ರಾಜಕಾರಣಿಗಳ ಚದುರಂಗದಾಟಕ್ಕೆ ಬೇಸ್ತುಬಿದ್ದ ರೈತರು
Team Udayavani, Aug 3, 2017, 12:56 PM IST
ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ಚದುರಂಗ ಆಟಕ್ಕೆ ರೈತರು ಬೇಸ್ತು ಬೀಳುವಂತಾಗಿದೆ. ಮಹದಾಯಿ, ಕಳಸಾ-ಬಂಡೂರಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಜನರಿಗೆ ನೀರು ಒದಗಿಸುವ ಇಚ್ಛಾಶಕ್ತಿಯ ಬದಲು ತಮ್ಮ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ತೊಡಗಿರುವುದೇ ಜಲಗಂಡಾಂತರ ಮುಂದುವರೆಯುವಂತಾಗಿದೆ.
ಮೂರ್ನಾಲ್ಕು ದಶಕಗಳಿಂದಲೂ ಮಹದಾಯಿ ವಿಚಾರ ಪ್ರಸ್ತಾಪ, ಆಗಾಗ ಹೋರಾಟ ನಡೆಯುತ್ತಿದ್ದರೂ, ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗೆ ಒತ್ತಾಯಿಸಿ ಗದಗ ಜಿಲ್ಲೆ ನರಗುಂದ ಹಾಗೂ ಧಾರವಾಡ ಜಿಲ್ಲೆ ನವಲಗುಂದಲ್ಲಿ ನಿರಂತರವಾಗಿ ನಡೆದ ಹೋರಾಟ ಎರಡು ವರ್ಷ ಕ್ರಮಿಸಿದೆ.
ನೀರಿಗಾಗಿ ರೈತರು ರಸ್ತೆ ತಡೆ, ಧರಣಿ, ಬಂದ್ ಆಚರಿಸಿದ್ದಾರೆ. ಪೊಲೀಸರಿಂದ ಲಾಠಿ ಏಟು ತಿಂದಿದ್ದಾರೆ, ಜೈಲು ಕಂಡು ಬಂದಿದ್ದಾರೆ. ಇಷ್ಟಾದರೂ ಹೋರಾಟಕ್ಕೆ ಕನಿಷ್ಠ ಸ್ಪಂದನೆಯ ಫಲ ದೊರೆತಿಲ್ಲ. ಗೋವಾ ಸಚಿವರು ಸಡ್ಡು ಹೊಡೆಯುವ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೂ, ರಾಜ್ಯದ ಜನಪ್ರತಿನಿಧಿಗಳು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನಾಚರಣೆಯಲ್ಲಿ ತೊಡಗಿದಂತಿದ್ದಾರೆ.
ಹನಿ ನೀರು ನೀಡೆವು: ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ದೇಶದಲ್ಲಿ ಕರ್ನಾಟಕವೆಂಬ ರಾಜ್ಯವೊಂದಿದೆ ಎಂಬುದನ್ನು ಪರಿಗಣಿಸಿದಂತೆಯೇ ಇಲ್ಲ ಎಂಬುದು ಎಂಬುದು ರೈತರ ಆಕ್ರೋಶದ ನುಡಿ. ಈ ಹಿಂದೆ ಗೋವಾ ಚುನಾವಣೆ ವೇಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಹದಾಯಿಯಿಂದ ಕರ್ನಾಟಕಕ್ಕೆ ಹನಿ ನೀರು ಬಿಡುವುದಿಲ್ಲ ಎಂದು ಹೇಳಿದ್ದರು.
ಇದನ್ನೇ ಬಿಜೆಪಿಯವರು ಕರ್ನಾಟಕದಲ್ಲಿ ಪ್ರಮುಖ ವಿಷಯ ವಾಗಿಸಿಕೊಂಡು ಕಾಂಗ್ರೆಸ್ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ದೊಡ್ಡ ಪ್ರಚಾರ ಮಾಡಿತ್ತು. ಇದೀಗ ಗೋವಾದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು, ಅಲ್ಲಿನ ಜಲ ಸಂಪನ್ಮೂಲ ಸಚಿವರು ಮಹದಾಯಿಯಿಂದ ಕರ್ನಾಟಕಕ್ಕೆ ಹನಿ ನೀರು ನೀಡುವುದಿಲ್ಲ ಎಂದು ಅಬ್ಬರಿಸಿದ್ದಾರೆ.
