ಕೃಷಿಯಾಧಾರಿತ ಮಾನ್ಯತೆ ದಾಲ್ ಉದ್ಯಮದ ನಿರೀಕ್ಷೆ
Team Udayavani, Sep 15, 2019, 9:42 AM IST
ಹುಬ್ಬಳ್ಳಿ: ದಾಲ್ಮಿಲ್ ಉದ್ಯಮವನ್ನು ಕೃಷಿಯಾಧಾರಿತ ಉದ್ಯಮವಾಗಿ ಪರಿಗಣಿಸಬೇಕೆಂಬುದು ಬಹುಕಾಲದ ಬೇಡಿಕೆ. ಈ ಹಿನ್ನೆಲೆಯಲ್ಲಿ ಉದ್ಯಮ ಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲು ಉದ್ಯಮಿಗಳು ಮುಂದಾಗಿದ್ದಾರೆ. ತಮ್ಮ ಬೇಡಿಕೆಗೆ ಆಶಾದಾಯಕ ಸ್ಪಂದನೆ ದೊರೆಕೀತು ಎಂಬ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಅಧಿಕ ದಾಲ್ಮಿಲ್ಗಳಿವೆ. ಈ ಪೈಕಿ ಕೆಲವು ಕಣ್ಮುಚ್ಚಿವೆ. ಸುಮಾರು 100ದಾಲ್ಮಿಲ್ಗಳು ಗಂಭೀರ ಸ್ಥಿತಿಗೆ ಸಿಲುಕಿವೆ. ಸುಮಾರು 200 ದಾಲ್ಮಿಲ್ಗಳು ಗಂಭೀರ ಸ್ಥಿತಿಯತ್ತ ಮುಖ ಮಾಡಿವೆ. ಸುಮಾರು ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ತೊಗರಿಯ ಮೌಲ್ಯವರ್ಧನೆ, ಸುಮಾರು 30-40 ಸಾವಿರ ಜನರಿಗೆ ಉದ್ಯೋಗ ಒದಗಿಸಿರುವ ದಾಲ್ಮಿಲ್ ಉದ್ಯಮ ಇಂದು ಸಂಕಷ್ಟ ಸ್ಥಿತಿ ಎದುರಿಸುವಂತಾಗಿದೆ. ಅದೇ ರೀತಿ ಮಹಾರಾಷ್ಟ್ರದ ಸುಮಾರು 700 ದಾಲ್ಮಿಲ್ಗಳ ಪೈಕಿ ಸುಮಾರು 500ರಷ್ಟು ಸಂಕಷ್ಟ ಸ್ಥಿತಿ ಎದುರಿಸುತ್ತಿವೆ ಎನ್ನಲಾಗಿದೆ.
ಉದ್ಯಮವಾದ್ರೆ ಲಾಭವೇನು?: ದೇಶದಲ್ಲಿ ದಾಲ್ಮಿಲ್ ಉದ್ಯಮವನ್ನು ಅಗ್ರೋ ಬೇಸ್ಡ್ ಉದ್ಯಮವಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದರೆ ಉದ್ಯಮ ಚೇತರಿಕೆಗೆ ಮಹತ್ವದ ಪ್ರಯೋಜನ ಆಗಲಿದೆ ಎಂಬುದು ದಾಲ್ಮಿಲ್ ಉದ್ಯಮಿಗಳ ಅನಿಸಿಕೆ.
ಪ್ರಸ್ತುತ ಉದ್ಯಮಿಗಳು ಬ್ಯಾಂಕ್ಗಳ ಮೂಲಕ ಸಾಲ ಪಡೆಯಬೇಕಾದರೆ ಶೇ.9ರಿಂದ 12 ಬಡ್ಡಿ ದರವಿದೆ. ಕೃಷಿಯಾಧಾರಿತ ಉದ್ಯಮವೆಂದು ಘೋಷಣೆಯಾದರೆ ಶೇ.4ರ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಉದ್ಯಮಿಗಳಿಗೆ ಶೇ.5ರಿಂದ 8 ಬಡ್ಡಿದರ ಉಳಿತಾಯವಾಗುತ್ತದೆ. ದಾಲ್ಮಿಲ್ ಉದ್ಯಮಕ್ಕೆ ಸಾಲ ನೀಡಿಕೆಗೆ ಬ್ಯಾಂಕ್ಗಳು ಹಿಂದೇಟು ಹಾಕುತ್ತಿವೆ. ಉದ್ಯಮ ಸಂಕಷ್ಟದಿಂದ ಅನೇಕರು ಸಕಾಲಕ್ಕೆ ಸಾಲ ಮರುಪಾವತಿಸದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಎಲ್ಲಿ -ಎಷ್ಟು ಉತ್ಪಾದನೆ: ಬೇಳೆಗಳ ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತ ಮಹತ್ವದ ಸ್ಥಾನ ಪಡೆದಿದೆ. ವಿಶ್ವದ ಒಟ್ಟು ತೊಗರಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.65ಕ್ಕಿಂತ ಹೆಚ್ಚು ಇದ್ದರೆ; ಮಾನ್ಮಾರ್ ಶೇ.17, ಮಾಲಾವಿ ಶೇ.8, ತಾಂಜೇನಿಯಾ ಶೇ.6, ಉಗಾಂಡಾ, ಕೀನ್ಯಾ ತಲಾ ಶೇ.2 ಪಾಲು ನೀಡುತ್ತಿವೆ. ಭಾರತದಲ್ಲಿ ಸುಮಾರು 3.5ರಿಂದ ನಾಲ್ಕು ಮಿಲಿಯನ್ ಹೆಕ್ಟೇರ್ನಲ್ಲಿ ತೊಗರಿ ಬೆಳೆಯಲಾಗುತ್ತಿದ್ದು, ಕಳೆದೆರಡು ದಶಕಗಳ ಸರಾಸರಿ ಅಂಕಿ-ಅಂಶದಂತೆ ವಾರ್ಷಿಕ 2.5ರಿಂದ 3ಮಿಲಿಯನ್ ಟನ್ ತೊಗರಿ ಉತ್ಪಾದಿಸಲಾಗುತ್ತಿದೆ. ದೇಶದಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ , ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ತೊಗರಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ.
