ಮಾತೆ ಮಾತು ಯಾರೂ ಕೇಳಲ್ಲ: ಶಾಮನೂರು
Team Udayavani, Apr 8, 2018, 6:25 AM IST
ದಾವಣಗೆರೆ: “ವೀರಶೈವ-ಲಿಂಗಾಯತರು ದಡ್ಡರಲ್ಲ, ಅವರು ಯಾರಧ್ದೋ ಮಾತು ಕೇಳಿ ಮತ ಹಾಕುವಂತಹವರಲ್ಲ’ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಮಾತೆ ಮಹಾದೇವಿ ಅವರು “ಲಿಂಗಾಯತರು ಕಾಂಗ್ರೆಸ್ಗೆ ಮತ ಹಾಕಿ’ ಎಂದು ಹೇಳಿದ್ದರ ಕುರಿತು ಶನಿವಾರ ಪ್ರತಿಕ್ರಿಯಿಸಿದ ಶಾಮನೂರು, ವೀರಶೈವ- ಲಿಂಗಾಯತರು ಎಲ್ಲಾ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕಮ್ಯುನಿಸ್ಟ್ ಎಲ್ಲಾ ರಾಜಕೀಯ ಪಕ್ಷಗಳಲ್ಲಿದ್ದಾರೆ. ಹೀಗಿರುವಾಗ ಯಾವುದೋ ಒಂದು ಪಕ್ಷಕ್ಕೆ ಮತ ಹಾಕಿ ಎಂದು ಹೇಳುವುದು ಸಮಂಜಸ ಅಲ್ಲ. ಹೇಳಿದರೂ ಅದು ಪ್ರಯೋಜನವಾಗಲ್ಲ. ವೀರಶೈವ ಲಿಂಗಾಯತರು ಆಲೋಚಿಸಿ, ಚಿಂತಿಸಿ ಯಾರಿಗೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸುವಷ್ಟು ಶಕ್ತರಾಗಿದ್ದಾರೆ. ಅವರು ಅತಿ ಬುದ್ಧಿವಂತರು. ಮಾತೆ ಮಹಾದೇವಿ ಹೇಳಿದಂತೆ ಆಗಲಿ, ಯಡಿಯೂರಪ್ಪ ಹೇಳಿದಂತೆ ಆಗಲಿ ಕೇಳ್ಳೋರಲ್ಲ ಎಂದರು.