ರಾಜ್ಯದ ಬಿಜೆಪಿ ನಾಯಕರಿಗೆ ಇದು ದೇಶಪ್ರೇಮ ಹೇಳಿಕೆಯಂತೆ ಕೇಳಿದೆಯೋ ಗೊತ್ತಿಲ್ಲ. ಯಾವೊಬ್ಬ ನಾಯಕರೂ ಈ ಬಗ್ಗೆ ಗಟ್ಟಿ ಧ್ವನಿಯ ಆಕ್ಷೇಪ ವ್ಯಕ್ತಪಡಿಸಿಲ್ಲ. ಸೋನಿಯಾ ಗಾಂಧಿ ಹೇಳಿಕೆಗೆ ಕಾಂಗ್ರೆಸ್ನವರ ರೀತಿ ಬಿಜೆಪಿ ನಾಯಕರು ಸಮರ್ಥನೆಗಿಳಿಬಹುದೇನೋ?
78 ಸಾವಿರ ಟ್ವೀಟ್ಗೆ ಉತ್ತರವಿಲ್ಲ: ಮಹದಾಯಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ, ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಂಧಾನ ಮೂಲಕ ಇತ್ಯರ್ಥ ಪಡಿಸಬೇಕು, ಕಳಸಾ-ಬಂಡೂರಿ ನಾಲಾ ಮೂಲಕ ಮಧ್ಯಂತರ ಪರಿಹಾರವಾಗಿ ಕನಿಷ್ಠ 7.56 ಟಿಎಂಸಿ ಅಡಿಯಷ್ಟು ನೀರು ನೀಡಿಕೆಗೆ ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿ ನವಲಗುಂದ ತಾಲೂಕು ಇನ್ನಿತರ ಕಡೆಯ ರೈತರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸುಮಾರು 78 ಸಾವಿರ ಟ್ವೀಟ್ ಮಾಡಿದ್ದು, ಪ್ರಧಾನಿ ಕಚೇರಿಗೂ ಮನವಿ ಸಲ್ಲಿಸಿದ್ದಾರೆ. ಕೆಲವರು ನೀರು ಕೊಡದಾಗದಿದ್ದರೆ ದಯಾಮರಣ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.
ಮನ್ಕೀ ಬಾತ್ನಲ್ಲಿ ಹನಿ ನೀರು ವ್ಯರ್ಥ ಮಾಡಬೇಡಿ ಎಂದು, ರೈತರ ಕಾಳಜಿಗೆ ನಾವಿದ್ದೇವೆಂದು ಹೇಳುವ ಪ್ರಧಾನಿಯವರು ಮಾತ್ರ ನಮ್ಮ 78 ಸಾವಿರ ಟ್ವಿಟ್, ಮನವಿ ಯಾವುದಕ್ಕೂ ಕನಿಷ್ಠ ಸ್ಪಂದಿಸುವ, ಪ್ರತಿಕ್ರಿಯಿಸುವ ಕಾರ್ಯ ಮಾಡಿಲ್ಲ ಎಂಬುದು ನವಲಗುಂದ ತಾಲೂಕಿನ ಅನೇಕರ ಆರೋಪ.
ಕೇಂದ್ರ ಸರಕಾರ ಮಹದಾಯಿ ನ್ಯಾಯಾಧಿಕರಣದ ಅವಧಿಯನ್ನು ಮತ್ತೂಮ್ಮೆ ಒಂದು ವರ್ಷದವರೆಗೆ ವಿಸ್ತರಿಸಿದೆ. ಈ ಬಗ್ಗೆ ರಾಜ್ಯ ಸರಕಾರ ತೀವ್ರ ಆಕ್ಷೇಪ ಸಲ್ಲಿಸಬೇಕಿತ್ತು ಅದನ್ನು ಮಾಡಿಲ್ಲ ಎಂಬುದು ಅನೇಕ ರೈತರ ಬೇಸರವಾಗಿದೆ. ಮಹದಾಯಿ ಹೆಸರಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದು,
ನಂತರ ಅದನ್ನು ನಿರ್ಲಕ್ಷಿಸುವ ಕಾರ್ಯವನ್ನು ಅನೇಕ ಜನಪ್ರತಿನಿಧಿಗಳು ಮಾಡಿದ್ದು, ಇದು ನಿಲ್ಲಬೇಕು. ಗೋವಾದ ಮೊಂಡುತನಕ್ಕೆ ಸ್ಪಷ್ಟ ರೀತಿಯ ಪ್ರತಿರೋಧ ತೋರುವ, ಸಂಧಾನಕ್ಕೆ ಪ್ರಧಾನಿ ಮೇಲೆ ಪ್ರಭಾವ ಬೀರುವ ಹಾಗೂ ನ್ಯಾಯಾಧಿಕರಣ ಮುಂದೆ ಸಮರ್ಥ ವಾದ ಮಂಡನೆ ಕಾರ್ಯ ಆಗಬೇಕು ಎಂಬುದು ರೈತರ ಹಕ್ಕೊತ್ತಾಯವಾಗಿದೆ.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