ತೊಗರಿಗೆ ಹೆಸರುವಾಸಿ: ಇನ್ನು ಕಲಬುರಗಿ ಎಂದ ಕೂಡಲೇ ಹಲವರ ಕಣ್ಮುಂದೆ ಬರುವುದು ತೊಗರಿಬೇಳೆ ಹಾಗೂ ಅಲ್ಲಿನ ದಾಲ್ಮಿಲ್ ಉದ್ಯಮ. ಈ ಜಿಲ್ಲೆಯಲ್ಲಿ ಬೆಳೆಯುವ ಕೆಂಪು ತೊಗರಿಯಲ್ಲಿ ಹೇರಳ ಪೋಷಕಾಂಶ, ಕ್ಯಾಲ್ಸಿಯಂ, ಖನಿಜಾಂಶವಿದೆ. ಕಲಬುರಗಿ ಜಿಲ್ಲೆಯೊಂದರಲ್ಲೇ ಸುಮಾರು ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದೆ. ಕಲಬುರಗಿಯಲ್ಲಿ ಬೆಳೆಯುವ ತೊಗರಿ ಶ್ರೇಷ್ಠ ಗುಣಮಟ್ಟ ಹೊಂದಿದೆ. ಇತ್ತೀಚೆಗೆ ಜಿಯೋಗ್ರಾಫಿಕಲ್ ಇನ್ಡಿಕೇಶನ್(ಜಿಐ-ಟ್ಯಾಗ್) ಪಡೆದುಕೊಂಡಿದೆ. ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 9-10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದೆ.
ಬಿಟಿ ಹತ್ತಿಯತ್ತ ರೈತರು: ದಾಲ್ಮಿಲ್ಗಳ ಸಂಕಷ್ಟ ಸ್ಥಿತಿ, ತೊಗರಿಗೆ ಉತ್ತಮ ದರ ದೊರೆಯದ್ದರಿಂದ ಕಲಬುರಗಿ ಜಿಲ್ಲೆ ಸೇರಿದಂತೆ ಅನೇಕ ಕಡೆ ರೈತರು ತೊಗರಿ ಬೆಳೆಯಿಂದ ವಿಮುಖರಾಗಿ ಬಿ.ಟಿ.ಹತ್ತಿ ಇನ್ನಿತರ ಬೆಳೆಗಳಿಗೆ ಮಾರು ಹೋಗುತ್ತಿದ್ದಾರೆ. ದೇಶದಲ್ಲಿ 2018-19ರಲ್ಲಿ 40.02 ಮಿಲಿಯ ಟನ್ ತೊಗರಿ ಉತ್ಪಾದನೆ ಗುರಿಯಲ್ಲಿ, 3.68 ಮಿಲಿಯ ಟನ್ ಮಾತ್ರ ಉತ್ಪಾದನೆಯಾಗಿತ್ತು. ಕೇಂದ್ರ ಸರಕಾರ ತೊಗರಿಗೆ ಎಂಎಸ್ಪಿಯನ್ನು ಕೆ.ಜಿಗೆ 58.50ರೂ. ನಿಗದಿಪಡಿಸಿದ್ದರಿಂದ ಮಾರುಕಟ್ಟೆಯಲ್ಲಿ ತೊಗರಿಗೆ ಒಂದಿಷ್ಟು ದರ ಸಿಗುವಂತಾಗಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆ ಕೆಂಪು ತೊಗರಿಗೆ ಜಿಐ ಟ್ಯಾಗ್ ಮಾನ್ಯತೆಯಿಂದ ಸಹಜವಾಗಿ ತೊಗರಿಯ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂಬ ಆಶಾಭಾವನೆ ರೈತರದ್ದಾಗಿದ್ದು, ತೊಗರಿಬೇಳೆಗೂ ಉತ್ತಮ ದರ ದೊರೆಯಲಿದೆ ಎಂಬ ನಿರೀಕ್ಷೆ ದಾಲ್ಮಿಲ್ ಉದ್ಯಮಿಗಳದ್ದಾಗಿದೆ.
ದಾಲ್ ಉದ್ಯಮವನ್ನು ಅಗ್ರೋ ಬೇಸ್ಡ್ ಉದ್ಯಮವಾಗಿಸಬೇಕೆಂದು ಕಲಬುರಗಿಯ ಉದ್ಯಮಿಗಳು ಕೇಂದ್ರಕ್ಕೆ ಮನವಿಗೆ ಮುಂದಾಗಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ ಉದ್ಯಮ ಸಂಕಷ್ಟ ಮನವರಿಕೆ ಮಾಡಲು ನಿರ್ಧರಿಸಿದ್ದಾರೆ. ಕಲ್ಯಾಣ ಕರ್ನಾಟಕದ ಸಂವಿಧಾನ 371(ಜೆ)ಕಲಂದಡಿಯಾದರೂ ದಾಲ್ ಉದ್ಯಮಕ್ಕೆ ವಿಶೇಷ ಸೌಲಭ್ಯ ನೀಡಬೇಕೆಂಬ ಮನವಿಗೆ ಮುಂದಾಗಿದ್ದಾರೆ.
•ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್