವರ್ಷಗಳಲ್ಲಿ ಹಂತಹಂತವಾಗಿ ಗೋಮಾಳ ಜಾಗದಲ್ಲಿ ಗುಡಿಸಲು, ಶೆಡ್ ಹಾಕಿಕೊಂಡು ವಾಸವಾಗಿದ್ದರು. ಇತ್ತೀಚೆಗೆ ಗುಡಿಸಲುಗಳನ್ನು ತೆರವುಗೊಳಿಸಿ ಮನೆ ನಿರ್ಮಿಸಿಕೊಳ್ಳಲಾರಂಭಿಸಿದ್ದು, ಇದಕ್ಕೆ ತಾಲೂಕು ಆಡಳಿತ ಆಕ್ಷೇಪ ವ್ಯಕ್ತಪಡಿತ್ತು. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡದಂತೆ ಆದೇಶವನ್ನೂ ಸಹ ನೀಡಿತ್ತು. ಜ. 17ರಂದು ಸಹ ತಾಲೂಕು
ಆಡಳಿತ ಜೆಸಿಬಿಯಿಂದ ಅಕ್ರಮ ಮನೆ ತೆರವುಗೊಳಿಸಲು ಯತ್ನಿಸಿ ವಿಫಲವಾಗಿತ್ತು. ಈ ವೇಳೆ 16 ನಿವಾಸಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಂತಿಭಂಗದ ಕೇಸ್ ಸಹ ದಾಖಲಾಗಿತ್ತು.
ಗುಂಪುಗಾರಿಕೆ: ವಿವಾದಕ್ಕೆ ಸಂಬಂಧಿ ಸಿದಂತೆ ಗ್ರಾಮಸ್ಥರಲ್ಲೇ ಭಿನ್ನಾಭಿಪ್ರಾಯವಿದೆ. ಈಗಾಗಲೆ ಮನೆ ಕಟ್ಟಿಕೊಂಡಿರುವ ಅಸಹಾಯಕರು, ಬಡವರನ್ನು ಮನೆ ಖಾಲಿ ಮಾಡಿಸಿ ತಮಗೆ ತಮ್ಮ ಸಂಬಂ ಧಿಗಳು ಮತ್ತು ತಮಗೆ ಬೇಕಾದವರಿಗೆ ಹಂಚಿಕೆ ಮಾಡಲು ಕೆಲವರು ಹವಣಿಸುತ್ತಿದ್ದರೆಂದು
ಆರೋಪಿಸಲಾಗಿದೆ. ಅಲ್ಲಿ ಮನೆ ಕಟ್ಟಿಕೊಂಡು ಇರುವವರು ಹಾಗೂ ಮನೆ ಕಟ್ಟಿಕೊಳ್ಳಲು ಹವಣಿಸುತ್ತಿರುವ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ
ಶಾಂತಿ ಭಂಗ ಉಂಟಾಗಬಹುದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಾಂತರ ಠಾಣೆ ಪಿಎಸ್ಐ ಸಿದ್ದೇಗೌಡ ದೂರು ದಾಖಲಿಸಿದ್ದರು.
ಅಕ್ರಮ ಸಕ್ರಮ ಯೋಜನೆಯಡಿ ಜಾಗ ಮಂಜೂರಾಗುತ್ತದೆ ಎಂಬ ದುರಾಸೆಯಿಂದ ಕೆಲ ನಿವಾಸಿಗಳು ಕಳೆದ 3 ತಿಂಗಳಿನಿಂದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಲ್ಲಿ ಮನೆ ನಿರ್ಮಿಸದಂತೆ ಈಗಾಗಲೆ 4 ಬಾರಿ ನೋಟಿಸ್ ನೀಡಲಾಗಿದೆ. ಜ.17 ರಂದು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಜಾಗ ತೆರವುಗೊಳಿಸಲು 4 ದಿನ ಕಾಲಾವಕಾಶ ಪಡೆದಿದ್ದರು. 20 ದಿನಗಳಾದರೂ ಜಾಗ ಖಾಲಿ ಮಾಡದ ಕಾರಣ ಜಿಲ್ಲಾಧಿಕಾರಿಗಳ ಆದೇಶದಂತೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ರೆಹನ್ ಪಾಷಾ, ತಹಶೀಲ್ದಾರ್, ಹರಿಹರ
ಕಳೆದ ಹಲವು ದಶಕಗಳಿಂದ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಇತ್ತೀಚೆಗೆ ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅ ಧಿಕಾರಿಗಳು, ಪೊಲೀಸರು
ಯಾವುದೇ ನೋಟಿಸ್, ಮಾಹಿತಿ ನೀಡದೆ ಏಕಾಏಕಿ ಜೆಸಿಬಿ ವಾಹನದಿಂದ ನಮ್ಮ ಮನೆಗಳನ್ನು ಕೆಡವಿ ಹಾಕಿದ್ದಾರೆ. ನಿವಾಸಿಗಳ ಮೇಲೆ ಗಾಯಗಳಾಗುವಂತೆ ಹಲ್ಲೆ ಮಾಡಿದ್ದಾರೆ. ಮಹಿಳೆಯರ ಮೇಲೂ ದೌರ್ಜನ್ಯ ಎಸಗಿದ್ದಾರೆ.
ಬಸಪ್ಪ, ಗ್ರಾಮಸ್ಥ. ಬುಳ್ಳಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